ಹಾಸನ: ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಭೂಮಿಯನ್ನು ಕಬಳಿಯಲು ಹುನ್ನಾರ ನಡೆಸುತ್ತಿದ್ದು, ಈ ಹಿಂದೆ ಇದ್ದ ಡಿಸಿ ಒಬ್ಬ ಕಳ್ಳ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹರಿಹಾಯ್ದಿದ್ದಾರೆ.
ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಭೂಮಿಯನ್ನು ಕಬಳಿಯಲು ಹುನ್ನಾರ ನಡೆಸುತ್ತಿದ್ದಾರೆ. ಹಿಂದಿನ ಡಿಸಿ ಹಾಗೂ ಶಾಸಕರು ಅದು ಫಲವತ್ತಾದ ಭೂಮಿ. ಅಷ್ಟು ಜಾಗ ಅವಶ್ಯಕತೆ ಇಲ್ಲ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಾಸನದಲ್ಲಿದ್ದ ಡಿಸಿಯೊಬ್ಬ ಕಳ್ಳ, ಈಗ ಬೆಂಗಳೂರಿಗೆ ಹೋಗಿದ್ದಾನೆ. ನನ್ನ ಕೈಗೆ ಸಿಗದೆ ಎಲ್ಲೂ ಹೋಗಲ್ಲ ಅವನು. ಇಲ್ಲಿ 11 ಎಕರೆ ಜಾಗ ನುಂಗಿ 250 ಎಕರೆ ಹೊಡೆಯಲು ಹೊರಟಿದ್ದಾನೆ. ಕರಾಬ್ ಡಿಸಿ ಆತ. ಅವನನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಿಸಿದವರಿಗೆ ಅವಾರ್ಡ್ ಕೊಡಬೇಕು. ಜಿಲ್ಲೆಗೆ ಅತಿ ಹೆಚ್ಚು ಬಾರ್ ಲೈಸೆನ್ಸ್ ಕೊಟ್ಟಿದ್ದು, ಒಂದು ಲೈಸೆನ್ಸ್ಗೆ ಅವರು ಐವತ್ತು ಲಕ್ಷ ಲಂಚ ಪಡೆದಿದ್ದಾರೆ. ಈಗ ಇವನನ್ನು ಬೆಂಗಳೂರಿನ ಕೆಐಎಡಿಬಿಯಲ್ಲಿ ಫಲವತ್ತಾದ ಜಾಗದಲ್ಲಿ ಕೂರಿಸಿದ್ದಾರೆ ಎಂದು ನಿರ್ಗಮಿತ ಜಿಲ್ಲಾಧಿಕಾರಿಯೊಬ್ಬರ ವಿರುದ್ದ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನವರು ಫೇಕ್ ಇಶ್ಯು ಕ್ರಿಯೇಟ್ ಮಾಡ್ತಿದ್ದಾರೆ- ದೋಸೆ ವಿವಾದಕ್ಕೆ ಸೂರ್ಯ ಸ್ಪಷ್ಟನೆ
ಹಾಸನಕ್ಕೆ ವಿಮಾನ ನಿಲ್ದಾಣ ತಂದಿದ್ದು ನನ್ನ ಐಡಿಯಾಲಜಿ. ಜಿಲ್ಲಾ ಕೇಂದ್ರದಲ್ಲಿ ಲೂಟಿ ನಡೆಯುತ್ತಿದೆ. ಇದು ಲೂಟಿ ಹೊಡೆಯುವವರ ಐಡಿಯಾಲಜಿ ಎಂದು ಶಾಸಕ ಪ್ರೀತಂಗೌಡ ಹೆಸರು ಹೇಳದೆ ಪರೋಕ್ಷವಾಗಿ ಕುಟುಕಿದರು.
ಮೂಲ ಯೋಜನೆಯಂತೆ ವಿಮಾನ ನಿಲ್ದಾಣ ನಿರ್ಮಾಣವಾದರೆ 6,500 ಜನರಿಗೆ ಉದ್ಯೋಗ ಸಿಗುತ್ತಿತ್ತು. ಇದನ್ನು ನಿಲ್ಲಿಸಿ ಹೊಸದಾಗಿ ವಿಮಾನ ನಿಲ್ದಾಣ ಮಾಡುತ್ತಿದ್ದಾರೆ. ಕಾಮಗಾರಿ ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ, ಗುತ್ತಿಗೆದಾರನಿಗೆ ಹೇಳಿದ್ದೇನೆ. ಆ ಕಳ್ಳ ಹೋದ್ನಲ್ಲ ಅವನು, ನಾಚಿಕೆ ಮರ್ಯಾದೆ ಇಲ್ಲ. ಅವನ ಜೊತೆ ಸೇರಿಕೊಂಡು ಇವನು ಅಷ್ಟು ಭೂಮಿ ಅವಶ್ಯಕತೆ ಇಲ್ಲ ಎಂದು ಪತ್ರ ಬರೆಯುತ್ತಾನೆ ಎಂದು ಶಾಸಕರ ವಿರುದ್ಧ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ಬಗ್ಗೆ ಬಿಗ್ ಬುಲೆಟಿನ್ನಲ್ಲಿ ಪ್ರಸ್ತಾಪ – ಸಿದ್ದರಾಮಯ್ಯ ಪ್ರಶಂಸೆ
ಇಷ್ಟು ದೊಡ್ಡ ವಿಮಾನ ನಿಲ್ದಾಣ ಯಾವ ಉದ್ದೇಶಕ್ಕೆ ಮಾಡಿದ್ದೇವೆ ಎಂದು ಶಾಸಕರಿಗೆ ಏನು ಗೊತ್ತಿದೆ. ಒಬ್ಬ ಮಾಜಿ ಪ್ರಧಾನಿ ಶ್ರಮವಹಿಸಿ ತಂದಿರುವ ಯೋಜನೆ ಇದು. ಮೂಲ ಯೋಜನೆಯಂತೆ ವಿಮಾನ ನಿಲ್ದಾಣ ಮಾಡಲಿ. ಇಲ್ಲವಾದರೆ ಕಾಮಗಾರಿ ನಿಲ್ಲಿಸಲಿ, ಹಾಗೆ ಬಿದ್ದಿರುತ್ತೆ. ಅಧಿಕಾರಕ್ಕೆ ಬಂದಾಗ ನಾವು ಮಾಡುತ್ತೇವೆ ಎಂದರು.
ಭೂಮಾಫಿಯದವರ ಜೊತೆ ಸೇರಿಕೊಂಡು ಭೂಮಿ ಕಬಳಿಸಲು ಹೊರಟಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಆರ್ಟಿಐನಲ್ಲಿ ಅರ್ಜಿ ಹಾಕಿದಾಗ ನನಗೆ ನಿನ್ನೆ ಗೊತ್ತಾಗಿದೆ. ಹಳೆಯ ಡಿಸಿ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಮುಚ್ಚಿಟ್ಟಿದ್ದು, ಗುತ್ತಿಗೆದಾರನಿಂದ ಐದು ಕೋಟಿ ಲಂಚ ಪಡೆದಿದ್ದಾರೆ. ಎಲ್ಲೆಲ್ಲಿ ಜಾಗ ಇದೆ ಆ ಜಾಗ ಕಬಳಿಸುತ್ತಿದ್ದಾರೆ. 2008 ರಿಂದ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡಿದ್ದಾರೆ. ಹಾಸನ ಜಿಲ್ಲೆಯ ಎಲ್ಲಾ ಯೋಜನೆಗಳನ್ನು ನಿಲ್ಲಿಸಿದ್ದಾರೆ. ದೇವೇಗೌಡರು ಈಗಾಗಲೇ ಪತ್ರ ಬರೆದಿದ್ದಾರೆ. ನಾನು, ಎಂಪಿ ಹಾಗೂ ಜಿಲ್ಲೆಯ ಎಲ್ಲಾ ಜೆಡಿಎಸ್ ಶಾಸಕರು ಸರ್ಕಾರಕ್ಕೆ ಪತ್ರ ಬರೆಯಲಿದ್ದೇವೆ ಎಂದು ತಿಳಿಸಿದರು.