– ಅರುಣ್ ಸಿಂಗ್ 30 ಸೀಟ್ ಗೆಲ್ಲಿಸಲಿ
ಹಾಸನ: 2023ರವರೆಗೆ ಇವರೇ ಇದ್ದರೆ ಜೆಡಿಎಸ್ ಮುಳುಗುತ್ತೋ ಅಥವಾ ಯಾವುದು ಮುಳುಗುತ್ತೋ ನೋಡೋಣ. ಅರುಣ್ ಸಿಂಗ್ ಅವರನ್ನೇ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ಮುಂದುವರಿಸಬೇಕೆಂದು ಕೇಂದ್ರ ನಾಯಕರನ್ನು ಮನವಿ ಮಾಡುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ 150 ಸೀಟ್ ಗೆಲ್ಲಿಸುತ್ತೇನೆ ಎನ್ನುತ್ತಿದ್ದಾರೆ. ಯಡಿಯೂರಪ್ಪ ಜೊತೆ ಸೇರಿ ಅರುಣ್ ಸಿಂಗ್ ಇನ್ನೂ 30 ಸೀಟ್ ಹೆಚ್ಚು ಗೆಲ್ಲಿಸಲಿ. ಈಗಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅವರು 2023ರವರೆಗೆ ಇದ್ದು ಜೆಡಿಎಸ್ ಮುಳುಗಿಸಲಿ. ನಾವೇನು ಬಿಜೆಪಿಗೆ ಬರುತ್ತೀವಿ ಎಂದು ಅರ್ಜಿ ಹಾಕಿಕೊಂಡಿದ್ದೆವಾ? ಈ ಕುಟುಂಬ ಅಧಿಕಾರಕ್ಕೆ ಆಸೆ ಪಡುವುದಿಲ್ಲ. ಕಳೆದ ಲೋಕಸಭೆ ಚುನಾವಣೆ ದಿನಾಂಕ ಘೋಷಣೆ ಹಿಂದಿನ ದಿನ, ನೀನೇ ಐದು ವರ್ಷ ಮುಖ್ಯಮಂತ್ರಿಯಾಗಿರು ಎಂದು ಪ್ರಧಾನಮಂತ್ರಿ ಹೇಳಿದ್ದರು. ಕುಮಾರಸ್ವಾಮಿ ರಾಜೀನಾಮೆ ಕೊಟ್ಟು ಮುಂದುವರಿಯಬಹುದಿತ್ತು. ಇದನ್ನು ರಾಜ್ಯ ಉಸ್ತುವಾರಿ ವಿಚಾರಣೆ ಮಾಡಲಿ. ಮುಳುಗುತ್ತೆ ಅನ್ನುವುದು ಲೂಸ್ ಟಾಕ್ ಅಲ್ವಾ. ಮುಳುಗುತ್ತೆ ಅಂತಾ ಭವಿಷ್ಯ ಹೇಳಲು ಇವರು ಯಾರು ಎಂದು ಪ್ರಶ್ನಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡಲ್ಲ ಎಂದಿದ್ದರು. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ, ಸಿಎಂ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದಾರೆ. 2023 ಕ್ಕೆ ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ದೇವೇಗೌಡರು ಬದುಕಿರುವವರೆಗೂ ಪಕ್ಷ ಮುಳುಗಲು ಸಾಧ್ಯವಿಲ್ಲ ಎಂದು ರೇವಣ್ಣ ಕಿಡಿಕಾರಿದ್ದಾರೆ. ನಾನು ಯಾವತ್ತು ಬೊಮ್ಮಾಯಿ ಮನೆ ಬಾಗಿಲಿಗೆ ಹೋಗಿಲ್ಲ. ಅವರೇ ಬಾಯಿಬಿಟ್ಟು ಸಪೋರ್ಟ್ ಮಾಡಿ ಎಂದು ಹೇಳಿದಾಗ ಬೆಂಬಲ ನೀಡುವುದು ತಪ್ಪಾ? ಕಷ್ಟ ಬಂದಾಗ ನಿಮಗೆ ಸಹಾಯ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ ಎಂದರು.
ಜಿ.ಟಿ.ದೇವೇಗೌಡರಿಗೆ ಭಗವಂತ ಒಳ್ಳೆಯದು ಮಾಡಲಿ
ಜಿ.ಟಿ.ದೇವೇಗೌಡರು ದೊಡ್ಡವರಿದ್ದಾರೆ. ಭಗವಂತ ಅವರಿಗೆ ಒಳ್ಳೆಯದು ಮಾಡಲಿ. ಅವರಿಗೆ ಕುಮಾರಣ್ಣ ದೊಡ್ಡ ಹುದ್ದೆ ಕೊಡಲು ಆಗಲಿಲ್ಲ ಎಂದು ವ್ಯಂಗ್ಯವಾಡಿದ್ರು. ಜಿಟಿಡಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯ ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ. ಹೈಕಮಾಂಡ್ ಗೆ ಹೇಳಿ ಬೇಗ ಅವರಿಗೆ ಹುದ್ದೆ ಕೊಡಲಿ. ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿರಲಿ. ಅವರು ರಾಷ್ಟ್ರೀಯ ಪಕ್ಷಕ್ಕೆ ಸೇರುತ್ತಿದ್ದಾರೆ ಎಂದರು. ಇದನ್ನೂ ಓದಿ: ಜೆಡಿಎಸ್ ಮುಳುಗುತ್ತಿದೆ, ಬಿಜೆಪಿ ಬೆಳೆಯುತ್ತಿದೆ : ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್
ಬಿಜೆಪಿ ನಾಯಕರು ಕುಮಾರಸ್ವಾಮಿ ಫೋಟೋ ಹಿಡಿಯಬೇಕು. ಕಾಂಗ್ರೆಸ್ ನವರು 2007 ರಲ್ಲಿ ಯಾವ ರೀತಿ ನಡೆದುಕೊಂಡರು. ಕೆಲವು ಸನ್ನಿವೇಶದಲ್ಲಿ ಕುಮಾರಣ್ಣ ನಿರ್ಣಯ ತಗೆದುಕೊಂಡರು. ಅದರಲ್ಲಿ ಕೆಲವು ತಪ್ಪು ಇರುತ್ತೆ. ಕುಮಾರಣ್ಣ ಇರಲಿಲ್ಲ ಅಂದಿದ್ದರೆ ಬಿಜೆಪಿ ಎಲ್ಲಿ ಅಧಿಕಾರಕ್ಕೆ ಬರುತ್ತಿತ್ತು. ಜೆಡಿಎಸ್ ಪಕ್ಷ ಸೋಲು ಗೆಲುವು ಎರಡನ್ನು ಕಂಡಿದೆ. ನೋವು ನಲಿವನ್ನು ಅನುಭವಿಸಿದೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಕುಮಾರಸ್ವಾಮಿ ಗೌರವ ಕೊಡುವುದನ್ನು ತಂದೆಯಿಂದ ಕಲಿಯಲಿ: ಅರುಣ್ ಸಿಂಗ್