ಬೆಂಗಳೂರು: ಬೆಂಗಳೂರಲ್ಲಿ ಮನೆ ಇದ್ರೂ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣನವರು ಪ್ರತಿನಿತ್ಯ ಹೊಳೆನರಸೀಪುರಕ್ಕೆ ಹೋಗಿ ಬರುತ್ತಿರುವುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಿಂದ ಹೊಳೆನರಸೀಪುರ ಸುಮಾರು 170 ಕಿಮೀ ದೂರವಿದೆ. ಆದರೂ ಪ್ರತಿದಿನ ರಾತ್ರಿಯಾಗುತ್ತಿದ್ದಂತೆಯೇ ಹೊಳೆನರಸೀಪುರಕ್ಕೆ ಹೋಗುವ ರೇವಣ್ಣ ಬೆಳಗಾಗುವಷ್ಟರಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಪುನಃ ಬೆಂಗಳೂರಿಗೆ ಹಿಂದಿರುಗುತ್ತಿರುವುದು ಈಗ ಎಲ್ಲರ ಗಮನ ಸೆಳೆದಿದೆ.
ಸಚಿವ ರೇವಣ್ಣರವರು ಜ್ಯೋತಿಷ್ಯವನ್ನು ಅತಿಯಾಗಿ ನಂಬುತ್ತಾರೆ. ಹಾಗಾಗಿ ಜ್ಯೋತಿಷಿಯೊಬ್ಬರು ಅವರಿಗೆ ಸರ್ಕಾರಿ ಬಂಗಲೆ ಸಿಗುವವರೆಗೂ ಹೊಳೆನರಸೀಪುರದಲ್ಲೇ ಉಳಿದುಕೊಳ್ಳದಂತೆ ಸಲಹೆ ನೀಡಿದ್ದಾರೆ. ಹೀಗಾಗಿ ರೇವಣ್ಣ ಪ್ರತಿನಿತ್ಯ 170 ಕಿ.ಮೀ ಸಂಚರಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮಾತನ್ನು ಅಲ್ಲಗಳೆದಿರುವ ರೇವಣ್ಣರ ಆಪ್ತ ಬಳಗ ಜನರ ಕಷ್ಟ ಕಾರ್ಪಣ್ಯಗಳನ್ನು ಕೇಳಲು ಹಾಗೂ ಜನರ ಅಹವಾಲು ಸ್ವೀಕರಿಸಲು ರೇವಣ್ಣ ಹೀಗೆ ಬೆಂಗಳೂರಿಂದ ಹೊಳೆನರಸೀಪುರಕ್ಕೆ ಬರುತ್ತಾರೆ ಎಂದು ಹೇಳಿದ್ದಾರೆ.
ಈಗಾಗಲೇ ಸಚಿವ ರೇವಣ್ಣ ಕೋರಿಕೆಯಂತೆ ಅವರಿಗೆ ಬೆಂಗಳೂರಿನ ಶಿವಾನಂದ ವೃತ್ತದ ಬಳಿ ಇರುವ, ಎಚ್ ಸಿ ಮಹದೇವಪ್ಪನವರು ವಾಸವಾಗಿದ್ದ ವಸತಿಗೃಹವನ್ನು ನೀಡಲಾಗಿದೆ. ಆದರೆ ಅವರು ಮನೆ ಖಾಲಿ ಮಾಡುವವರೆಗೆ ಬೆಂಗಳೂರಿನ ಅವರ ಮನೆಯಲ್ಲಿಯೇ ವಾಸ ಮಾಡಬಹುದು. ಆದರೆ ರೇವಣ್ಣ ಮಾತ್ರ ಪ್ರತಿನಿತ್ಯ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಪ್ರಯಾಣ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ರಾತ್ರಿ ಎಷ್ಟೇ ಹೊತ್ತಾದರೂ ರೇವಣ್ಣ ಹೊಳೆನರಸೀಪುರಕ್ಕೆ ತಪ್ಪದೇ ಹೋಗುತ್ತಾರೆ. ಬೆಳಗಿನ ಜಾವ 6 ಗಂಟೆಗೆ ಎದ್ದು ಸಾರ್ವಜನಿಕರ ಅಹವಾಲುಗಳನ್ನು ಕೇಳಲು ತಯಾರಾಗುತ್ತಾರೆ. ಹೊಳೆನರಸೀಪುರ ಕ್ಷೇತ್ರ ಮಾತ್ರವಲ್ಲದೇ ಹಾಸನ ಜಿಲ್ಲೆಯ ಮೂಲೆ ಮೂಲೆ ಗಳಿಂದಲೂ ಸಾವಿರಾರು ಜನ ಅವರ ಮನೆಗೆ ಬರುತ್ತಾರೆ. ಅವರೆಲ್ಲರ ಅಹವಾಲು ಸ್ವೀಕರಿಸಿದ ನಂತರವೇ ರೇವಣ್ಣ ಮತ್ತೆ ಬೆಂಗಳೂರಿಗೆ ಮರಳುತ್ತಾರೆ. ಕ್ಷೇತ್ರದ ಎಲ್ಲ ಜನತೆಯ ಅಹವಾಲು ಕೇಳಬೇಕೆಂಬುದೇ ಈ ಪ್ರಯಾಣಕ್ಕೆ ಪ್ರಬಲ ಕಾರಣ ಎಂದು ರೇವಣ್ಣನವರ ಆಪ್ತ ಮೂಲಗಳು ತಿಳಿಸಿವೆ. ಇದನ್ನು ಓದಿ: ಸೀಟ್ ವಾಸ್ತುಪ್ರಕಾರ ಸರಿಯಾಗಿದೆ, ಮುಂದೆ ಬನ್ನಿ: ನಗೆಗಡಲಲ್ಲಿ ತೇಲಿಸಿದ ಸ್ಪೀಕರ್
ಇದೇ ಮೊದಲಲ್ಲ:
ಈ ಹಿಂದೆ ಬಿಜೆಪಿ-ಜೆಡಿಎಸ್ 20-20 ಸರ್ಕಾರ ಇದ್ದಾಗಲೂ ಸಹ ಸಚಿವರಾಗಿದ್ದ ರೇವಣ್ಣ ಹಾಸನದಿಂದ ಬೆಂಗಳೂರಿಗೆ ಹೋಗಿ ಪುನಃ ಮಧ್ಯಾಹ್ನ ಹಾಸನಕ್ಕೆ ವಾಪಸಾಗುತ್ತಿದ್ದರು. ಮತ್ತೆ ಸಂಜೆ ವೇಳೆಗೆ ಬೆಂಗಳೂರಿಗೆ ತೆರಳುತ್ತಿದ್ದ ರೇವಣ್ಣ, ರಾತ್ರಿ ವೇಳೆಗೆ ಮತ್ತೆ ಹಾಸನಕ್ಕೆ ಬಂದು ವಾಸ್ತವ್ಯ ಹೂಡುತ್ತಿದ್ದರು. ಆದರೆ ಇದೀಗ ಎಲ್ಲವೂ ಉಲ್ಟಾಹೊಡೆದಂತೆ ಕಾಣುತ್ತಿದೆ. ಒಂದು ವೇಳೆ ಜ್ಯೋತಿಷಿಗಳ ಮಾತೇ ರೇವಣ್ಣ ಪ್ರವಾಸಕ್ಕೆ ಕಾರಣ ಎಂದಾದಲ್ಲಿ ಮಹದೇವಪ್ಪನವರು ಸರ್ಕಾರಿ ವಸತಿ ಗೃಹ ಖಾಲಿ ಮಾಡುವವರೆಗೂ ರೇವಣ್ಣನವರು ಪ್ರತಿದಿನ ಪ್ರಯಾಣ ಮಾಡುವುದು ತಪ್ಪುವುದಿಲ್ಲ ಎನ್ನಲಾಗುತ್ತಿದೆ.