ಮಂಡ್ಯ: ಬಕಾಸುರರ ರೀತಿ ನುಂಗೋದೇ ಅಭಿವೃದ್ಧಿಯಾ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.
ಜೆಡಿಎಸ್ನಲ್ಲಿ ಶಂಖ ಊದಲೂ ಜನರಿಲ್ಲ ಎಂಬ ಹೇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಶಂಖ ಊದಲು ಜನ ಕರೆದುಕೊಂಡು ಬರಬೇಕಿಲ್ಲ. ಕೇವಲ ಶಂಖ ಊದುವುದರಿಂದ ಏನೂ ಆಗಲ್ಲ. ನೀವು ಶಂಖ ಊದಲು ಜನ ಇಟ್ಟುಕೊಂಡಿದ್ದೀರಿ. ನೀವು ಶಂಖ ಊದಿಕೊಳ್ರಪ್ಪ. ಆದರೆ ಈಗ ಶಂಖ ಊದುವ ಕಾಲ ಅಲ್ಲ, ಕೆಲಸ ಮಾಡಿ. ನಾವು ಅಧಿಕಾರದಲ್ಲಿ ಕೆಲವೇ ದಿನ ಅಧಿಕಾರದಲ್ಲಿ ಇದ್ದರೂ, ಜನರ ಮನಸ್ಸಲ್ಲಿ ಉಳಿಯುವ ಕೆಲಸ ಮಾಡಿದ್ದೇವೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಐಎಎಫ್ ಗ್ರೂಪ್ ಕ್ಯಾಪ್ಟನ್ ಅಭಿನಂದನ್ಗೆ ವೀರ ಚಕ್ರ ಪ್ರಶಸ್ತಿ
ನೀವು ಮಾತ್ರ ಅಭಿವೃದ್ಧಿ ಮಾಡಿಕೊಂಡಿದ್ದೀರಿ ಅಷ್ಟೇ. ನಿಮ್ಮ ಹಿಂದೆ ಝಂಡ ಹಿಡಿದು ಬರುವವರ ಅಭಿವೃದ್ಧಿ ಮಾಡಿದ್ದೀರಿ. ಆದರೆ ನಿಮ್ಮನ್ನ ಅಧಿಕಾರದಲ್ಲಿ ಕೂರಿಸಿದವರ ಅಭಿವೃದ್ಧಿ ಮಾಡಿದ್ದೀರ ಹೇಳಿ. ಬಕಾಸುರರ ರೀತಿ ನುಂಗೋದೇ ಅಭಿವೃದ್ಧಿಯ? ನಾನು ಏನು ಅಭಿವೃದ್ಧಿ ಮಾಡಿದ್ದೀನಿ ಎಂಬುದಕ್ಕೆ ದಾಖಲೆ ಇಟ್ಟುಕೊಂಡಿದ್ದೇನೆ. ನೀವು ಏನು ಅಭಿವೃದ್ಧಿ ಮಾಡಿದ್ದೀರಿ ಜನರ ಮುಂದೆ ಹೇಳಿ ಎಂದು ಸವಾಲು ಹಾಕಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ನಿಂದ ಬಿಜೆಪಿ ಬೆಂಬಲ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ನಮಗೆ ಯಾರ ಬೆಂಬಲವೂ ಬೇಡ ಅಂತಾರೆ. ಅದೇ ರೀತಿ ಜೆಡಿಎಸ್ನಿಂದ ಬೆಂಬಲ ಸಿಗುತ್ತೆ ಅಂತಲೂ ಹೇಳುತ್ತಾರೆ. ಇದರಿಂದಲೇ ಜೆಡಿಎಸ್ ಇನ್ನೂ ಪ್ರಸ್ತುತದಲ್ಲಿ ಇದೆ ಎಂಬುದನ್ನು ತೋರಿಸುತ್ತದೆ. ಆದರೆ ಇಲ್ಲಿವರೆಗೆ ಆ ವಿಚಾರ ನನ್ನ ಬಳಿ ಬಂದಿಲ್ಲ. ಬಂದ ನಂತರ ಜೆಡಿಎಸ್ ನಿಲುವಿನ ಬಗ್ಗೆ ಮಾತನಾಡುವೆ ಎಂದು ಉತ್ತರಿಸಿದರು. ಇದನ್ನೂ ಓದಿ: ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ ಪತಿರಾಯ ಈಗ ಪೊಲೀಸರ ಅತಿಥಿ
ಸಂದೇಶ್ ನಾಗರಾಜ್ ಅವರಿಗೆ ಜೆಡಿಎಸ್ ಬಾಗಿಲು ಕ್ಲೋಸ್ ಆಗಿದೆ. ಅವರು ಪಕ್ಷ ಬಿಟ್ಟು ಈಗಾಗಲೇ ಮೂರು ವರ್ಷ ಕಳೆದಿದೆ. ನನ್ನನ್ನು ಅವರು ಸಂಪರ್ಕ ಮಾಡಿಲ್ಲ, ನಾನು ಮಾಡಲ್ಲ. ಇಂದು ಸಂಜೆ ಜೆಡಿಎಸ್ ಸಭೆ ಇದೆ ಅಲ್ಲಿ ಅಭ್ಯರ್ಥಿ ತೀರ್ಮಾನ ಆಗುತ್ತೆ. ಸಂದೇಶ್ ನಾಗರಾಜ್ ಬೇರೆ ಯಾರ ಜೊತೆ ಸಂಪರ್ಕ ಇದ್ದಾರೆ ಗೊತ್ತಿಲ್ಲ. ಅವರು ಯಾರನ್ನ ಸಂಪರ್ಕ ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು.