ಮೈಸೂರು: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕಾಂಗ್ರೆಸ್ ಸರ್ಕಾರದ ಕೀಳು ಮಟ್ಟದ ಚಿಂತನೆಯಾಗಿದೆ. ಇವರ ನಿರ್ಧಾರದಿಂದ ಇತರೆ ಜಾತಿಗಳಿಗೆ ಪ್ರಚೋದನೆ ಆಗಿ, ನಾಳೆ ಕುರುಬರು, ನಾಳಿದ್ದು ಒಕ್ಕಲಿಗರು ಪ್ರತ್ಯೇಕ ಧರ್ಮ ಕೇಳುತ್ತಾರೆ ಅಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಎಚ್ಡಿಕೆ ಇಂದು ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ಮೈಸೂರಿನಲ್ಲಿ ನಡೆಸುತ್ತಿರುವ ಎರಡನೇ ದಿನದ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದರು. ನಮ್ಮ ಪಕ್ಷದ ಇತರೆ ನಾಯಕರು ನೀಡಿರುವ ಹೇಳಿಕೆ, ಅವರ ವೈಯಕ್ತಿಕವಾಗಿದೆ. ಜೆಡಿಎಸ್ ಪಕ್ಷವು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಸಮಾಜ ಒಡೆಯುವ ಕೆಲಸ ಬೇಡ ಎನ್ನುವ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಮೋದಿ, ಶಾ, ಬಿಎಸ್ವೈ ಕಟ್ಟಿಹಾಕಲು ಸಿಎಂ ಕಟ್ಟುತ್ತಿದ್ದಾರೆ LDMK ಸೇನೆ!
ಇದೇ ವೇಳೆ ಸರ್ಕಾರದ ಮಂತ್ರಿಗಳ ಕೆಲಸ ಧರ್ಮ ಪ್ರಚಾರ ಮಾಡುವುದಲ್ಲ ಅದರ ಬದಲಿಗೆ ಬರದ ಕಡೆ ಗಮನ ಹರಿಸಲಿ ಅಂತ ಲಿಂಗಾಯಿತ ಧರ್ಮ ಪ್ರಚಾರದ ಪರವಾಗಿರುವ ಸಚಿವರಿಗೆ ಟಾಂಗ್ ನೀಡಿದರು.
ಎರಡನೇ ದಿನವೂ ಪ್ರತಿಭಟನೆ ಮುಂದುವರಿಸಿದ ಪ್ರತಿಭಟನಾಕಾರರು ಇಂದು ಕಾಡಾ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರು. ಮುತ್ತಿಗೆ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು, ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಶಾಸಕ ಸಾರಾ ಮಹೇಶ್ ಗೆ ಅನಾರೋಗ್ಯ ಉಂಟಾಗಿದ್ದು. ಪ್ರತಿಭಟನಾ ಸ್ಥಳಕ್ಕೆ ವೈದ್ಯರು ಆಗಮಿಸಿ, ಶಾಸಕ ಸಾರಾ ಮಹೇಶ್ ಆರೋಗ್ಯ ಪರಿಸ್ಥಿತಿ ತಪಾಸಣೆ ಮಾಡಿದರು.
ಇದನ್ನೂ ಓದಿ: ಲಿಂಗಾಯತ ಜಾತಿಯನ್ನು ಸ್ವತಂತ್ರ ಧರ್ಮ ಮಾಡಲು ಆಗ್ರಹಿಸಿ ಬೀದರ್ನಲ್ಲಿ ಬೃಹತ್ ಮೆರವಣಿಗೆ
ಕಾಡಾ ಕಚೇರಿ ಮುಂಭಾಗ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾದ ಜೆಡಿಎಸ್ ರಾಜ್ಯಾಧ್ಯಕ್ಷ, ಹೆಚ್ಡಿ ಕುಮಾರಸ್ವಾಮಿ ಧರಣಿಯಲ್ಲಿ ಕುಳಿತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರಕ್ಕೆ ತನ್ನ ರೈತರಿಗಿಂತ ಪಕ್ಕದ ರಾಜ್ಯದ ರೈತರ ಹಿತವೇ ಮುಖ್ಯವಾಗಿದೆ, ರಾಜ್ಯದ ನಾಲೆಗಳಿಗೆ ನೀರು ಹರಿಸದೆ ತಮಿಳುನಾಡಿಗೆ ನೀರು ಬಿಟ್ಟು ಆದೇಶ ಪಾಲನೆಯ ನೆಪ ಹೇಳುತ್ತಿದ್ದಾರೆ. ಈ ಕೂಡಲೆ ನಾಲೆಗಳಿಗೆ ನೀರು ಬಿಡುಗಡೆ ಮಾಡದೆ ಇದ್ದರೆ ಮೈಸೂರಿನಿಂದ ವಿಧಾನಸೌಧದವರೆಗೆ ಕಾಲ್ನಡಿಗೆಯಲ್ಲಿ ಜಾಥಾ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.