ಬೆಂಗಳೂರು: ಮಂಡ್ಯದಲ್ಲಿ ಕೈಗಾರಿಕೆ ಸ್ಥಾಪನೆ ಸಂಬಂಧ ಇಂದು ವಿಧಾನಸೌಧದಲ್ಲಿ(Vidhana Soudha) ಮಹತ್ವದ ಸಭೆ ನಡೆಯಿತು. 2 ವರ್ಷಗಳ ಬಳಿಕ ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswmya) ವಿಧಾನಸೌಧಕ್ಕೆ ಪ್ರವೇಶಿಸಿದ್ದು ವಿಶೇಷವಾಗಿತ್ತು. ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ (MB Patil) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಸಭೆ ಬಳಿಕ ಸಚಿವ ಎಂಬಿ ಪಾಟೀಲ್ ಮಾತನಾಡಿ ಮಂಡ್ಯದಲ್ಲಿ (Mandya) ಕೈಗಾರಿಕೆಗಾಗಿ 100 ಎಕರೆ ಜಾಗ ತೋರಿಸಿದ್ದೇವೆ. ಎಆರ್ಐಗೆ 100 ಎಕರೆ ರೆಡಿ ಇದೆ. ಸುತ್ತಮುತ್ತಲು ಕೈಗಾರಿಕಾ ಅಭಿವೃದ್ಧಿಗೆ 500 ಎಕರೆ ಕೇಳಿದ್ದಾರೆ. ಅದನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಆಟೊಮೋಟೋವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ(ARAI)ಕೇಂದ್ರ ಸ್ಥಾಪನೆಗೆ ಆಸಕ್ತಿ ತೋರಿದ್ದು ಅದಕ್ಕೆ ನಿಗದಿಪಡಿಸಿರುವ 100 ಎಕರೆಗಿಂತ ಪರ್ಯಾಯವಾಗಿ ಕನಿಷ್ಠ 500 ಎಕರೆಯಲ್ಲಿ ಪೂರಕ ಕೈಗಾರಿಕಾಭಿವೃದ್ಧಿ ಪಾರ್ಕ್ ಸ್ಥಾಪನೆ ಬಗ್ಗೆ ಸೂಕ್ತ ಸ್ಥಳ ಹುಡುಕಲು ಅಧಿಕಾರಿಗಳಿಗೆ ಸೂಚಿಸಿದರು.
ಬರೇ 100 ಎಕರೆಯಲ್ಲಿ ಎ ಆರ್ ಎ ಐ ಕೇಂದ್ರ ಸ್ಥಾಪಿಸಿದರೆ ಅದು ಕೇವಲ ಒಂದು ಕೇಂದ್ರವಾಗಿ ಇರುತ್ತದೆ. ಅದರ ಬದಲು ಪೂರಕ ಆಟೊಮೊಬೈಲ್ ಕ್ಷೇತ್ರದ ಅಭಿವೃದ್ಧಿಗೆ ಬೇಕಾಗುವ ಹಾಗೆ ಕನಿಷ್ಠ 500 ಎಕರೆಯಲ್ಲಿ ಆ ಕೇಂದ್ರವನ್ನೂ ಸೇರಿಸಿಕೊಂಡು ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವುದು ಸೂಕ್ತ. ಇದನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಕೂಡ ಒಪ್ಪಿದ್ದಾರೆ. ಈ ಉದ್ದೇಶಕ್ಕಾಗಿ ಮಂಡ್ಯ ಜಿಲ್ಲೆಯಲ್ಲಿ ಇರುವ ಸರಕಾರಿ/ಖಾಸಗಿ ಜಮೀನನ್ನು ಗುರುತಿಸುವಂತೆ ವಿಶೇಷ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

ಕುಮಾರಸ್ವಾಮಿಯವರು ವಾಹನಗಳ ಪರೀಕ್ಷೆ ನಡೆಸಿ, ಪ್ರಮಾಣಪತ್ರ ಕೊಡುವ ಎ.ಆರ್.ಎ.ಐ ಕೇಂದ್ರ ಸ್ಥಾಪನೆಗೆ ಮಂಡ್ಯ ಜಿಲ್ಲೆಯಲ್ಲಿ 100 ಎಕರೆ ಕೇಳಿದ್ದರು. ನಾವು ಬಸರಾಳು ಬಳಿ 105 ಎಕರೆ ತೋರಿಸಿದ್ದೇವೆ. ಇದು ಬಹುಮಟ್ಟಿಗೆ ಅವರಿಗೆ ಒಪ್ಪಿಗೆಯಾಗಿದೆ. ಆದರೆ ಈಗ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಚಿಂತನೆ ಬಂದಿದ್ದು ಪರ್ಯಾಯ ಜಾಗಕ್ಕೆ ಸಲಹೆ ನೀಡಲಾಗಿದೆ. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡಿರುವ ಬೆಳ್ಳೂರಿನ ಬಳಿ 2021ರಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ 425 ಎಕರೆ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಅದಕ್ಕೆ ಪರಿಹಾರ ವಿತರಣೆ ಮಾತ್ರ ಬಾಕಿ ಇದೆ. ಈ ಜಾಗವನ್ನೂ ನೋಡುವಂತೆ ಕೇಂದ್ರ ಸರಕಾರವನ್ನು ಕೋರಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಲು MLC ನಜೀರ್ ಅಹ್ಮದ್ಗೆ ಡೆಡ್ಲೈನ್
ಅಧಿಕಾರಿಗಳ ವರದಿ ಬಳಿಕ ಮತ್ತೊಂದು ಸುತ್ತು ಸಭೆ ಸೇರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. .ಕೈಗಾರಿಕಾ ಹಬ್ ಬಂದರೆ ಬಂಡವಾಳ ಹೂಡಿಕೆ, ಆರ್ಥಿಕ ವಹಿವಾಟು ಮತ್ತು ಉದ್ಯೋಗ ಸೃಷ್ಟಿ ಎರಡೂ ಸಾಧ್ಯವಾಗುತ್ತದೆ ಎಂದು ಪಾಟೀಲ ವಿವರಿಸಿದ್ದಾರೆ.

ಇದಲ್ಲದೆ ಮಂಡ್ಯ ಜಿಲ್ಲೆಯಲ್ಲೇ ತನ್ನ ಉತ್ಪಾದನಾ ಘಟಕ ಸ್ಥಾಪಿಸಲು ಆ್ಯಂಡ್ರ್ಯೂ ಲೂಯಿ ಕಂಪನಿ ಲಿಮಿಟೆಡ್ ಸಂಸ್ಥೆಗೆ (ಎ.ಎಲ್.ಸಿ.ಎಲ್) ಕೂಡ 25-50 ಎಕರೆ ಭೂಮಿ ಬೇಕು ಎಂದು ಗಮನಕ್ಕೆ ತಂದಿದ್ದಾರೆ. ಈ ಕಂಪನಿಯು ಕೈಗಾರಿಕೆಗಳಿಗೆ ಬೇಕಾದ ಎಲೆಕ್ಟ್ರಿಕ್ ಸಾಧನಗಳು, ಬೃಹತ್ ಫ್ಯಾನುಗಳು, ವಿದ್ಯುತ್ ಪರಿವರ್ತಕ ಮುಂತಾದವನ್ನು ತಯಾರಿಸುತ್ತದೆ. ಅದಕ್ಕೆ ಅಗತ್ಯ ಭೂಮಿಯನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಅವರು ನುಡಿದಿದ್ದಾರೆ.
ರಾಜ್ಯದಲ್ಲಿ ಹೆಚ್ಚು ಉದ್ಯಮಗಳು ಬರಬೇಕು. ಇದಕ್ಕೆ ಸೂಕ್ತ ನೀತಿ ಮತ್ತು ಕಾರ್ಯಪರಿಸರ ನಮ್ಮಲ್ಲಿದೆ. ಹೊಸ ಕೈಗಾರಿಕಾ ನೀತಿಯಲ್ಲಿ ಇವುಗಳಿಗೆ ಒತ್ತು ಕೊಡಲಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಸಭೆಯಲ್ಲಿ ಮಂಡ್ಯ ಶಾಸಕ ರವಿ ಗಣಿಗ, ಶಾಸಕ ಎಚ್.ಡಿ.ರೇವಣ್ಣ, ಮಾಜಿ ಸಚಿವರಾದ ಸಿ ಎಸ್ ಪುಟ್ಟರಾಜು ಮತ್ತು ಡಿ ಸಿ ತಮ್ಮಣ್ಣ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕಂದಾಯ ಆಯುಕ್ತರಾದ ಮೀನಾ ನಾಗರಾಜ್, ಕೆಐಎಡಿಬಿ ಸಿಇಒ ಡಾ.ಮಹೇಶ, ಎ.ಆರ್.ಎ.ಐ ಸಂಘಟನೆಯ ನಿರ್ದೇಶಕ ಡಾ.ರೆಜಿ ಮಥಾಯ್ ಮತ್ತು ಹಿರಿಯ ಉಪನಿರ್ದೇಶಕ ಡಾ. ಶಾಮಸುಂದರ ಮುಂತಾದವರು ಸಭೆಯಲ್ಲಿ ಇದ್ದರು.

