ಕರ್ನಾಟಕ ನಮ್ಮದು, ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ: ಎಚ್‌ಡಿಕೆ

Public TV
4 Min Read
h.d.kumaraswamy

– ಯುಗಾದಿ ಇದೆ, ವರ್ಷತೊಡಕೂ ಇದೆ, ಹಲಾಲೂ ಇದೆ, ಹಲಾಲ್ ಹಾಲಾಹಲವನ್ನು
– ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್‌. ಡಿ ಕುಮಾರಸ್ವಾಮಿ ಅವರು ಪ್ರಸಕ್ತ ವಿದ್ಯಮಾನಗಳ ಉಲ್ಲೇಖಿಸಿ, ಹಿಂದೂಪರ ಸಂಘಟನೆಗಳು ಮತ್ತು ಬಿಜೆಪಿಗೆ ವಿರುದ್ಧವಾಗಿ ಟ್ವೀಟ್ ಮಾಡಿದ್ದಾರೆ. ಯುಗಾದಿ ಪರ್ವದಿನದಂದು ನಾವೆಲ್ಲ ಸಂಕಲ್ಪ ಮಾಡೋಣ ಎಂದು ಕೆಲವು ಸಂದೇಶವನ್ನು ಸಮಾಜಕ್ಕೆ ರವಾನೆ ಮಾಡುವ ಮೂಲಕವಾಗಿ ಹಬ್ಬ ಶುಭಾಶಯಕೋರಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಯುಗಾದಿ ಪರ್ವದಿನದಂದು ನಾವೆಲ್ಲ ಒಂದು ಸಂಕಲ್ಪ ಮಾಡೋಣ. ಕರ್ನಾಟಕವು ಕರ್ನಾಟಕವಾಗಿಯೇ ಉಳಿಯಬೇಕೆಂಬ ಆಶಯದಿಂದಲೇ ಈ ಸಂಕಲ್ಪ. ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸುವ ಧೈರ್ಯ ಮಾಡೋಣ. ಕರ್ನಾಟಕ ನಮ್ಮದು. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ

ಕುರ್ಚಿ ಹಿಡಿಯಲು ಮನಸುಗಳನ್ನು ಮುರಿಯುತ್ತಿದ್ದಾರೆ. ನಾಳೆ ಮನೆಗಳನ್ನೂ ಒಡೆದು ಅಣ್ಣ-ತಮ್ಮ, ಅಕ್ಕ-ತಂಗಿ ನಡುವೆಯೂ ಬೆಂಕಿ ಇಟ್ಟು ಮನೆ ಮುರುಕರೂ ಆಗುತ್ತಾರೆ. ಹಿಂದುತ್ವದ ಹೆಸರೇಳಿಕೊಂಡು ಹಿಂದುತ್ವದ ವಿನಾಶ ಮಾಡುತ್ತಿರುವ ಈ ನಕಲಿಗಳ ಮಾತನ್ನು ಯಾರೂ ನಂಬಬಾರದು. ಕರಪತ್ರ ಹಿಡಿದು ಬಂದರೆ ಭಾವೈಕ್ಯತೆಯ ಪಾಠ ಹೇಳಿ ಕಳಿಸಿ.

ತಲೆತಲಾಂತರಗಳಿಂದ ಯುಗಾದಿ ಇದೆ. ವರ್ಷತೊಡಕೂ ಇದೆ, ಹಲಾಲೂ ಇದೆ. ಹಲಾಲ್ ಹಾಲಾಹಲವನ್ನು ಈಗ ಸೃಷ್ಟಿಸಲಾಗಿದೆ. ಹಲಾಲು, ಜಟ್ಕಾ ಎಂದು ಜನರನ್ನು ಭಾವನಾತ್ಮಕವಾಗಿ ಛಿದ್ರಗೊಳಿಸಿ ಮತ ಗಿಟ್ಟಿಸುವ ಗಿಡುಗಗಳಿವು. ಹಿಂದುತ್ವ ಹೆಸರಿನಲ್ಲಿ ರಾಜಕೀಯ ಜನ್ಮ ಪಡೆದು ರಕ್ಕಸರೂಪದಲ್ಲಿ ಬೆಳೆದಿರುವ ಪಕ್ಷದ ಬಾಲಂಗೋಚಿಗಳಿವು. ಇವರು ನೈಜ ಹಿಂದುಗಳೇ ಅಲ್ಲ. ಇದನ್ನೂ ಓದಿ: ಪ್ರಧಾನಿ ರಾಜ್ಯದ ಹಕ್ಕುಗಳನ್ನು ದೋಚುತ್ತಿದ್ದಾರೆ: ಭಗವಂತ್ ಮಾನ್

ತಲೆತಲಾಂತರಗಳಿಂದ ಇಲ್ಲದ ಆಹಾರ ತಾರತಮ್ಯ ಈಗೇಕೆ ಬಂತು? 150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ರೋಡ್ ಮ್ಯಾಪ್ ಇದೇ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸರ್ವಸಮಾನ, ಸರ್ವಹಕ್ಕು, ಸರ್ವಕಲ್ಯಾಣ ಅಂದರೆ ಸರ್ವೇ ಜನಾಃ ಸುಖಿನೋ ಭವಂತು ಎಂಬ ಆಶಯವುಳ್ಳ ಸಂವಿಧಾನವನ್ನೇ ಮುಗಿಸುವ ರಕ್ಕಸ ಹುನ್ನಾರಕ್ಕೆ ಇದು ನಾಂದಿಯಷ್ಟೇ.

ಅನ್ನ-ಆಹಾರದಲ್ಲಿ ಅರಾಜಕತೆ ಉಂಟು ಮಾಡಿ ಬೇಳೆ ಬೇಯಿಸಿಕೊಳ್ಳುವವರು ಭಾರತಕ್ಕೆ ಮತ್ತು ಭಾವೈಕ್ಯ ಪರಂಪರೆಗೆ ದೊಡ್ಡ ಅಪಾಯ. ಮನಸುಗಳ ನಡುವೆ ಯುದ್ಧವನ್ನೇ ಸೃಷ್ಟಿಸುತ್ತಿರುವ ಈ ಕಿಡಿಗೇಡಿಗಳು ಯುದ್ಧೋನ್ಮಾದ ಸರ್ವಾಧಿಕಾರಿಗಳಿಗಿಂತಲೂ ವಿನಾಶಕಾರಿ. ಇದನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು.

ಯುಗಾದಿ ಹಬ್ಬದ ದಿನ ನೈಜ ಹಿಂದುಗಳು ಯಾರೂ ಮಾಂಸ ಮಾರುವುದಿಲ್ಲ, ಖರೀದಿಸುವುದೂ ಇಲ್ಲ. ಆದರೆ, ಜಟ್ಕಾ ಕಟ್ ಹೆಸರಿನಲ್ಲಿ ಕೆಲವರು ಇವತ್ತೇ ಮಾಂಸದ ಅಂಗಡಿಗಳನ್ನು ತೆರೆದಿದ್ದಾರೆ. ಇವರಾ ಹಿಂದುಗಳು ಇಂಡಿಯಾದಿಂದಲೇ ಹಿಂದೂ ಧರ್ಮವನ್ನು ಮೂಲೋತ್ಪಾಟನೆ ಮಾಡುವುದೇ ಇವರ ಹಿಡನ್ ಅಜೆಂಡಾ ಆಗಿದೆ’ ಎನ್ನುವುದು ನನ್ನ ಅಭಿಪ್ರಾಯ.

ಅನಾದಿ ಕಾಲದಿಂದ ಯುಗಾದಿ, ವರ್ಷತೊಡಕನ್ನು ನಾವೆಲ್ಲರೂ ಆಚರಿಸಿದಂತೆ ಈ ವರ್ಷವೂ ಆಚರಿಸೋಣ. ಭಾರತವನ್ನು ಒಡೆಯುವ ವಿಷಬೀಜಾಸುರರನ್ನು ಹಿಮ್ಮೆಟ್ಟಿಸೋಣ. ಸರ್ವ ಜನಾಂಗದ ತೋಟ ಕರುನಾಡಿನಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಮನವಿ ಇದು. ಇಡೀ ದೇಶಕ್ಕೆ ಮಾದರಿಯಾದ ನೆಮ್ಮದಿಯ ಕರುನಾಡನ್ನು ಕಾಪಾಡಿಕೊಳ್ಳೋಣ. ಇದನ್ನೂ ಓದಿ: ದೆಹಲಿಯಲ್ಲಿ ರಾಕಿಬಾಯ್ ನೋಡಲು ಮುಗಿಬಿದ್ದ ಅಭಿಮಾನಿಗಳು

ಕರ್ನಾಟಕವು ಎಲ್ಲರನ್ನೂ ಒಳಗೊಳ್ಳುವ ಶುದ್ಧ ಅಂತಃಕರಣದ ಮನಸುಗಳದ್ದು. ಭಾವನೆಗಳ ಕೆಂಡದ ಮಳೆ ಸುರಿಸುವ ಕಿರಾತಕರದ್ದಲ್ಲ. ಜನಪೀಡಕರನ್ನು ತಿರಸ್ಕರಿಸೋಣ. ಪರಂಪರಾಗತವಾಗಿ ಬಂದಿರುವ ಯುಗಾದಿ, ವರ್ಷತೊಡಕನ್ನು ಎಂದಿನಂತೆ ಸಂಭ್ರಮಿಸುವ ಮೂಲಕ ಇವರ ಸೋಗಲಾಡಿತನಕ್ಕೆ ಇತಿಶ್ರೀ ಹಾಡೋಣ ಎಂದು ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *