ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿದೆ. ವಿಜ್ಞಾನ, ಗಣಿತ, ಆಯುರ್ವೇದ, ತತ್ವಶಾಸ್ತ್ರ ಮತ್ತು ಸಾಹಿತ್ಯ ಸೇರಿದಂತೆ ಅಪಾರ ಸಂಪತ್ತು ಹಸ್ತಪ್ರತಿಗಳ ರೂಪದಲ್ಲಿ ಅಡಗಿದೆ. ಸಮಯ ಬದಲಾದಂತೆ, ಕಾಲ ಓಡಿದಂತೆ ಈ ಅಮೂಲ್ಯ ನಿಧಿ ಧೂಳು ಹಿಡಿದು, ಗೆದ್ದಲು ಪಾಲಾಗುತ್ತಿದೆ. ಇದರ ಹೊರತಾಗಿ ಕೆಲವು ವಿದೇಶಿ ವಸ್ತು ಸಂಗ್ರಹಾಲಯಗಳ ಪಾಲಾಗಿವೆ. ನಮ್ಮ ಪೂರ್ವಿಕರ ಆಸ್ತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ಭಾರತದ ಅಸ್ತಿತ್ವದ ಮರುಸ್ಥಾಪನೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಅಮೂಲ್ಯ ನಿಧಿಯನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ (Central Govt) ಸಂಸ್ಕೃತಿ ಸಚಿವಾಲಯ (Ministry of Culture) ʻಜ್ಞಾನ ಭಾರತಮ್ʼ (Gyan Bharatam) ಯೋಜನೆಯನ್ನು ಜಾರಿಗೆ ತಂದಿದೆ.
ಹಸ್ತಪ್ರತಿಗಳು ಕೇವಲ ಹಳೆಯ ಕಾಗದಗಳಾಗದೇ ಭಾರತೀಯ ಪರಂಪರೆಯ ಹುಟ್ಟು ಹಾಗೂ ಅದರ ಬೆಳವಣಿಗೆಯ ಪರಿಯನ್ನ ಎತ್ತಿ ತೋರಿಸುತ್ತದೆ. ಹೀಗಾಗಿ ಹಸ್ತಪ್ರತಿಗಳನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ಬೆಸೆದು ಮುಂದಿನ ಪೀಳಿಗೆಗೆ ಪುರಾತನ ಯುಗದ ದರ್ಶನ ಮಾಡಿಸುವ ಪ್ರಮುಖ ಯೋಜನೆ ಇದಾಗಿದೆ. ಹಾಗಾದರೆ ಈ ಜ್ಞಾನ ಭಾರತಮ್ ಹೇಗೆ ಕಾರ್ಯನಿರ್ವಹಿಸುತ್ತದೆ? ಯಾವ ರೀತಿ ಹಸ್ತಪ್ರತಿಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆಯುವಂತೆ ಮಾಡುತ್ತಾರೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ಜ್ಞಾನ ಭಾರತಮ್ ಅಭಿಯಾನ?
ಇದು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಪ್ರಮುಖ ಯೋಜನೆಯಾಗಿದೆ. ದೇಶದಾದ್ಯಂತ ಇರುವ ಸುಮಾರು ಒಂದು ಕೋಟಿಗೂ ಅಧಿಕ ಹಸ್ತಪ್ರತಿಗಳನ್ನು ಪತ್ತೆ ಹಚ್ಚಿ ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಅಂದರೆ ಡಿಜಿಟಲೀಕರಣಗೊಳಿಸುವ ಮೂಲಕ ಜಗತ್ತಿಗೆ ಈ ಹಸ್ತಪ್ರತಿಗಳು ಲಭ್ಯವಾಗುವಂತೆ ಮಾಡುವುದು ಇದರ ಮುಖ್ಯ ಗುರಿಯಾಗಿದೆ. 2003ರಲ್ಲಿ ಭಾರತ ಸರ್ಕಾರ ರಾಷ್ಟ್ರೀಯ ಹಸ್ತಪ್ರತಿ ಮಿಷನ್ ಎನ್ನುವುದನ್ನು ಜಾರಿಗೆ ತಂದಿತ್ತು. ಇದೀಗ ಈ ಯೋಜನೆಯನ್ನು ಹೊಸ ರೂಪದಲ್ಲಿ ಮತ್ತೊಮ್ಮೆ ಜಾರಿ ತರುವ ಮೂಲಕ ಅತ್ಯಾಧುನಿಕ AI ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಹೀಗಾಗಿ ರಾಷ್ಟ್ರೀಯ ಹಸ್ತಪ್ರತಿ ಮಿಷನ್ ಅನ್ನು ಇದೀಗ ಜ್ಞಾನ ಭಾರತಮ್ ಎಂದು ಪುನರ್ ರಚಿಸಲಾಗಿದೆ.
ಈ ಅಭಿಯಾನಕ್ಕೆ 2025-26ರ ಕೇಂದ್ರ ಬಜೆಟ್ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯ ಪೋರ್ಟಲ್ ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದರು. 2026ರ ಮಾರ್ಚ್ 16ರಂದು ದೇಶಾದ್ಯಂತ ಹಸ್ತಪ್ರತಿಗಳ ಸಮೀಕ್ಷೆಗಾಗಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಈ ಯೋಜನೆಗಾಗಿ ಸುಮಾರು 491.66 ಕೋಟಿ ರೂಪಾಯಿಗಳನ್ನು (2025-2031ರ ಅವಧಿಗೆ) ಮೀಸಲಿಡಲಾಗಿದೆ.
2026ರ ಮಾರ್ಚ್ 16 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ಹಸ್ತಪ್ರತಿಗಳ ಸಮೀಕ್ಷೆಗಾಗಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದರು. ಈ ಯೋಜನೆಗಾಗಿ ಹೊಸ ಪೋರ್ಟಲ್ (https://namami.gov.in/) ಲೋಕಾರ್ಪಣೆಗೊಳಿಸಿದ್ದಾರೆ. ಈ ಅಭಿಯಾನಕ್ಕಾಗಿ 2025-26ರ ಕೇಂದ್ರ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು, 491.66 ಕೋಟಿ ರೂ. ಮೀಸಲಿಡಲಾಗಿದೆ.
ಜ್ಞಾನ ಭಾರತಮ್ ನ ಉದ್ದೇಶಗಳು:
- ಭಾರತದಲ್ಲಿನ ಅನೇಕ ಮಠ, ದೇವಸ್ಥಾನಗಳು, ಖಾಸಗಿ ಸಂಗ್ರಹಾಲಯಗಳು ಮತ್ತು ಗ್ರಂಥಾಲಯಗಳಲ್ಲಿ ದಿಕ್ಕುದೆಸೆ ಇಲ್ಲದೆ ಅನಾಥವಾಗಿ ಬಿದ್ದಿರುವ ಹಸ್ತಪ್ರತಿಗಳನ್ನು ಈ ಯೋಜನೆ ಅಡಿಯಲ್ಲಿ ಗುರುತಿಸಲಾಗುವುದು.
- ಹಳೆಕಾಲದಲ್ಲಿ ಕೆಲವು ತಾಳೆಗಾರಿಯಲ್ಲಿ ಬರೆದಿರುವ ಪ್ರತಿಗಳಿವೆ. ಅವುಗಳು ಸದ್ಯ ನಶಿಸಿ ಹೋಗುತ್ತಿದ್ದು ಗೆದ್ದಲು ಹಿಡಿಯುತ್ತಿದೆ. ಹೀಗಾಗಿ ಅಂತಹ ತಾಳೆಗರಿ, ಹಸ್ತಪ್ರತಿಗಳನ್ನು ವೈಜ್ಞಾನಿಕ ವಿಧಾನಗಳ ಮೂಲಕ ಸಂರಕ್ಷಿಸಲಾಗುವುದು ಮತ್ತು ನೂರಾರು ವರ್ಷಗಳ ಕಾಲ ಬಾಳಿಕೆ ಬರುವಂತೆ ಮಾಡಲಾಗುವುದು.
- ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಿ, ಹೈ ರೆಸುಲ್ಯೂಷನ್ (High Resolution) ಸ್ಕ್ಯಾನಿಂಗ್ ಮಾಡಿ ಅವುಗಳನ್ನ ಡಿಜಿಟಲ್ ರೂಪಕ್ಕೆ ತಂದು ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲಾಗುವುದು.
- ಹಿಂದಿನ ಸಮಯದಲ್ಲಿ ಸಂಸ್ಕೃತ, ಪಾಲಿ ಮತ್ತು ಪ್ರಾಕೃತದಂತಹ ಪ್ರಾಚೀನ ಭಾಷೆಗಳಲ್ಲಿರುವ ತಾಳೆಗರಿ ಮತ್ತು ಹಸ್ತಪ್ರತಿಗಳನ್ನು ಇಂದಿನ ಭಾಷೆಗಳಿಗೆ ಅನುವಾದಿಸಿ ಸಂಶೋಧಕರಿಗೆ ನೀಡಲಾಗುವುದು
- ಸುಮಾರು ಒಂದು ಕೋಟಿಗೂ ಅಧಿಕವಾಗಿರುವ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸಿ ಮುಂದಿನ ಪೀಳಿಗೆಗೆ ಮತ್ತು ಸಂಶೋಧಕರಿಗೆ ಸಂಶೋಧನಾ ಸಮಯದಲ್ಲಿ ಅಥವಾ ಇನ್ನಿತರ ಕೆಲಸಕ್ಕೆ ಉಪಯೋಗವಾಗುವಂತೆ ಸುಲಭವಾಗಿ ಆನ್ಲೈನ್ ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು.
- ಈ ಯೋಜನೆ ಅಡಿಯಲ್ಲಿ ಪತ್ತೆ ಹಚ್ಚಿ, ಸಂರಕ್ಷಿಸಿ ಹಾಗೂ ಡಿಜಿಟಲೀಕರಣಗೊಳಿಸಿದ ಎಲ್ಲಾ ಹಸ್ತಪ್ರತಿಗಳನ್ನು ಒಟ್ಟುಗೂಡಿಸಿ ʻಕೃಷಿ ಸಂಪದʼ ಎಂಬ ಹೆಸರಿನಲ್ಲಿ ವಿಶ್ವದ ಅತಿ ದೊಡ್ಡ ಡಿಜಿಟಲ್ ಹಸ್ತಪ್ರತಿ ಭಂಡಾರವನ್ನ ನಿರ್ಮಿಸಲಾಗುವುದು
- ಹಳೆಯ ಲಿಪಿಗಳನ್ನು ಓದಲು ಮತ್ತು ಅನುವಾದಿಸಲು ಕೃತಕ ಬುದ್ಧಿಮತ್ತೆ ಮತ್ತು ಕೈಬರಹ ರೂಪದಲ್ಲಿರುವುದನ್ನು ಡಿಜಿಟಲ್ ಹಸ್ತಾಕ್ಷರಕ್ಕೆ ಪರಿವರ್ತಿಸಲು ತಂತ್ರಜ್ಞಾನವನ್ನು ಬಳಸಲಾಗುವುದು
ಈ ಸಮೀಕ್ಷೆ ಹೇಗೆ ನಡೆಯುತ್ತೆ?
ಈ ಸಮೀಕ್ಷೆ ಒಟ್ಟು ನಾಲ್ಕು ಹಂತಗಳಲ್ಲಿ ನಡೆಯುವುದು. ಹಂತ ಹಂತವಾಗಿ ಹಸ್ತ ಪ್ರತಿಗಳನ್ನು ಪತ್ತೆ ಹಚ್ಚಿ, ಸಂರಕ್ಷಿಸಿ ಕೊನೆಗೆ ವೈಜ್ಞಾನಿಕವಾಗಿ ಅವುಗಳನ್ನ ದೀರ್ಘಕಾಲ ಬಾಳಿಕೆ ಬರುವಂತೆ ಮಾಡಿ ಡಿಜಿಟಲೀಕರಣ ಗೊಳಿಸಲಾಗುವುದು. ಜನರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗುವುದು.
ಮೊದಲನೇ ಹಂತ:
ಈ ಹಂತದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ದೇಶಾದ್ಯಂತ ಇರುವ ಹಸ್ತಪ್ರತಿಗಳನ್ನು ಪತ್ತೆ ಹಚ್ಚಲಾಗುವುದು. ಅಲ್ಲದೆ ಲೋಕಾರ್ಪಣೆಗೊಳಿಸಲಾಗಿರುವ ಪೋರ್ಟಲ್ ಮೂಲಕ ಅಥವಾ ಮೊಬೈಲ್ ಆಪ್ ಮೂಲಕ ಜನರು ತಮ್ಮ ಬಳಿ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ಹಂಚಿಕೊಳ್ಳಬಹುದು. ಈ ಮೂಲಕ ಇವುಗಳ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಲು ಸಹಾಯಮಾಡುತ್ತದೆ.
ಎರಡನೇ ಹಂತ:
ಈ ಹಂತದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ವಿಷಯ ತಜ್ಞರು ನೇರವಾಗಿ ಹಸ್ತಪ್ರತಿಗಳಿರುವ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ದೊರೆತಿರುವ ಹಸ್ತಪ್ರತಿಗಳ ಮಾಹಿತಿಯನ್ನು ಪರಿಶೀಲನೆ ಮಾಡಿ, ಹಸ್ತಪ್ರತಿಗಳು ಸದ್ಯ ಯಾವ ಸ್ಥಿತಿಯಲ್ಲಿದೆ. ಅವುಗಳ ಅಸ್ತಿತ್ವವನ್ನ ಖಚಿತಪಡಿಸಿಕೊಳ್ಳುವುದು ಈ ಹಂತದ ಮುಖ್ಯ ಉದ್ದೇಶವಾಗಿದೆ.
ಮೂರನೇ ಹಂತ:
ಈ ಹಂತದಲ್ಲಿ ಪತ್ತೆಯಾಗಿರುವ ಹಸ್ತಪ್ರತಿಗಳ ಕುರಿತು ಆಳವಾಗಿ ಅಧ್ಯಯನ ನಡೆಸಲಾಗುವುದು ಮತ್ತು ಅವುಗಳನ್ನು ದಾಖಲೀಕರಣ ಮಾಡಲಾಗುವುದು. ಹಸ್ತಪ್ರತಿಗಳಿಗೆ ಸಂಬಂಧಿಸಿದಂತೆ ಅದರಲ್ಲಿರುವ ಭಾಷೆ, ಅದರಲ್ಲಿರುವ ಲಿಪಿ ಮತ್ತು ಅವುಗಳ ವಿಷಯಗಳು ಕುರಿತು ತಜ್ಞರು ಮಾಹಿತಿಯನ್ನು ಕಲೆ ಹಾಕುತ್ತಾರೆ. ಬಳಿಕ ಅವುಗಳ ಕುರಿತು ಮೆಟಾಡೇಟಾ ಮತ್ತು ಕ್ಯಾಟಲಾಗ್ಗಳನ್ನು ಸಿದ್ಧಪಡಿಸುತ್ತಾರೆ. ಈ ಹಂತದಲ್ಲಿ ದೇಶದ ಸುಮಾರು ನೂರಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ತರಬೇತಿ ಪಡೆದ ಸ್ವಯಂಸೇವಕರು ಕೈ ಜೋಡಿಸಲಿದ್ದಾರೆ.
ನಾಲ್ಕನೇ ಹಂತ:
ಈ ಹಂತ ಈ ಸಮೀಕ್ಷೆಯ ನಿರ್ಣಾಯಕ ಹಂತವಾಗಿದೆ. ಇದರಲ್ಲಿ ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಅವುಗಳು ದೀರ್ಘಕಾಲ ಬಾಳಿಕೆ ಬರುವ ಹಾಗೆ ರಕ್ಷಣೆ ಮಾಡುವುದರ ಮೇಲೆ ಕೇಂದ್ರೀಕರಿಸುತ್ತದೆ. ಶಿಥಿಲಗೊಳ್ಳುತ್ತಿರುವ ಹಸ್ತಪ್ರತಿಗಳಿಗೆ ವೈಜ್ಞಾನಿಕ ಸಂರಕ್ಷಣ ಬೆಂಬಲ ನೀಡಲಾಗುವುದು. ಅದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಅವುಗಳನ್ನು ಉನ್ನತ ಗುಣಮಟ್ಟದಲ್ಲಿ ಡಿಜಿಟಲೀಕರಣಗೊಳಿಸಲಾಗುತ್ತದೆ. ಹಸ್ತಪ್ರತಿಗಳಲ್ಲಿ ಬಳಸಿರುವ ವಿಷಯ ಮತ್ತು ಅದರಲ್ಲಿ ಬಳಸಿರುವ ಭಾಷೆಯ ಆಧಾರದ ಮೇಲೆ ಅವುಗಳನ್ನ ವರ್ಗೀಕರಿಸಲಾಗುತ್ತದೆ. ಈ ಯೋಜನೆ ಅಡಿಯಲ್ಲಿ ಸರ್ಕಾರ ಯಾವುದೇ ಹಸ್ತಪ್ರತಿಗಳನ್ನು ವಶಪಡಿಸಿಕೊಳ್ಳುವುದಿಲ್ಲ. ಬದಲಾಗಿ ಅವುಗಳ ಮಾಲೀಕತ್ವ ಮೂಲ ಮಾಲೀಕರ ಬಳಿಯೇ ಇರಲಿದ್ದು, ಕೇವಲ ಅವುಗಳ ಸಂರಕ್ಷಣೆಗೆ ಸರ್ಕಾರ ಕೈಜೋಡಿಸಲಿದೆ.
ಸಂರಕ್ಷಣೆಯಿಂದ ಏನು ಲಾಭ?
ನಮ್ಮ ಹಸ್ತಪ್ರತಿಗಳಲ್ಲಿ ಗಣಿತದ ಸೂತ್ರಗಳು, ಖಗೋಳ ವಿಜ್ಞಾನದ ರಹಸ್ಯಗಳು ಮತ್ತು ಹಲವು ಕಾಯಿಲೆಗಳಿಗೆ ಆಯುರ್ವೇದದ ಚಿಕಿತ್ಸೆಗಳಿವೆ. ಇಂತಹ ಹಸ್ತಪ್ರತಿಗಳನ್ನು ಡಿಜಿಟಲೀಕರಣಗೊಳಿಸುವುದರಿಂದ ಮುಂದಿನ ಪೀಳಿಗೆಗೆ ಇದು ಸಹಾಯವಾಗುತ್ತದೆ. ಜೊತೆಗೆ ಈಗಿರುವ ಅನೇಕ ಕಾಯಿಲೆಗಳಿಗೆ ಮನೆಮದ್ದು ದೊರೆತಂತಾಗುತ್ತದೆ. ಹಿಂದಿನ ಯುಗದ ಪರಿಚಯ, ಸಾಹಿತ್ಯ ಹಾಗೂ ಜ್ಞಾನದ ಬಗ್ಗೆ ಇಂದಿನ ಪೀಳಿಗೆಗೆ ಮಾಹಿತಿ ದೊರೆಯುತ್ತದೆ. ಅಲ್ಲದೆ ಇದರಿಂದ ನಮ್ಮ ದೇಶದ ಜ್ಞಾನವನ್ನು ಬೇರೆ ದೇಶಗಳು ತಮ್ಮದೆಂದು ಹಕ್ಕು ಸಾಧಿಸಿದಂತೆ ತಡೆಯಲು ಇದು ಮುಖ್ಯವಾಗುತ್ತದೆ.
ಸಮೀಕ್ಷೆಯಲ್ಲಿ ಸಾರ್ವಜನಿಕರು ಹೇಗೆ ಸಹಾಯ ಮಾಡಬಹುದು?
ಈ ಅಭಿಯಾನ ಕೇವಲ ಸರ್ಕಾರದ ಕೆಲಸವಾಗಿರದೇ ಇದರಲ್ಲಿ ಜನ ಸಾಮಾನ್ಯರು ಕೂಡ ಭಾಗವಹಿಸಬಹುದು. ಜನರು ತಮ್ಮ ಮನೆಯಲ್ಲಿ ಅಥವಾ ತಮ್ಮ ಪರಿಚಯಸ್ಥರ ಮನೆಯಲ್ಲಿ ಅಥವಾ ಯಾವುದೇ ಮಠ ದೇವಸ್ಥಾನಗಳಲ್ಲಿ ಹಳೆಯ ಹಸ್ತಪ್ರತಿಗಳು ಅಥವಾ ಕಾಗದ ಪ್ರತಿಗಳು ಹಾಗೂ ತಾಳೆಗರಿಗಳಿದ್ದರೆ ಅವುಗಳನ್ನು ಮೊಬೈಲ್ ಆಪ್ ಅಥವಾ ಪೋರ್ಟಲ್ ಮೂಲಕ ಫೋಟೋ ಮತ್ತು ವಿವರಗಳನ್ನು ಅಪ್ಲೋಡ್ ಮಾಡಬಹುದು. ಒಂದು ವೇಳೆ ಇತಿಹಾಸ ಅಥವಾ ಭಾಷಾ ತಜ್ಞರು ಯಾರಾದರೂ ಇದ್ದರೆ ಹಸ್ತಪ್ರತಿಗಳ ಪತ್ತೆಹಚ್ಚುವ ಕಾರ್ಯದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬಹುದು. ಹಳೆಯ ಕಾಲದ ಯಾವುದಾದರೂ ಲಿಖಿತ ದಾಖಲೆಗಳನ್ನು ಕಸವೆಂದು ಎಸೆಯದೇ ಅವುಗಳನ್ನ ಸಂರಕ್ಷಿಸಿ ಜನರಲ್ಲಿ ಜಾಗೃತಿ ಮೂಡಿಸುವುದು. ಬಳಿಕ ಅವುಗಳನ್ನು ಫೋಟೋ ಮತ್ತು ವಿವರಗಳೊಂದಿಗೆ ಅಪ್ಲೋಡ್ ಮಾಡಬಹುದು.
ಸಮೀಕ್ಷೆಗಿರುವ ಸವಾಲುಗಳು:
- ಭಾರತದಲ್ಲಿ ಸುಮಾರು 80ಕ್ಕೂ ಹೆಚ್ಚು ವಿವಿಧ ಲಿಪಿಗಳಲ್ಲಿ ಹಸ್ತಪ್ರತಿಗಳಿವೆ. ಆದರೆ ಈ ಎಲ್ಲಾ ಹಸ್ತಪ್ರತಿಗಳನ್ನು ಓದಬಲ್ಲ ತಜ್ಞರ ಕೊರತೆ ಇದೆ. ಹೀಗಾಗಿ ಆ ಹಸ್ತಪ್ರತಿಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸುವುದು ಕಷ್ಟವಾಗಿದೆ.
- ದೇಶಾದ್ಯಂತ ಹಲವೆಡೆ ಹಲವಾರು ಹಸ್ತಪ್ರತಿಗಳು ಮತ್ತು ತಾಳೆಗರಿಯ ಕಾಗದಗಳು ಇವೆ. ಎಲ್ಲವನ್ನ ಪತ್ತೆ ಹಚ್ಚಿ ಅವುಗಳನ್ನು ಸಂರಕ್ಷಣೆ ಮಾಡುವುದು ಕಷ್ಟದ ಕೆಲಸ.
- ಹವಾಮಾನದ ಬದಲಾವಣೆಯಿಂದಾಗಿ ಹಸ್ತಪ್ರತಿಗಳು ವೇಗವಾಗಿ ನಶಿಸಿ ಹೋಗುತ್ತವೆ. ಹೀಗಾಗಿ ಎಷ್ಟು ಪ್ರಮಾಣದಲ್ಲಿ ಹಸ್ತಪ್ರತಿ ಸಿಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವಾಗಿದೆ.
ಭಾರತದಲ್ಲಿ ಸುಮಾರು ಒಂದು ಕೋಟಿಗೂ ಅಧಿಕ ಹಸ್ತಪ್ರತಿಗಳಿದ್ದು, ಈಗಾಗಲೇ ಈ ಒಂದು ಕೋಟಿ ಹಸ್ತಪ್ರತಿಗಳ ಪೈಕಿ ಏಳುವರೆ ಲಕ್ಷ ಹಸ್ತಪ್ರತಿಗಳು ಡಿಜಿಟಲೀಕರಣಗೊಂಡಿವೆ. ಇನ್ನು ಇವುಗಳ ಪೈಕಿ 1.29 ಲಕ್ಷ ಹಸ್ತಪ್ರತಿಗಳು ಜ್ಞಾನಭಾರತಮ್ ಪೋರ್ಟಲ್ ನಲ್ಲಿ ಈಗಾಗಲೇ ಲಭ್ಯವಿದೆ.

