– ಕೈ ಕೈ ಮಿಲಾಯಿಸಿದ ಕಾಂಗ್ರೆಸ್, ಬಿಜೆಪಿ
ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಮತದಾನ ನಡೆಯುತ್ತಿದ್ದು, ಈ ವೇಳೆ ಬೇಗೂರು ಗ್ರಾಮದಲ್ಲಿ ಕೈ, ಕಮಲ ಕಾರ್ಯರ್ತರ ನಡುವೆ ಗಲಾಟೆ ನಡೆದಿದೆ.
ಮತಗಟ್ಟೆ ಬಳಿ ನಿಂತುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರ ಮಧ್ಯೆ ಜಗಳ ಆರಂಭವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತರು ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿತ್ತು. ಘಟನೆ ಸಂಬಂಧಿಸಿದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮತದಾನ ಕೇಂದ್ರದ 100 ಮೀಟರ್ ಒಳಗೆಯೇ ಗಲಾಟೆ ನಡೆದಿದ್ದರಿಂದ ತಕ್ಷಣವೇ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಚದುರಿಸಿದ್ದಾರೆ.
ಸಹಕಾರಿ ಸಚಿವ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದ ಗುಂಡ್ಲುಪೇಟೆಯಲ್ಲಿ ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ಸಿನಿಂದ ಗೀತಾ ಮಹದೇವ ಪ್ರಸಾದ್ ಹಾಗೂ ಬಿಜೆಪಿಯಿಂದ ನಿರಂಜನ್ ಕುಮಾರ್ ಕಣದಲ್ಲಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಶಿವರಾಮ್, ಕೆ.ಸೋಮಶೇಖರ್, ಮಹಾದೇವ ಪ್ರಸಾದ್ ಬಿ ಮತ್ತು ರಿಪ್ಲಬಿಕ್ ಪಾರ್ಟಿ ಆಪ್ ಇಂಡಿಯಾ ಪಕ್ಷದಿಂದ ಶಿವರಾಜು, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ ಎಂ, ಹೊನ್ನೂರಯ್ಯ ಸೇರಿ ಏಳು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.