ಮೈಸೂರು/ಚಾಮರಾಜನಗರ: ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯ ಮತದಾನಕ್ಕೆ ಇನ್ನೊಂದೇ ದಿನ ಬಾಕಿ. ಬಹಿರಂಗ ಪ್ರಚಾರಕ್ಕೆ ಶುಕ್ರವಾರ ತೆರೆಬಿದ್ದಿದೆ. ಹೀಗಾಗಿ, ಎರಡು ಕ್ಷೇತ್ರಕ್ಕೆ ಸಂಬಂಧಿಸಿಲ್ಲದ ಉಭಯ ಪಕ್ಷಗಳ ನಾಯಕರು ಕ್ಷೇತ್ರವನ್ನು ಖಾಲಿ ಮಾಡಿದ್ದಾರೆ.
ಇಂದು ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ಮಾಡಲಿದ್ದಾರೆ. ಎರಡು ಕ್ಷೇತ್ರಗಳಲ್ಲಿಯೂ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದು ಚುನಾವಣೆ ಹಿನ್ನೆಲೆಯಲ್ಲಿ ಮಾಸ್ಟರಿಂಗ್ ಕಾರ್ಯ ನಡೆಯಲಿದ್ದು, ಭಾನುವಾರ ಮತದಾನ ಪ್ರಕ್ರಿಯೆ ಜರುಗಲಿದೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ಜರುಗಬಾರದೆಂದು ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ರಾಜ್ಯದ ವಿವಿಧ ಜಿಲ್ಲೆಯಿಂದಲ್ಲದೇ, ಕೇಂದ್ರದ ಅರೆ ಸೇನಾ ಪಡೆ ಎರಡು ಕ್ಷೇತ್ರಗಳಿಗೆ ಬಂದಿದೆ.
ಬಹಿರಂಗ ಪ್ರಚಾರಕ್ಕೆ ನಿನ್ನೆ ತೆರೆ ಬಿದ್ದ ಕಾರಣ ಎರಡೂ ಪಕ್ಷಗಳು ಭರ್ಜರಿ ಕ್ಯಾಂಪೇನ್ ನಡೆಸಿದ್ವು. ನಾಳೆ ಬೆಳಗ್ಗೆ ಮತದಾನ ಆರಂಭವಾಗಲಿದ್ದು, ಏಪ್ರಿಲ್ 13ಕ್ಕೆ ಫಲಿತಾಂಶ ಹೊರಹೊಮ್ಮಲಿದೆ. ಮತದಾರ ಪ್ರಭು ಯಾರ ಕೈ ಹಿಡಿದಿದ್ದಾನೆ ಅನ್ನೋದನ್ನ ಕಾದು ನೋಡಬೇಕಿದೆ.