ಅಹಮದಾಬಾದ್: ಕೊನೆವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಗುಜರಾತ್ ಟೈಟಾನ್ಸ್ ಮಂಡಿಯೂರಿದೆ. ತವರಲ್ಲಿ ಗುಜರಾತ್ಗೆ 6 ರನ್ಗಳ ಸೋಲಿನ ಮುಖಭಂಗವಾಗಿದೆ. ರವಿ ಬಿಷ್ಣೋಯ್ ಬೆಂಕಿ ಬೌಲಿಂಗ್ ಹಾಗೂ ಧ್ರುವ್ ಮತ್ತು ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್ಆರ್ ಸತತ 2ನೇ ಗೆಲುವು ದಾಖಲಿಸಿತು.
ಕೊನೆಯ ಓವರ್ನಲ್ಲಿ ಗುಜರಾತ್ ಟೈಟಾನ್ಸ್ ಗೆಲ್ಲಲು 11 ರನ್ಗಳ ಅಗತ್ಯವಿತ್ತು. ರಶೀದ್ ಖಾನ್ ಮತ್ತು ಕಗಿಸೊ ರಬಾಡ ಅತ್ಯುತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾಗ, ತುಷಾರ್ ದೇಶಪಾಂಡೆ ಅಂತಿಮ ಓವರ್ನ ಅದ್ಭುತ ಬೌಲಿಂಗ್ ಮಾಡಿ ತಂಡವು ಆರು ರನ್ಗಳ ರೋಮಾಂಚಕ ಗೆಲುವು ಸಾಧಿಸಲು ಸಹಾಯ ಮಾಡಿದರು.
ಶನಿವಾರ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ರಾಜಸ್ಥಾನ್ ಮೊದಲು ಬ್ಯಾಟಿಂಗ್ ಮಾಡಿತು. ಧ್ರುವ್ ಜುರೆಲ್ 75, ಯಶಸ್ವಿ ಜೈಸ್ವಾಲ್ 55, ವೈಭವ್ ಸೂರ್ಯವಂಶಿ 33 ರನ್ಗಳ ಉತ್ತಮ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 210 ರನ್ ಕಲೆ ಹಾಕಿತು. ರಾಜಸ್ಥಾನ್ ನೀಡಿದ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಗುಜರಾತ್ ಕೇವಲ 6 ರನ್ಗಳಿಂದ ಸೋಲೊಪ್ಪಿಕೊಂಡಿತು.
ಗುಜರಾತ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ ನಷ್ಟಕ್ಕೆ ತಂಡವು 78 ರನ್ಗಳನ್ನು ಪೇರಿಸಿತ್ತು. ಸಾಯಿ ಸುದರ್ಶನ್ 73 ರನ್ ಗಳಿಸಿ ತಂಡಕ್ಕೆ ಭರವಸೆ ಮೂಡಿಸಿದ್ದರು. ಕುಮಾರ್ ಕುಶಾಗ್ರ 18, ಜೋಶ್ ಬಟ್ಲರ್ 26 ರನ್ಗಳಿಸಿ ಔಟಾದರು. ನಂತರ ಬಂದ ಗ್ಲೆನ್ ಗ್ಲೆನ್ ಫಿಲಿಪ್ಸ್ ಮತ್ತು ವಾಷಿಂಗ್ಟನ್ ಸುಂದರ್ ಒಂದಂಕಿ ರನ್ ದಾಟುವಲ್ಲಿ ವಿಫಲರಾದರು. ರಾಹುಲ್ ತೆವಾಟಿಯ 12, ಎಂ ಶಾರುಖ್ ಖಾನ್ 24 ರನ್ ಗಳಿಸಲಷ್ಟೇ ಶಕ್ತರಾದರು. ಈ ನಡುವೆ ಕಗಿಸೊ ರಬಾಡ ಮತ್ತು ರಶೀದ್ ಖಾನ್ ಜೋಡಿ ಗುಜರಾತ್ಗೆ ಗೆಲುವಿನ ಭರವಸೆ ಮೂಡಿಸಿತು. 30 ಬಾಲ್ಗೆ 43 ರನ್ಗಳ ಜೊತೆಯಾಟವಾಡಿ ಮೋಡಿ ಮಾಡಿದ್ದರು. ಆದರೆ, ಕೊನೆ ಓವರ್ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾಗಿ ರಶೀದ್ ಕ್ಯಾಚ್ ನೀಡಿ ಪೆವಿಲಿಯನ್ ಕಡೆ ನಡೆದರು. ಇದು ತಂಡದ ಜಯದ ಆಸೆ ಕಮರುವಂತೆ ಮಾಡಿತು. ಕೊನೆಗೆ ರಾಜಸ್ಥಾನ್ ರೋಚಕ ಜಯ ಸಾಧಿಸಿತು.
ರಾಜಸ್ಥಾನ್ ಪರ ರವಿ ಬಿಷ್ಣೋಯ್ ಬೌಲಿಂಗ್ನಲ್ಲಿ ಮೋಡಿ ಮಾಡಿದರು. ಪ್ರಮುಖ ನಾಲ್ಕು ವಿಕೆಟ್ ಕಿತ್ತು ಮಿಂಚಿದರು. ನಾಂಡ್ರೆ ಬರ್ಗರ್, ತುಷಾರ್ ದೇಶಪಾಂಡೆ, ರಿಯಾನ್ ಪರಾಗ್ ತಲಾ 1 ವಿಕೆಟ್ ಪಡೆದರು.

