ಬೆಂಗಳೂರು: ನಗರದ ಈಗಲ್ಟನ್ ರೆಸಾರ್ಟ್ನಲ್ಲಿ ಕಳೆದ ಮೂರು ದಿನಗಳಿಂದ ಬೀಡುಬಿಟ್ಟಿರೋ ಗುಜರಾತ್ ಕಾಂಗ್ರೆಸ್ ಶಾಸಕರಿಗೆ ಇಂದು ಪ್ರವಾಸ ಭಾಗ್ಯ ದೊರೆಯಲಿದೆ.
ಇಂದಿನಿಂದ ಎರಡ್ಮೂರು ದಿನಗಳ ಕಾಲ ಬೆಂಗಳೂರಿಗೆ ಹತ್ತಿರದಲ್ಲಿಯೇ ಇರುವ ಪ್ರೇಕ್ಷಣೀಯ ಮತ್ತು ಪ್ರವಾಸಿ ತಾಣಗಳನ್ನು ತೋರಿಸುವ ಕೆಲಸ ನಡೆಯಲಿದೆ. ಇದರ ಉಸ್ತುವಾರಿಯೂ ಡಿಕೆ ಬ್ರದರ್ಸ್ ಹೆಗಲಿಗೆ ಬಿದ್ದಿದೆ. ವಿಶೇಷ ಎಸಿ ಬಸ್ನಲ್ಲಿ ಬಿಗಿ ಭದ್ರತೆ ನಡುವೆ ಶಾಸಕರನ್ನು ಟ್ರಿಪ್ಗೆ ಕರೆದುಕೊಂಡು ಹೋಗಲಿದ್ದಾರೆ.
ಗುಜರಾತ್ ಶಾಸಕರ ರೆಸಾರ್ಟ್ ರಾಜಕಾರಣ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರದಂದು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಇಂಧನ ಸಚಿವ ಡಿಕೆ ಶಿವಕಮಾರ್, ನಮ್ಮ ಗುಜರಾತ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ. ಅವರಿಗೆ ಅತಿಥ್ಯ ನಿಡೋದು ನಮ್ಮ ಕೆಲಸ ನಾವು ಮಾಡ್ತಿದ್ದೇವೆ. ನಾವು ಯಾರನ್ನು ಹಿಡಿದಿಟ್ಟುಕೊಂಡಿಲ್ಲ. ಯಾರು ದಡ್ಡರಲ್ಲ, ಚಿಕ್ಕ ಮಕ್ಕಳಲ್ಲ ಅಂತ ಹೇಳಿದ್ರು. ಬೆಂಗಳೂರಿನ ಐಟಿ ಕ್ಷೇತ್ರ, ಇನ್ನಿತರ ಪ್ರವಾಸಿ ಸ್ಥಳ ವೀಕ್ಷಣೆ ಮಾಡಿಸುತ್ತೇವೆ. ಯಾರ ಮೊಬೈಲ್ ಕಿತ್ತುಕೊಂಡಿಲ್ಲ. ಯಾರನ್ನು ಬಂಧಿಸಿಲ್ಲ. ಶಾಸಕರ ಸಭೆಯ ಬಳಿಕ ಅವರೆಲ್ಲ ಮೀಡಿಯಾ ಮುಂದೆ ಬರಲಿದ್ದಾರೆ. 43 ಶಾಸಕರು ಇಲ್ಲಿ ಇದ್ದಾರೆ. ಮತ್ತಷ್ಟು ಜನ ಬರ್ತಾರೆ. ನಾಲ್ವರು ಐವರು ಯಾರೂ ತಪ್ಪಿಸಿಕೊಂಡಿಲ್ಲ. ಎಲ್ಲರೂ ಒಟ್ಟಿಗೆ ಇದ್ದಾರೆ. ಎಲ್ಲಿಗೆ ಪ್ರವಾಸ ಅನ್ನುವುದನ್ನ ಇನ್ನು ನಿರ್ಧರಿಸಿಲ್ಲ. ದೇವಸ್ಥಾನ, ಟೂರಿಸಂ ಸ್ಥಳಗಳಿಗೆ ಕಳಿಸುತ್ತೇವೆ ಅಂತ ಹೇಳಿದ್ರು.
ಕುದುರೆ ವ್ಯಾಪಾರ ಭಯದಲ್ಲಿ ರೆಸಾರ್ಟ್ ರಾಜಕೀಯ ಮಾಡ್ತಿದ್ದೀರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ದೇಶಾದ್ಯಂತ ಕುದುರೆ ವ್ಯಾಪಾರ ನಡೆಯುತ್ತಿದೆ. ಅಧಿಕಾರ ಬಳಸಿಕೊಂಡು ಕುದುರೆ ವ್ಯಾಪಾರ ಮಾಡ್ತಿದ್ದಾರೆ. ಇದನ್ನ ತಪ್ಪಿಸಲು ಎಲ್ಲರು ಬಂದಿದ್ದಾರೆ. ಬಿಜೆಪಿ ಐದು ವರ್ಷ ಇದ್ದಾಗ ಏನ್ ಮಾಡಿತ್ತು? ಯಾರನ್ನ ಎಲ್ಲಿಗೆ ಕರೆದುಕೊಂಡು ಹೋಗಿದ್ರು? ರೆಸಾರ್ಟ್ ರಾಜಕೀಯ ಮಾಡಿದ್ರು. ಅದನ್ನೇ ಈಗ ನಾವು ಮಾಡುತ್ತಿದ್ದೇವೆ ಅಂತ ಅವರು ಹೇಳಿದ್ರು.