ಗಾಂಧೀನಗರ: 11 ಕೋಟಿ ರೂ. ಮೌಲ್ಯದ ಕಿರೀಟವನ್ನು ರಾಮಲಲ್ಲಾ ಮೂರ್ತಿಗೆ ಗುಜರಾತ್ನ ಸೂರತ್ ಮೂಲದ ವಜ್ರ ವ್ಯಾಪಾರಿ (Gujarat diamond trader) ದೇಣಿಗೆ ನೀಡಿದ್ದಾರೆ.
ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿ ಮಾಲೀಕರಾದ ಮುಕೇಶ್ ಪಟೇಲ್ (Mukesh Patel) ದೇಣಿಗೆ ನೀಡಿರುವ ವ್ಯಕ್ತಿ. ಸೂರತ್ನಲ್ಲಿ ವಜ್ರ ವ್ಯಾಪಾರಿಯಾಗಿರುವ ಮುಕೇಶ್ ಅವರು ಪ್ರಭು ಶ್ರೀರಾಮನಿಗಾಗಿ 6 ಕೆ.ಜಿ ತೂಕದ ಚಿನ್ನ ಮತ್ತು ವಜ್ರಗಳಿಂದ ತಯಾರಿಸಿರುವ ಕಿರೀಟವನ್ನು ಕೊಡುಗೆಯಾಗಿ ನೀಡಿದ್ದಾರೆ.
ನಿನ್ನೆಯಷ್ಟೇ ನಡೆದ ಅಯೋಧ್ಯೆಯ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ (Ram Lalla Pran Prathistha ceremony) ಇಡೀ ದೇಶವೇ ಸಾಕ್ಷಿಯಾಗಿತ್ತು. ಪ್ರಭು ಶ್ರೀರಾಮ ಚಿನ್ನದ ಅಭರಣಗಳಿಂದ ಕಂಗೊಳಿಸುತ್ತಿದ್ದನು. ಇದೇ ಹೊತ್ತಲ್ಲಿ ಸೂರತ್ನ (Surat) ವಜ್ರ ವ್ಯಾಪಾರಿ ನೀಡಿರುವ 11 ಕೋಟಿ ರೂಪಾಯಿ ಮೌಲ್ಯ ಬೆಲೆ ಬಾಳುವ ಚಿನ್ನ ಮತ್ತು ವಜ್ರಗಳಿಂದ ತಯಾರಿಸಿರುವ ಕಿರೀಟ ದಾನ ಮಾಡಿದ್ದಾರೆ . ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!
ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಕುಟುಂಬ ಸಮೇತರಾಗಿ ಮುಕೇಶ್ ಪಟೇಲ್ ಅಯೋಧ್ಯೆಗೆ (Ayodhya Ram Mandir) ಆಗಮಿಸಿದ್ದರು. ಬಳಿಕ ಖುದ್ದಾಗಿ ಮಂದಿರದ ಪ್ರಧಾನ ಅರ್ಚಕರು ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿಗಳಿಗೆ ಸೂಕ್ಷ್ಮವಾಗಿ ರಚಿಸಲಾದ ಕಿರೀಟವನ್ನು ಹಸ್ತಾಂತರ ಮಾಡಿದ್ದಾರೆ.
ಹಲವಾರು ಸಂಶೋಧನೆಯ ಬಳಿಕ ಮುಕೇಶ್ ಅವರು ಚಿನ್ನ ಮತ್ತು ವಜ್ರದ ಕಿರೀಟವನ್ನು ನೀಡಲು ನಿರ್ಧರಿಸಿದ್ದರು. ನಂತರ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ರಾಮನ ಪ್ರತಿಮೆಯನ್ನು ಅಳೆಯಲು ಅಯೋಧ್ಯೆಗೆ ಕಳುಹಿಸಿದ್ದರು. ಆ ಅಧಾರದ ಮೇರೆಗೆ ಕಿರೀಟವನ್ನು ತಯಾರಿಸಲಾಗಿದೆ. ಉದ್ಘಾಟನೆಯಾದ ರಾಮಮಂದಿರದ ಶ್ರೀರಾಮನಿಗೆ ಇನ್ನಿತರ ಕೆಲವು ಆಭರಣಗಳನ್ನೂ ಮುಕೇಶ್ ಪಟೇಲ್ ನೀಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಖಜಾಂಚಿ ದಿನೇಶ್ ಭಾಯಿ ನವಿಯಾ ತಿಳಿಸಿದ್ದಾರೆ.
ಕಿರೀಟದ ವಿಶೇಷತೆ?: ಕಿರೀಟ ಒಟ್ಟು ಆರು ಕೆ.ಜಿ ಇದೆ. ವಿವಿಧ ಗಾತ್ರದ ವಜ್ರಗಳು, ಮಾಣಿಕ್ಯಗಳು, ಮುತ್ತುಗಳು ಮತ್ತು ನೀಲಮಣಿಗಳ ಜೊತೆಗೆ ನಾಲ್ಕು ಕೆಜಿಗಳಷ್ಟು ಚಿನ್ನವನ್ನು ಒಳಗೊಂಡಿದೆ. ಒಟ್ಟಾರೆಯಾಗಿ ಕಿರೀಟದ ಮೌಲ್ಯ ಬರೋಬ್ಬರಿ 11 ಕೋಟಿ ರೂಪಾಯಿಗಳಾಗಿವೆ.