ಗಾಂಧಿನಗರ: ಬುಡಕಟ್ಟು ಬಾಲಕಿಯನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ 17 ವರ್ಷದ ಮುಸ್ಲಿಂ ಅಪ್ರಾಪ್ತನನ್ನು ಕೆಲ ಯುವಕರು ಸೇರಿ ಹೊಡೆದು ಹತ್ಯೆ ಮಾಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ.
ಫೈಯಾಜ್ ಕೊಲೆಯಾದ ಬಾಲಕ. ಬೋರಿದ್ರ ಗ್ರಾಮದ ಬುಡಕಟ್ಟು ಜನಾಂಗದ ಯುವತಿಯನ್ನು ಪ್ರೀತಿಸಿದ್ದ ಈ ಕಾರಣಕ್ಕೆ ಅಲ್ಲಿ 12 ರಿಂದ 13 ಮಂದಿ ಯುವಕರು ಸೇರಿ ಅವನನ್ನು ದೊಣ್ಣೆಯಿಂದ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಫೈಯಾಜ್ ತಂದೆ ಮೊಹಮ್ಮದ್ ಸುಲ್ತಾನ್ ಅಬ್ದುಲ್ ರಹೀಂ ಖುರೇಷಿ, ನನ್ನ ಮಗ ಅವನ ಐದು ಜನ ಗೆಳೆಯರೊಂದಿಗೆ ಅಂಕಲೇಶ್ವರಕ್ಕೆ ಹೋಗಿದ್ದ. ನಂತರ ನನ್ನ ಪತ್ನಿ ಅವನಿಗೆ ಕರೆ ಮಾಡಿದಳು. ಆಗ ಅವನು ನಮ್ಮನ್ನು ಬೋರಿದ್ರಗೆ ಬರಲು ಹೇಳಿದ. ನಾವು ಅಲ್ಲಿ ಹೋಗಿ ನೋಡಿದಾಗ ಅವನಿಗೆ ತುಂಬಾ ಜನ ಹೊಡೆದಿದ್ದರಿಂದ ಗಾಯಗಳಿಂದ ಸಹಾಯ ಕೇಳುತ್ತಿದ್ದ ಎಂದು ಹೇಳಿದ್ದಾರೆ.
ನಾವು ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅವನ ಕೈ ಕಾಲು ಹೊಟ್ಟೆಗೆ ಗಂಭೀರವಾಗಿ ಗಾಯಗಳಾಗಿದ್ದರಿಂದ ಫೈಯಾಜ್ ಬದುಕುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿದರು. ನಂತರ ನಾನು ಅವನನ್ನು ಅಲ್ಲಿಂದ ಸೂರತ್ನ ಆಸ್ಪತ್ರೆಗೆ ಕರೆದುಕೊಂಡು ಬಂದೆ ವೈದ್ಯರು ಅವನಿಗೆ ಚಿಕಿತ್ಸೆ ನೀಡಲು ಪ್ರಯತ್ನ ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗ ಮೃತಪಟ್ಟ ಎಂದು ಹೇಳಿದ್ದಾರೆ.
ನನ್ನ ಮಗ ಯಾವ ತಪ್ಪು ಮಾಡಿಲ್ಲ. ಅವನನ್ನು ತುಂಬಾ ಜನರು ಹೊಡೆದು ಹತ್ಯೆ ಮಾಡಿದ್ದಾರೆ. ನನ್ನ ಮಗನಿಗೆ ನ್ಯಾಯ ಕೊಡಿಸಿ. ನನ್ನ ಮಗನನ್ನು ಥಳಿಸಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಖುರೇಷಿ ಒತ್ತಾಯಿಸಿದ್ದಾರೆ.
ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ಸುಮಾರು 12 ರಿಂದ 13 ಯುವಕರು ಜಗಡಿಯಾದ ತಹಸಿಲ್ ಎಂಬಲ್ಲಿ ಫೈಯಾಜ್ ಎಂಬ ಯುವಕನ ಮೇಲೆ ಮಾರಣಂತಿಕ ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಜಗಡಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಆಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗೆ ಶೋಧ ನಡೆಯುತ್ತಿದೆ ಎಂದು ಹೇಳಿದ್ದಾರೆ.