ಮೈಸೂರು: ಸದ್ಯಕ್ಕೆ ಸರ್ಕಾರ ಸುಭದ್ರವಾಗಿದೆ. ಯಾವುದೇ ಸಮಸ್ಯೆ ಇಲ್ಲ. ಹೀಗಾಗಿ ಆತಂಕವೂ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರ ಐದು ವರ್ಷ ಇರುತ್ತದೆ ಎಂದು ಹೇಳೋಕೆ ಆಗಲ್ಲ ಎಂದು ಸಚಿವ ಜಿ.ಟಿ ದೇವೇಗೌಡ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿಶ್ವಾಸ ಮತಯಾಚನೆ ಮಾಡಲು ರಾಷ್ಟ್ರಕ್ಕೆ ಕೇಳುವ ಹಾಗೆ ದಿನಾಂಕ ಕೇಳಿದ್ದಾರೆ. ಸ್ಪೀಕರ್ ಕೂಡ ಬೇಗ ದಿನಾಂಕ ತಿಳಿಸಿ ಎಂದು ಹೇಳಿದ್ದಾರೆ. ದಿನಾಂಕ ಕೊಟ್ಟಿರುವ ದಿನ ವಿಶ್ವಾಸ ಮತಯಾಚನೆ ಮಂಡಿಸುತ್ತಾರೆ. ಎಲ್ಲರೂ ಬರುತ್ತಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾವುದೇ ಆತಂಕ ಬೇಡ. ಸದ್ಯದ ಪರಿಸ್ಥಿತಿಯಲ್ಲಿ ಐದು ವರ್ಷ ಸರ್ಕಾರ ಇರುತ್ತದೆ ಎಂಬುದನ್ನು ಹೇಳುವುದಕ್ಕೆ ಆಗಲ್ಲ. ಆದರೆ ವಿಶ್ವಾಸ ಮತದಲ್ಲಿ ಗೆಲ್ಲುತ್ತೀವಿ ಅಷ್ಟು ಮಾತ್ರ ನಾನು ಹೇಳಬಲ್ಲೆ ಎಂದು ಹೇಳಿದರು.
ಎಂಟಿಬಿ ನಾಗರಾಜ್ ರಾಜೀನಾಮೆಯನ್ನು ವಾಪಾಸ್ ತೆಗೆದು ಕೊಳ್ಳುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಇದು ನನಗೆ ಗೊತ್ತಿಲ್ಲ. ರಾಷ್ಟ್ರಪತಿ ಅವರು ಮೈಸೂರಿಗೆ ಬಂದಿದ್ದರು. ಹೀಗಾಗಿ ಅವರನ್ನು ಸ್ವಾಗತ ಮಾಡಲು ಮೈಸೂರಿಗೆ ಬಂದಿದ್ದೇನೆ. ಹೀಗಾಗಿ ಅದರ ಬಗ್ಗೆ ಗೊತ್ತಾಗಿಲ್ಲ ಎಂದರು.
ರಿವರ್ಸ್ ಆಪರೇಷನ್ ಮಾಡುವ ಬಗ್ಗೆ ಬಿಜೆಪಿಯ ಎಲ್ಲರಿಗೂ ಭಯ ಇದೆ. ಆದರೆ ಮುಂಬೈಗೆ ಮತ್ತೆ ಹೋಗುವ ಅಗತ್ಯವಿಲ್ಲ. ಎಲ್ಲವೂ ಇಲ್ಲೇ ನಡೆಯುತ್ತದೆ. ಅತೃಪ್ತ ಶಾಸಕರನ್ನು ಮನವೊಲಿಸುವ ಪ್ರಯತ್ನವನ್ನು ಎಲ್ಲರೂ ಮಾಡುತ್ತಿದ್ದಾರೆ ಎಂದು ಜಿಟಿ ದೇವೇಗೌಡ ಹೇಳಿದರು.