ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು ಕೋಲಾರ ಜಿಲ್ಲೆಗೆ ಭೇಟಿ ನಿಡಿದ್ದು, ಈ ಬೆನ್ನಲ್ಲೇ ಕೋಲಾರ ಕಾಂಗ್ರೆಸ್ (Congress) ನಲ್ಲಿ ಗುಂಪು ರಾಜಕೀಯ ಶುರುವಾಗಿದೆ.
ಸಿದ್ದರಾಮಯ್ಯ ಮೇಲೆ ಕೆ.ಹೆಚ್. ಮುನಿಯಪ್ಪ (K H Muniyappa) ಮುನಿಸು ಮುಂದುವರಿಸಿದ್ದಾರೆ. ಮಾಜಿ ಸಿಎಂ ಕೋಲಾರಕ್ಕೆ ಬಂದರೂ ಮುನಿಯಪ್ಪ ಅಂತರಕಾಯ್ದುಕೊಂಡಿದ್ದಾರೆ. ಕೆ.ಹೆಚ್.ಮುನಿಯಪ್ಪ ಹಾಗೂ ಮಗಳು ರೂಪ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ಈ ಮೂಲಕ ಕೆ.ಹೆಚ್. ಮುನಿಯಪ್ಪ ಬೆಂಬಲಿಗರು ಅಂತರ ಕಾಯ್ದುಕೊಂಡಿರುವುದನ್ನು ಗಮನಿಸಬಹುದಾಗಿದೆ.
ಇತ್ತ ಮುನಿಯಪ್ಪ ಅವರು ಗುಜರಾತ್ ಚುನಾವಣಾ (Gujrat Election) ಪ್ರಚಾರಕ್ಕೆ ತೆರಳಿರುವುದಾಗಿ ಸಂದೇಶ ರವಾನಿಸಿದ್ದಾರೆ. ಮುನಿಯಪ್ಪ ಜೊತೆ ಬಿಕೆ ಹರಿಪ್ರಸಾದ್ ಕೂಡಾ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸೇರಿದಂತೆ ಗುಜರಾತ್ ಕೈ ನಾಯಕರ ಜತೆ ಮುನಿಯಪ್ಪ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕಾಗಿ ಸಿದ್ದರಾಮಯ್ಯಗೆ ಸಿದ್ಧವಾಯ್ತು ಹೈಫೈ ಪ್ರಚಾರದ ಬಸ್
ಸಿದ್ದರಾಮಯ್ಯ ಕೋಲಾರಕ್ಕೆ ಬಂದರೂ, ಅಂತರ ಕಾಯ್ದಕೊಂಡ ಬಗ್ಗೆ ಪ್ರತಿಕ್ರಿಯಿಸಿರೋ ಮುನಿಯಪ್ಪ ಪುತ್ರಿ ಶಾಸಕಿ ರೂಪಾ ಶಶಿಧರ್, ಭಿನ್ನಾಭಿಪ್ರಾಯ ಇದೆ ಅನ್ನೋದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ತುಂಬಾ ಭಿನ್ನಾಭಿಪ್ರಾಯಗಳಿದ್ದರೂ, ಎಲ್ಲದಕ್ಕಿಂತ ಮುಖ್ಯ ಪಕ್ಷ. ಸಿದ್ದರಾಮಯ್ಯ ಭಗೀರಥರ ರೀತಿ ಕೋಲಾರ ಜಿಲ್ಲೆಗೆ ಕೊಡುಗೆ ಕೊಟ್ಟಿದ್ದಾರೆ. ಈ ದಿನದ ಕಾರ್ಯಕ್ರಮ ಬಹಳ ಕಡಿಮೆ ಸಮಯದಲ್ಲಿ ನಮಗೆ ಗೊತ್ತಾಯ್ತು. ಮೊದಲೇ ನಾವು ಕಾರ್ಯಕ್ರಮಗಳನ್ನು ನಿಗದಿ ಮಾಡಿಕೊಂಡಿರೋದ್ರಿಂದ ಇಂದು ಭೇಟಿಯಾಗಿಲ್ಲ. ಇಂದು ನಾನು ಯಾಕೆ ಬರೋಕೆ ಆಗ್ತಿಲ್ಲ ಅನ್ನೋದನ್ನು ಸಿಎಲ್ಪಿ ನಾಯಕರನ್ನು ಭೇಟಿಯಾಗಿಯೇ ತಿಳಿಸಿದ್ದೇನೆ ಎಂದರು.
ನನ್ನ ತಂದೆಯವರನ್ನು ಎಐಸಿಸಿ ನಾಯಕರು ಗುಜರಾತ್ಗೆ ಕಳುಹಿಸಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರಿಗೂ ಎರಡು ದಿನದ ಮುಂಚೆಯೇ ಮಾಹಿತಿ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದೇ ವೇಳೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಸಿಎಲ್ಪಿ ನಾಯಕರು ರಾಜ್ಯದಲ್ಲಿ ಎಲ್ಲಿ ನಿಲ್ತೀವಿ ಅಂದ್ರು ಸ್ವಾಗತ ಮಾಡೋದು ನಮ್ಮ ಜವಾಬ್ದಾರಿ ಅಂತಾ ಹೇಳಿದ್ದಾರೆ.