ಬೆಂಗಳೂರು: ಪ್ರೀತಿಸಿದಾಕೆಗೆ ಮೋಸ ಮಾಡಿ ಮತ್ತೊಬ್ಬಳೊಂದಿಗೆ ಹಸೆಮಣೆಯೇರುವ ಮೊದಲೇ ಮದುವೆ ಮುರಿದುಬಿದ್ದ ಘಟನೆಯೊಂದು ನಗರದಲ್ಲಿ ನಡೆದಿದೆ.
ನೆಲಮಂಗಲ ನಿವಾಸಿ ಅರ್ಜುನ್ ಎಂಬಾತ ಮೈಸೂರಿನ ಯುವತಿಯೊಬ್ಬಳನ್ನು ಕಳೆದ 11 ವರ್ಷದಿಂದ ಪ್ರೀತಿಸುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿ ಇದೀಗ ದಿಢೀರ್ ಅಂತ ಮತ್ತೊಬ್ಬಾಕೆಯನ್ನು ವರಿಸಲು ರೆಡಿಯಾಗಿದ್ದ. ಅಂತೆಯೇ ನೆಲಮಂಗಲದ ಅರಿಶಿನಕುಂಟೆ ಗ್ರಾಮದ ಸಪ್ತಗಿರಿ ಕಲ್ಯಾಣ ಮಂಟಪದಲ್ಲಿ ಮದುವೆಗೆ ಭರ್ಜರಿ ತಯಾರಿನೂ ನಡೆದಿತ್ತು.
ಈ ಮಧ್ಯೆ ವರ ಅರ್ಜುನ್ ಗುರುವಾರ ರಾತ್ರಿ `ಮಿಸ್ ಯೂ’ ಅಂತ ವಾಟ್ಸಾಪ್ ಮೂಲಕ ತನ್ನ ಪ್ರಿಯತಮೆಗೆ ಮೆಸೇಜ್ ಹಾಕಿದ್ದ. ಇದರಿಂದ ಆತಂಕಗೊಂಡ ಯುವತಿ ಮೈಸೂರಿನಿಂದ ನೇರವಾಗಿ ನೆಲಮಂಗಲಕ್ಕೆ ಬಂದಿದ್ದಾಳೆ. ಈ ವೇಳೆ ಆಕೆಗೆ ಲವ್ವರ್ ಬೇರೆ ಮದುವೆಯಾಗುತ್ತಿರೋ ವಿಚಾರ ತಿಳಿಯಿತು. ಬಳಿಕ ಅಲ್ಲಿಂದ ಯುವತಿ ಮುಂಜಾನೆ 6.30ರ ಸಮಯಕ್ಕೆ ಮದುವೆ ಮಂಟಪಕ್ಕೆ ಬಂದು ರಂಪಾಟ ನಡೆಸಿದ್ದಾಳೆ. ಈ ವೇಳೆ ನೆರೆದವರು ಯುವತಿಯನ್ನು ಮನವೊಲಿಸಲು ಯತ್ನಿಸಿದ್ದಾರೆ.
ಯುವತಿಯ ಗಲಾಟೆಯಿಂದ ವಧುವಿನ ಕಡೆಯವರು ಆತಂಕಗೊಂಡಿದ್ದಾರೆ. ಅಲ್ಲದೇ ಮದುವೆಗೆಂದು ಬಂದಿದ್ದರು ನಿರಾಸೆಯಿಂದ ವಾಪಾಸ್ ತೆರಳಿದ್ದಾರೆ. ಸದ್ಯ ತನಗಾದ ಮೋಸಕ್ಕೆ ಯುವತಿ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.