ಲಕ್ನೋ: ಹಣ ಎಣಿಸಲು ವರನಿಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ವಧು ಮದುವೆಯನ್ನೇ ಕ್ಯಾನ್ಸಲ್ (Marriage Cancel) ಮಾಡಿದ ಘಟನೆ ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ತಾಳಿ ಕಟ್ಟುವ ಶಾಸ್ತ್ರದ ವೇಳೆ ವರನ ವರ್ತನೆಯಿಂದ ಅರ್ಚಕರಿಗೆ ಸಂಶಯ ಬಂದಿದೆ. ಅಲ್ಲದೆ ಅರ್ಚಕ ಈ ವಿಚಾರವನ್ನು ವಧುವಿನ ಮನೆಯವರಿಗೆ ತಿಳಿಸಿದ್ದಾರೆ. ಇದನ್ನು ಅರಿತ ವಧು ಧೈರ್ಯದಿಂದ ಹೆಜ್ಜೆ ಇಟ್ಟಿದ್ದಾಳೆ.
ವಧುವಿನ ಮನೆಯವರು ವರನಿಗೆ ಪರೀಕ್ಷೆಯೊಂದನ್ನು ನೀಡುವುದಾಗಿ ಹೇಳಿತ್ತು. ಇದಕ್ಕೆ ವರನ ಕಡೆಯವರು ಒಪ್ಪಿಕೊಂಡರು. ಅಂತೆಯೇ ವಧುವಿನ ಮನೆಯವರು ವರನಿಗೆ 10 ರೂ.ವಿನ 30 ನೋಟುಗಳನ್ನು ಎಣಿಸುವಂತೆ ಕೊಟ್ಟಿದ್ದಾರೆ. ಈ ವೇಳೆ ವರಣಿಗೆ ಹಣ ಎಣಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ವರ ಮಾನಸಿಕ ಅಸ್ವಸ್ಥ ಎಂಬುದು ಬಯಲಾಯಿತು.
ವರ ಮಾನಸಿಕ ಅಸ್ವಸ್ಥ ಎಂಬುದನ್ನು ವಧುವಿನ ಕಡೆಯವರಿಗೆ ಹೇಳದೆ ಮುಚ್ಚಿಟ್ಟಿದ್ದರು. ಹೀಗಾಗಿ ಕೋಪಗೊಂಡ ವಧು ತಕ್ಷಣವೇ ವೇದಿಕೆಯಿಂದ ಹೊರನಡೆದಿದ್ದಾಳೆ. ಇದು ಎರಡು ಕುಟುಂಬಗಳ ನಡುವೆ ಗೊಂದಲಕ್ಕೆ ಕಾರಣವಾಯಿತು. ನಂತರ ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳೀಯ ಪೊಲೀಸರನ್ನು ಕರೆಸಲಾಯಿತು. ಇದನ್ನೂ ಓದಿ: ಪತ್ನಿ ನೇಣುಬಿಗಿದುಕೊಂಡ ಬೆನ್ನಲ್ಲೇ ಪತಿಯೂ ಸೂಸೈಡ್
ವರನ ಕುಟುಂಬವು ಅವನ ಮಾನಸಿಕ ಅಸ್ವಸ್ಥತೆಯನ್ನು ಮರೆಮಾಚಿದೆ ಎಂದು ವಧುವಿನ ಕುಟುಂಬದವರು ಆರೋಪಿಸಿದ್ದಾರೆ. ಅಲ್ಲದೆ ವಧು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಹೀಗಾಗಿ ಮದುವೆಯನ್ನೇ ಕ್ಯಾನ್ಸಲ್ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ವರ ಮತ್ತು ಅವರ ಕುಟುಂಬ ಬರಿಗೈಯಲ್ಲಿ ಮರಳಬೇಕಾಯಿತು.
ಈ ಸಂಬಂಧ ವಧುವಿನ ಸಹೋದರ ಮಾಧ್ಯಮದವರೊಂದಿಗೆ ಮಾತನಾಡಿ, ಸಾಮಾನ್ಯವಾಗಿ ಮದುವೆಗಳು ಉತ್ತಮ ನಂಬಿಕೆಯಲ್ಲಿ ನಡೆಯುತ್ತವೆ. ಅಲ್ಲದೆ ಈ ಯುವಕ ಬ್ರೋಕರ್ ನ ಹತ್ತಿರದ ಸಂಬಂಧಿಯಾಗಿದ್ದರು. ಹಾಗಾಗಿ ಆತನನ್ನು ನಂಬಿ ನಾವು ಭೇಟಿಯಾಗಿರಲಿಲ್ಲ. ಆದರೆ ಮದುವೆ ದಿನ ಅರ್ಚಕರು, ವರನ ವಿಚಿತ್ರ ವರ್ತನೆಯ ಬಗ್ಗೆ ನಮಗೆ ತಿಳಿಸಿದಾಗ ವಿಚಾರ ಬೆಳಕಿಗೆ ಬಂತು. ಹೀಗಾಗಿ ನನ್ನ ಸಹೋದರಿ ಕೂಡ ಅವನನ್ನು ಮದುವೆಯಾಗಲು ನಿರಾಕರಿಸಿದಳು ಎಂದು ತಿಳಿಸಿದರು.