ಚಿಕ್ಕಮಗಳೂರು: ಇಳಿಜಾರಿನಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನವವಿವಾಹಿತ ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಳೇಕೋಟೆ ಬಳಿ ನಡೆದಿದೆ.
ಮೃತನನ್ನು ಹರೀಶ್(28) ಎಂದು ಗುರುತಿಸಲಾಗಿದೆ. ಹರೀಶ್ ಕಳೆದ 45 ದಿನಗಳ ಹಿಂದಷ್ಟೆ ಮದುವೆಯಾಗಿದ್ದರು. ಆರ್.ಆರ್.ಎಸ್. ಸಂಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಹರೀಶ್, ಶನಿವಾರ ಮಧ್ಯಾಹ್ನ ಹಳೇಕೋಟೆಯಿಂದ ಮೂಡಿಗೆರೆಗೆ ಬರುವಾಗ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ಚಕ್ರ ಗುಂಡಿಗೆ ಇಳಿದಿದ್ದರಿಂದ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್ ಅಡಿ ಸಿಲುಕಿದ ಹರೀಶ್ ಮೇಲೇಳಲಾಗದೆ ಸಾವನ್ನಪ್ಪಿದ್ದಾರೆ.
ಇತ್ತ ಮನೆಯವರು, ಸ್ನೇಹಿತರು ಫೋನ್ ಮಾಡಿದರು ಫೋನ್ ಪಿಕ್ ಮಾಡುತ್ತಿರಲಿಲ್ಲ. ಟ್ರ್ಯಾಕ್ಟರ್ ಕೂಡ ಇಲ್ಲ ಎಂದು ಮನೆಯವರು, ಸ್ನೇಹಿತರು ಹುಡುಕಾಡಿದಾಗ ಈ ದುರ್ಘಟನೆ ಸಂಭವಿಸಿರೋದು ರಾತ್ರಿ ಬೆಳಕಿಗೆ ಬಂದಿದೆ. ಮಲೆನಾಡಿನ ತಿರುವುಗಳಲ್ಲಿನ ಇಳಿಜಾರಿನಲ್ಲಿ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣಕ್ಕೆ ಸಿಗದೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ದೇವಸ್ಥಾನದ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡಿ ದೇಶವನ್ನು ಅದಾನಿ, ಅಂಬಾನಿಗೆ ಒತ್ತೆ ಇಡುತ್ತಿದೆ: ಸಿದ್ದರಾಮಯ್ಯ
ಕಳೆದ ಒಂದೂವರೆ ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಹರೀಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಲೂಕಿನ ಮಾಕೋನಹಳ್ಳಿಯ ಬಳಿಯೂ ಟಿಂಬರ್ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ರಸ್ತೆಯ ಅಪ್ ಹತ್ತಲಾಗದೆ ಇಳಿಜಾರಿನಲ್ಲಿ ಹಿಮ್ಮುಖವಾಗಿ ಸುಮಾರು 50 ಮೀಟರ್ ನಷ್ಟು ದೂರ ಬಂದು ಪಲ್ಟಿಯಾಗಿತ್ತು. ಈ ವೇಳೆ ಗಾಡಿ ಕಂಟ್ರೋಲ್ಗೆ ಸಿಗುತ್ತಿಲ್ಲ ಎಂದು ಡ್ರೈವರ್ ಗೆ ಅರಿವಾದಾಗ ಚಾಲಕ ಟ್ರ್ಯಾಕ್ಟರ್ ನಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾನೆ.