ಜೈಪುರ: 22 ವರ್ಷದ ವರ ವರದಕ್ಷಿಣೆಯಾಗಿ ಬೈಕ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮದುವೆಯನ್ನು ಅರ್ಧಕ್ಕೆ ನಿಲ್ಲಿಸಿ ಮಂಟಪದಿಂದಲೇ ಓಡಿಹೋಗಿರುವ ಘಟನೆ ಜೈಪುರದ ಬಾರನ್ ಜಿಲ್ಲೆಯಲ್ಲಿ ನಡೆದಿದೆ.
ಇದೀಗ ವಧು, ವರ ಮತ್ತು ಆತನ ತಂದೆಯ ವಿರುದ್ಧ ವರದಕ್ಷಿಣೆ ಕೇಸನ್ನು ಬಾರನ್ ಜಿಲ್ಲೆಯ ಹರ್ನಾವಾಡಾ ಶಹಾಜಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.
ಘಟನೆ ವಿವರಣೆ?
ಝಾಲಾವಾರ್ ಜಿಲ್ಲೆಯ ವರ ಮೇಘರಾಜ್ ಲೋಧಾನಿಗೆ ದಿಗೋದಜಾಗೀರ್ ಗ್ರಾಮದ ವಧು ಮೋನಾ ಕುಮಾರಿ ಜೊತೆ ಶುಕ್ರವಾರ ಮದುವೆ ನಿಶ್ಚಯವಾಗಿತ್ತು. ಅದರಂತೆಯೇ ವರ ಮತ್ತು ಕುಟುಂಬದವರು ಮದುವೆ ಮಂಟಪಕ್ಕೆ ಬಂದು ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದರು. ಇದೇ ವೇಳೆ ವರ ಉದ್ದೇಶ ಪೂರ್ವಕವಾಗಿಯೇ ತನಗೆ ಬೈಕ್ ಬೇಕೆಂದು ಹಠ ಹಿಡಿದಿದ್ದಾನೆ.
ಇತ್ತ ವಧುವಿನ ಪೋಷಕರು ಬೈಕ್ ಕೊಡಲು ನಿರಾಕರಿಸಿದರು. ಇದರಿಂದ ಕೋಪಕೊಂಡ ವರ ಲೋಧಾ ಮದುವೆ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿ ಮಂಟಪದಿಂದಲೇ ಪರಾರಿಯಾಗಿದ್ದಾನೆ. ಪರಿಣಾಮ ಗಾಬರಿಯಾದ ವಧು, ಪೋಷಕರು ಮತ್ತು ಸಂಬಂಧಿಕರು ಹರ್ನಾವಾಡಾ ಶಹಾಜಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ನಂತರ ವರ ಮತ್ತು ಆತನ ತಂದೆಯ ವಿರುದ್ಧ ವರದಕ್ಷಿಣೆ ಕೇಸ್ ದಾಖಲಿಸಿದ್ದಾರೆ ಎಂದು ರಾಮೇಶ್ವರ್ ಚೌಧರಿ ತಿಳಿಸಿದ್ದಾರೆ.
ಪೊಲೀಸರು ವಧು ನೀಡಿದ ದೂರಿನ ಅನ್ವಯ ವರ ಮತ್ತು ಆತನ ತಂದೆಯ ವಿರುದ್ಧ ವರದಕ್ಷಿಣೆ ಪ್ರಕರಣವನ್ನು ದಾಖಲಿಸಿದ್ದು, ಅವರಿಗಾಗಿ ಹುಡುಕಾಟ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ವರ ಶನಿವಾರ ಮುಂಜಾನೆ ವಧುನಿನ ಮನೆಯ ಬಳಿ ಬಂದಿದ್ದು, ಮದುವೆಯಾಗುತ್ತೇನೆ ಎಂದು ಹೇಳಿದ್ದಾನೆ. ನಂತರ ಎರಡು ಕುಟುಂಬದವರು ಮಾತುಕತೆ ನಡೆಸಿ ಮದುವೆ ಕಾರ್ಯಕ್ರಮ ಮುಂದುವರಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.