ನವದೆಹಲಿ: ಮದುವೆಯಾದ ಮೂರನೇ ದಿನದಲ್ಲಿ ವರ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ನಡೆದಿದೆ.
ಆಕಾಶ್ (22) ಆತ್ಮಹತ್ಯೆಗೆ ಶರಣಾದ ವರ. ಪ್ರೇಮ್ ಸಿಂಗ್ ಅವರ ಪುತ್ರ ಆಕಾಶ್ ಮದುವೆ ಏ. 20ರಂದು ರಾಕೇಶ್ ಕುಮಾರ್ ಅವರ ಪುತ್ರಿ ಅನು ಜೊತೆ ನಡೆದಿತ್ತು. ಮದುವೆಯಾಗಿ ಮೂರೇ ದಿನಕ್ಕೆ ವಧುವಿನ ಪೋಷಕರು ಆಕೆಯನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದರು. ಈ ವೇಳೆ ಆಕಾಶ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮದುವೆ ನಡೆದ ನಂತರ ಕೆಲವು ಶಾಸ್ತ್ರಗಳು ನಡೆದಿರಲಿಲ್ಲ. ಹಾಗಾಗಿ ವಧುವಿನ ಮನೆಯವರ ಊಟದ ವ್ಯವಸ್ಥೆ ಹಾಗೂ ಅವರಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಕಾಶ್ ಗೆ ಹೇಳಲಾಗಿತ್ತು. ಅಲ್ಲದೇ ತನ್ನ ಹಣದಲೇ ಅವರಿಗೆ ಬೇಕಾದ ಎಲ್ಲ ವಸ್ತುವನ್ನು ಖರೀದಿಸಬೇಕೆಂದು ಹಿರಿಯರು ಆತನಿಗೆ ಹೇಳಿದ್ದರು. ಆಕಾಶ್ ಹತ್ತಿರ ಹಣವಿಲ್ಲದ ಕಾರಣ ಆತ ಬೇರೆಯವರ ಹತ್ತಿರ ಸಾಲ ಪಡೆಯಲು ಹೋಗಿದ್ದ. ಆದರೆ ಶಾಸ್ತ್ರ ಪೂರ್ಣಗೊಳಿಸಲು ಸಾಲ ಸಿಗದ ಕಾರಣ ಆಕಾಶ್ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಸೋಮವಾರ ಬೆಳಗ್ಗೆ ವಧುವಿನ ಮನೆಯವರಿಗೆ ಬೇಕಾದ ವಸ್ತು ಹಾಗೂ ಸಾಮಾಗ್ರಿಗಳನ್ನು ತರಲು ಹೋಗುತ್ತಿದ್ದೇನೆ ಎಂದು ಆಕಾಶ್ ಮನೆಯವರಿಗೆ ಹೇಳಿ ದಾದ್ರಿಗೆ ಹೋಗಿದ್ದನು. ಮೂಲಗಳ ಪ್ರಕಾರ ಆಕಾಶ್ ಹಣ ಪಡೆಯಲು ದಾದ್ರಿಗೆ ಹೋಗಿದ್ದನು ಎನ್ನಲಾಗಿದೆ. ನಂತರ ಆತನಿಗೆ ಹಣ ಸಿಗದಿದ್ದಾಗ ಆಕಾಶ್ ದಾದ್ರಿಯ ರೈಲ್ವೆ ನಿಲ್ದಾಣದಲ್ಲಿ ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಆಕಾಶ್ ಜಿಗಿಯುತ್ತಿದ್ದಂತೆ ಅಲ್ಲಿದ್ದ ಜನರು ಜೋರಾಗಿ ಕಿರುಚಿದ್ದಾರೆ. ಕಿರುಚಾಟದ ಸದ್ದು ಕೇಳಿ ಜಿಆರ್ ಪಿ ಹಾಗೂ ಆರ್ ಪಿಎಫ್ ಸ್ಥಳಕ್ಕೆ ಬಂದರು. ನಂತರ ಪೊಲೀಸರು ಬಂದು ಆಕಾಶ್ ಮೃತದೇಹವನ್ನು ವಶಕ್ಕೆ ಪಡೆದರು. ನಂತರ ಆತನ ಮೊಬೈಲ್ ಪರಿಶೀಲಿಸಿ, ಆತನ ಪೋಷಕರಿಗೆ ಮಾಹಿತಿ ತಿಳಿಸಿದ್ದರು. ಮಾಹಿತಿ ತಿಳಿದು ಆಕಾಶ್ ಪೋಷಕರು ದಾದ್ರಿ ರೈಲ್ವೇ ಸ್ಟೇಷನ್ ತಲುಪಿದರು ಎಂದು ವರದಿಯಾಗಿದೆ.
ಆಕಾಶ್ ನೊಯ್ಡಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಆತ ಗೂಡ್ಸ್ ರೈಲ್ ಮುಂದೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಳ್ಳವ ವೇಳೆ ಅಲ್ಲಿದ್ದ ಜನರು ಕಿರುಚಿ ಆತನನ್ನು ತಡೆಯಲು ಪ್ರಯತ್ನಿಸಿದ್ದರು. ಆತ ಯಾರ ಮಾತು ಕೇಳದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.