ಭೋಪಾಲ್: ಕುದುರೆ ಏರಿ ತನ್ನ ಮರವಣಿಗೆಯೊಂದಿಗೆ ಮದುವೆ ಬರುತ್ತಿದ್ದ ವರನನ್ನು ಪೊಲೀಸರು ಬಂಧಿಸಿದ ಘಟನೆ ಮಧ್ಯ ಪ್ರದೇಶದ ಬಾಲಾಘಾಟ್ನ ವಾರಾಸಿವಾನಿಯ ಸಿಕಂದರ್ ಗ್ರಾಮದಲ್ಲಿ ನಡೆದಿದೆ.
ದಿನೇಶ್ ಬಂಧಿತ ಆರೋಪಿ. ಮದುವೆ ಮೆರವಣಿಗೆಯಲ್ಲಿ ಬರುತ್ತಿದ್ದ ವರನನ್ನು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಪ್ರಕಾರ ದಿನೇಶ್ ತನ್ನದೇ ಗ್ರಾಮದ ಯುವತಿಯನ್ನು ಎರಡೂ ವರ್ಷದಿಂದ ಪ್ರೀತಿಸುತ್ತಿದ್ದನು. ಅಷ್ಟೇ ಅಲ್ಲದೇ ಮದುವೆಯಾಗುವುದ್ದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಹೊಂದಿದ್ದನು ಎಂದು ತಿಳಿಸಿದ್ದಾರೆ.
ಈ ನಡುವೆ ದಿನೇಶ್ ಪೋಷಕರು ಆತನ ಮದುವೆಯನ್ನು ಬೇರೆ ಯುವತಿ ಜೊತೆ ನಿಶ್ಚಯಿಸಿದ್ದರು. ಇನ್ನೊಂದು ಆಶ್ಚರ್ಯಕರ ವಿಷಯವೆನೆಂದರೆ ಯುವತಿಗೆ ತನ್ನ ಪ್ರಿಯಕರ ದಿನೇಶ್ ಮದುವೆಯ ವಿಷಯದ ಬಗ್ಗೆ ಗೊತ್ತಿರಲಿಲ್ಲ. ಅಷ್ಟೇ ಅಲ್ಲದೇ ದಿನೇಶ್ ಮದುವೆಯ ಎರಡು ದಿನಗಳ ಹಿಂದೆ ಯುವತಿ ಆತನನ್ನು ಭೇಟಿ ಮಾಡಿದ್ದಳು. ಆಗ ದಿನೇಶ್ ಮತ್ತೆ ಆಕೆಯ ಜೊತೆ ದೈಹಿಕ ಸಂಪರ್ಕವನ್ನು ಬೆಳೆಸಿದ್ದ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಮದುವೆಯ ದಿನವೇ ಯುವತಿಗೆ ವಿಷಯ ಗೊತ್ತಾಗಿದ್ದು, ಆಕೆ ದಿನೇಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದಿನೇಶ್ ಮದುವೆ ಮಾರ್ಚ್ 31ರಂದು ನೆರವೇರಬೇಕಿತ್ತು. ದಿನೇಶ್ ಕುಟುಂಬದವರು ಹಾಗೂ ಸಂಬಂಧಿಕರು ಆತನ ಮದುವೆಯ ಮೆರವಣಿಗೆಗೆ ಹೊರಟ್ಟಿದ್ದರು. ಆದರೆ ಕಲ್ಯಾಣ ಮಂಟಪಕ್ಕೆ ತಲುಪುವ ಮೊದಲೇ ದಾರಿ ಮಧ್ಯದಲ್ಲಿ ಪೊಲೀಸರು ದಿನೇಶ್ನನ್ನು ಅತ್ಯಾಚಾರದ ಆರೋಪದ ಮೇಲೆ ಬಂಧಿಸಿದ್ದಾರೆ.
ಪೊಲೀಸರು ದೂರನ್ನು ಪರಿಗಣಿಸಿ ದಿನೇಶ್ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಯುವತಿ ಮೇಲಿನ ಆರೋಪಗಳು ಸಾಬೀತಾಗಿದೆ. ದಿನೇಶ್ ಹಾಗೂ ಯುವತಿ 2016 ರಿಂದ ಪ್ರೀತಿಸುತ್ತಿದ್ದರು. ದಿನೇಶ್ನನ್ನು ಬಂಧಿಸುತ್ತಿರುವುದ್ದನ್ನು ನೋಡಿ ಸಂಬಂಧಿಕರು ಪ್ರಶ್ನಿಸಿದ್ದಾರೆ. ಆಗ ಪೊಲೀಸರು ನಡೆದ ಘಟನೆ ಬಗ್ಗೆ ವಿವರಿಸಿದ ಮೇಲೆ ಎಲ್ಲರೂ ತಮ್ಮ ಮನೆಗೆ ಹಿಂತಿರುಗಿದ್ದಾರೆ.