ಉಡುಪಿ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನಗರದ ಸಾಯಿರಾಧಾ ರೆಸಾರ್ಟ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ರೆಸಾರ್ಟ್ ಸುತ್ತ ಹಸಿರು ಬೇಲಿ ಹಾಕುವಂತೆ ಸಿಎಂ ಸೂಚನೆ ನೀಡಿದ್ದಾರೆ.
ಹೌದು. ಇಂದು ಸಿಎಂ ಹಾಗೂ ಮಾಜಿ ಪ್ರಧಾನಿಗೆ ಎರಡನೇ ದಿನದ ಪಂಚಕರ್ಮ ಚಿಕಿತ್ಸೆ ಮುಂದುವರಿದಿದೆ. ಯೋಗ, ಧ್ಯಾನದಲ್ಲಿ ಜೆಡಿಎಸ್ ವರಿಷ್ಠರು ಮಗ್ನರಾಗಿದ್ದಾರೆ. ಹೀಗಾಗಿ ರೆಸಾರ್ಟ್ ಸುತ್ತ ಮಾಧ್ಯಮದವರಿಗೆ ನಿಷೇಧ ಹೇರಿದ್ದಾರೆ.
ಕಾಪು ತಾಲೂಕಿನ ಮೂಳೂರಿನ ಸಾಯಿರಾಧಾ ಹೆಲ್ತ್ ರೆಸಾರ್ಟ್ನ ಬೀಚ್ ಆವರಣದಲ್ಲಿ ಸೋಮವಾರ ಶಾಸಕ ಭೋಜೇಗೌಡ ಹಾಗೂ ಸಚಿವ ಸಾರಾ ಮಹೇಶ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ರೆಸಾರ್ಟ್ ಆವರಣ ಕಾಣದಂತೆ ಸುತ್ತಲೂ ಹಸಿರು ಪರದೆ ಬೇಲಿ ಹಾಕುವಂತೆ ರೆಸಾರ್ಟ್ ಸಿಬ್ಬಂದಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.