ಕೋಲ್ಕತ್ತಾ: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಅಬ್ಬರ ಜೋರಾಗುತ್ತಿದೆ. ಸದ್ಯ ಪ್ರಚಾರ ಕಣಕ್ಕೆ ಡಬ್ಲ್ಯೂಡಬ್ಲ್ಯೂಇ ರೆಸ್ಲಿಂಗ್ ಚಾಂಪಿಯನ್ ದಿ ಗ್ರೇಟ್ ಖಲಿ ಪ್ರವೇಶ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಜಾದವಪುರ ಬಿಜೆಪಿ ಅಭ್ಯರ್ಥಿ ಅನುಪಮ್ ಹಜ್ರಾ ನಾಮಪತ್ರ ಸಲ್ಲಿಸುವ ಮುನ್ನ ನಡೆದ ಬೃಹತ್ ಮೆರವಣಿಗೆಯಲ್ಲಿ ಖಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಹಜ್ರಾ, ನಾವಿಬ್ಬರು ಸಹೋದರರಂತೆ ಎಂದು ಹೇಳಿದ್ದರು. ಅಂದಹಾಗೇ ಖಲೀ ಡಬ್ಲ್ಯೂಡಬ್ಲ್ಯೂಇ ರೆಸ್ಲಿಂಗ್ ನ ಹೆವಿವೇಯ್ಟ್ ವಿಭಾಗದಲ್ಲಿ ಚಾಂಪಿಯನ್ ಆದ ಮೊದಲ ಭಾರತೀಯರಾಗಿದ್ದಾರೆ.
ಖಲಿ ಅವರ ಮೊದಲ ಹೆಸರು ದಿಲೀಪ್ ಸಿಂಗ್ ರಾಣಾ ಆಗಿದ್ದು, 7 ಅಡಿ, 1 ಇಂಚು ಎತ್ತರವಿದ್ದು, ಸುಮಾರು 6 ಕಿಮೀ ದೂರ ನಡೆದ ಮೆರವಣಿಗೆಯಲ್ಲಿ ಖಲಿ ಭಾಗವಹಿಸಿದ್ದರು. ವಿಶ್ವ ವಿಖ್ಯಾತಿ ಪಡೆದಿರುವ ಖಲಿ ಅವರನ್ನು ನೋಡಲು ಅಪಾರ ಜನಸ್ತೋಮ ಮೆರವಣಿಗೆಯಲ್ಲಿ ಭಾಗವಹಿಸಿತ್ತು.
ಮೆರವಣಿಗೆಯಲ್ಲಿ ಮಾತನಾಡಿದ ಖಲಿ, ಸ್ನೇಹಿತ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಮಾಹಿತಿ ತಿಳಿದು ಭಾರತಕ್ಕೆ ಆಗಮಿಸಿದ್ದು, ಅನುಮಪಮ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಹಜ್ರಾ ಯಾವ ಸಂದರ್ಭದಲ್ಲಿ ಕರೆದರೂ ನಾನು ಆಗಮಿಸುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ ಖಲಿ, ಮೋದಿ ದೇಶ ಕಂಡ ಉತ್ತಮ ಪ್ರಧಾನಿ. ದೇಶದ ಪಗ್ರತಿಗಾಗಿ ಅವರ ಪ್ರಗತಿ ಯೋಜನೆಗಳು ಪೂರಕವಾಗಿದ್ದು, ಮೋದಿಯನ್ನು ನೋಡಿ ನಾನು ಹೆಮ್ಮೆ ಪಡುತ್ತೇನೆ ಎಂದರು.
2014 ರಲ್ಲಿ ಅನುಪಮ್ ರಲ್ಲಿ ಬೊಲ್ಪುರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಲೋಕಸಭಾ ಚುನಾವಣೆ 4 ತಿಂಗಳು ಬಾಕಿ ಇದ್ದ ಸಂದರ್ಭದಲ್ಲಿ ಟಿಎಂಸಿ ಅಧ್ಯಕ್ಷೆ ಅನುಪಮ್ರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಪರಿಣಾಮ ಬಿಜೆಪಿಗೆ ಸೇರ್ಪಡೆಯಾಗಿ ಅನುಪಮ್ ಜಾದವಪುರ ಕ್ಷೇತ್ರದಿಂದ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ. ಸದ್ಯ ಅನುಪಮ್ ವಿರುದ್ಧವಾಗಿ ಪ್ರಮುಖ ಬೆಂಗಾಲಿ ನಟಿ ಮಿಮಿ ಚಕ್ರವರ್ತಿ ಟಿಎಂಸಿಯಿಂದ ಸ್ಪರ್ಧಿಸುತ್ತಿದ್ದಾರೆ.