ಬರಗೂರು ರಾಮಚಂದ್ರಪ್ಪ (Baraguru Ramachandrappa) ಮಕ್ಕಳ ಚಿತ್ರವೊಂದನ್ನು ಸದ್ದಿಲ್ಲದೆ ಸಿದ್ಧ ಮಾಡಿದ್ದಾರೆ. ತಮ್ಮ ರಚನೆಯ ‘ಅಡಗೂಲಜ್ಜಿ’ (Adagoolajji) ಎಂಬ ಕಾದಂಬರಿಯನ್ನು ಆಧರಿಸಿದ ಈ ಚಿತ್ರಕ್ಕೆ ‘ಚಿಣ್ಣರ ಚಂದ್ರ’ ಎಂದು ಹೆಸರಿಡಲಾಗಿದೆ. ಬರಗೂರರ ಮೊಮ್ಮಗ ಆಕಾಂಕ್ಷ್ ಬರಗೂರು (Akanksh Baraguru) ಈ ಹಿಂದೆ ಬಯಲಾಟದ ಭೀಮಣ್ಣ ಮತ್ತು ತಾಯಿ ಕಸ್ತೂರ್ ಗಾಂಧಿ ಚಿತ್ರಗಳಲ್ಲಿ ಪುಟ್ಟ ಪಾತ್ರ ವಹಿಸಿದ್ದು ‘ಚಿಣ್ಣರ ಚಂದ್ರ’ದಲ್ಲಿ ನಾಯಕ ಪಾತ್ರವನ್ನು ನಿರ್ವಹಿಸಿರುವುದು ಈ ಚಿತ್ರದ ಒಂದು ವಿಶೇಷ.
ಆಕಾಂಕ್ಷ್ ಬರಗೂರು ಜೊತೆಗೆ ಈಶಾನ್ ಪಾಟೀಲ್, ನಿಕ್ಷೇಪ್, ಅಭಿನವ್ ನಾಗ್, ಶಡ್ಜಹೆಗ್ಡೆ ಮುಂತಾದ ಬಾಲ ಕಲಾವಿದರು ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸುಂದರರಾಜ್, ರೇಖಾ, ರಾಧಾ ರಾಮಚಂದ್ರ ಅವರಲ್ಲದೆ ರಾಘವ್, ಸುಂದರರಾಜ ಅರಸು, ಹಂಸ, ವೆಂಕಟರಾಜು, ಗೋವಿಂದರಾಜು, ವತ್ಸಲಾ ಮೋಹನ್, ರಾಜಪ್ಪ ದಳವಾಯಿಯವರು ಈ ಚಿತ್ರದಲ್ಲಿ ನಟ-ನಟಿಯರಾಗಿ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ `ಜೋಶ್’ ನಾಯಕಿ ಪೂರ್ಣಾ
‘ಚಿಣ್ಣರ ಚಂದ್ರ’ ಚಿತ್ರವು ಪ್ರಮುಖವಾಗಿ ಮಕ್ಕಳಿಗೆ ಅಗತ್ಯವಾದ ಉತ್ತಮ ಶಿಕ್ಷಣ, ಕ್ರೀಡೆ ಮುಂತಾದ ಆಶಯಗಳ ಜೊತೆಗೆ ಸಮಾನತೆ ಮತ್ತು ಸೌಹಾರ್ದತೆಯ ಸಂದೇಶವನ್ನು ನೀಡುತ್ತದೆ. ಈ ಸಿನಿಮಾದಲ್ಲಿ ಅಡಗೂಲಜ್ಜಿಯ ಪಾತ್ರದ ಮೂಲಕ ಮಕ್ಕಳಿಗೆ ಜನಪದ ಕತೆಗಳ ಪರಿಚಯವಾಗುತ್ತದೆ. ಊರಿಗೆ ಟೂರಿಂಗ್ ಟಾಕೀಸ್ ಬಂದು ಸಿನಿಮಾಗಳಿಂದ ಜನಪದ ಕತೆಗಳಿಗೆ ಧಕ್ಕೆ ಬರುತ್ತದೆಯೆಂದುಕೊಂಡಾಗ ಅಡಗೂಲಜ್ಜಿಯು ಸಿನಿಮಾ ಕತೆಗಳನ್ನೇ ಜನಪದ ಕತೆಗಳನ್ನಾಗಿಸಿ ಮಕ್ಕಳು ಮತ್ತು ಹಿರಿಯರಿಗೆ ಹೇಳುತ್ತಾಳೆ. ಈ ಮೂಲಕ ಕಥನದ ಮಹತ್ವದ ಜೊತೆಗೆ ಜಾನಪದವು ಆಧುನಿಕ ರೂಪ ಪಡೆಯುವ ಹೊಸ ವಿಧಾನವನ್ನು ನಿರೂಪಿಸಲಾಗಿದೆ. ಜಾನಪದಕ್ಕೆ ಅಂತ್ಯವಿಲ್ಲವೆಂದು ಧ್ವನಿಸಲಾಗಿದೆ.
ಸಿನಿಮಾ ಕೂಡ ಒಂದು ಜಾನಪದವಾಗುವುದನ್ನು ಸಾಂಕೇತಿಕವಾಗಿ ಹೇಳಲಾಗಿದೆ. ಮಕ್ಕಳು ಈ ಹಿನ್ನೆಲೆಯಲ್ಲಿ ಉತ್ತಮ ಅಭಿರುಚಿಯ ಸಿನಿಮಾಗಳಿಗಾಗಿ ಒತ್ತಾಯಿಸಿ ನೈತಿಕ ಮೌಲ್ಯವನ್ನು ಮೆರೆಯುತ್ತಾರೆ. ಹೀಗೆ ಶಿಕ್ಷಣ, ಸಿನಿಮಾ, ಜನಪದ ಕಥನಗಳೊಂದಾದ ವಿಶಿಷ್ಟತೆಯನ್ನು ಈ ಸಿನಿಮಾದಲ್ಲಿ ಕಾಣಬಹುದು. ‘ಚಿಣ್ಣರ ಚಂದ್ರ’ ಸಿನಿಮಾವನ್ನು ಶ್ರೀ ಗೋವಿಂದರಾಜ್ ಅಲಿಯಾಸ್ ಜಿಗಣಿ ರಾಜಶೇಖರ್ ಅವರು ನಿರ್ಮಾಣ ಮಾಡಿದ್ದು ಬರಗೂರರು ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.