ರಾಮನಗರ/ಹಾಸನ: ದೇಶ ಸೇವೆ ಮಾಡಿ ತವರಿಗೆ ವಾಪಸಾದ ಯೋಧರಿಗೆ (Soldier) ಜನರು ಅದ್ದೂರಿ ಸ್ವಾಗತ ಕೋರಿದ್ದಾರೆ. ರಾಮನಗರ (Ramanagara) ಮತ್ತು ಹಾಸನದಲ್ಲಿ (Hassan) ಯೋಧರಿಗೆ ಹೂವಿನ ಹಾರ ಹಾಕಿ, ಮೆರವಣಿಗೆ ಮಾಡಿ ಬರಮಾಡಿಕೊಂಡಿದ್ದಾರೆ.
ಭಾರತೀಯ ಸೇನೆಯಲ್ಲಿ 26 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ರಾಮನಗರದ ಆರ್ಕೇಶ್ವರ ಬಡಾವಣೆಯ ಹೆಚ್ ಶಂಕರ್ ಅವರಿಗೆ ಸ್ಥಳೀಯರು ಅದ್ದೂರಿ ಸ್ವಾಗತ ಕೋರಿದರು. ನಗರದ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ ಶಂಕರ್ ಅವರನ್ನು ಬರ ಮಾಡಿಕೊಂಡ ಸಾರ್ವಜನಿಕರು ಹೂವಿನ ಹಾರ ಹಾಕಿ ಸನ್ಮಾನಿಸಿದರು. ಶಂಕರ್ ಅವರ ಪರವಾಗಿ ಘೋಷಣೆಗಳನ್ನು ಕೂಗಿ ಅಭಿನಂದಿಸಿದರು.
ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಮನೆಯವರೆಗೆ ಕರೆತಂದರು. ಎಂಜಿ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಬಂದ ಶಂಕರ್ ತ್ರಿವರ್ಣ ಧ್ವಜ ಹಿಡಿದು ಸಾರ್ವಜನಿಕರ ಗೌರವ ಸ್ವೀಕರಿಸಿದರು. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಮೆರವಣಿಗೆಯಲ್ಲಿ ಸಾಥ್ ನೀಡಿದರು.
20 ವರ್ಷ ದೇಶ ಸೇವೆ ಮಾಡಿ ಊರಿಗೆ ವಾಪಸ್ ಬಂದ ಸೈನಿಕನಿಗೆ ಸ್ನೇಹಿತರು ಹಾಗೂ ಸಂಬಂಧಿಕರು ಅದ್ದೂರಿ ಸ್ವಾಗತ ಕೋರಿದ್ದಾರೆ. ಹಾಸನ ತಾಲೂಕಿನ, ಅಂಬುಗ ಗ್ರಾಮದ ಚಿಕ್ಕೇಗೌಡ ಹಾಗೂ ಸಣ್ಣಮ್ಮ ದಂಪತಿಯ ಎರಡನೇ ಪುತ್ರ ದಿನೇಶ್ 2004 ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದು ಪಂಜಾಬ್, ಜಮ್ಮು ಕಾಶ್ಮೀರ ಸೇರಿ ಹಲವೆಡೆ ದೇಶ ಸೇವೆ ಸಲ್ಲಿಸಿದ್ದಾರೆ. 20 ವರ್ಷ ಸೇವೆ ಪೂರೈಸಿ ಭಾನುವಾರ ಹಾಸನದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು. ಇದನ್ನೂ ಓದಿ: ಈ ತಿಂಗಳ ಉಚಿತ ವಿದ್ಯುತ್ ಪಡೆಯೋಕೆ ಜುಲೈ 25 ರೊಳಗೆ ನೋಂದಾಯಿಸಿಕೊಳ್ಳಿ: ಇಂಧನ ಇಲಾಖೆ ಸೂಚನೆ
ದೇಶದ ಗಡಿ ಕಾಯ್ದು ತವರಿಗೆ ಮರಳಿದ ದಿನೇಶ್ಗೆ ಪತ್ನಿ ವನಿತಾ, ಮಗಳು ಐಶ್ವರ್ಯ, ಕುಟುಂಬ ಸದಸ್ಯರು ಆರತಿ ಬೆಳಗಿ ವೀರ ಪುತ್ರನನ್ನು ತವರಿಗೆ ಸ್ವಾಗತ ಮಾಡಿದರು. ಕೊಡಗು ಡಿಹೆಚ್ಒ ಡಾ. ಸತೀಶ್ ಹಾರ ಹಾಕಿ ಶಾಲು ಹೊದಿಸಿ ಸ್ವಾಗತ ಕೋರಿದರು. ರೈಲ್ವೇ ನಿಲ್ದಾಣದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು. ದೇಶ ಪ್ರೇಮದ ಘೋಷಣೆ ಕೂಗಿ ಹಾಸನದ ಪ್ರಮುಖ ಬೀದಿಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿದರು.
ದೇಶ ಸೇವೆಗೆ ಸೇರಿದ ನಂತರ ದಿನೇಶ್ ಎಂಎ ಪದವಿ ಪಡೆದಿದ್ದಾರೆ. ಕರ್ತವ್ಯ ಪೂರೈಸಿ ವಾಪಸ್ ಬಂದ ಸೈನಿಕನಿಗೆ ಹೃದಯಸ್ಪರ್ಶಿ ಸ್ವಾಗತ ನೀಡಿದ ಗೆಳೆಯರು ದೇಶಾಭಿಮಾನ ಮೆರೆದರು. ಇದನ್ನೂ ಓದಿ: ಜನಾಂಗೀಯ ಸಂಘರ್ಷದ ಹಿಂದೆ ವಿದೇಶಗಳ ಹಸ್ತಕ್ಷೇಪ – ಮಣಿಪುರ ಸಿಎಂ ಬಿರೇನ್ ಸಿಂಗ್ ಅನುಮಾನ
Web Stories