ಬೆಳಗಾವಿ: ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ವೀರಯೋಧ ಗೌರವ ಲೆಫ್ಟಿನೆಂಟ್ ಬಸಪ್ಪ ರಾಚಪ್ಪ ಮುಗಳಿಹಾಳ ಅವರನ್ನು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಬರಮಾಡಿಕೊಂಡರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಸಪ್ಪ ರಾಚಪ್ಪ ಮುಗಳಿಹಾಳ 28 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಬೆಳಗಾವಿಗೆ ಮರಳಿದರು. ಉತ್ತರಾಖಂಡದ ಡೆಹ್ರಾಡೂನ್ನಿಂದ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಬಸಪ್ಪ ಮುಗಳಿಹಾಳ ರೈಲ್ವೆ ನಿಲ್ದಾಣದಲ್ಲಿ ನೆರೆದ ಜನರನ್ನು ನೋಡಿ ಅರೆಕ್ಷಣ ಭಾವುಕರಾದರು. ಡೆಹ್ರಾಡೂನ್ನಿಂದ ತಾಯ್ನಾಡಿಗೆ ವಾಪಸಾದ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆಯ ಮೂಲಕ ಕರೆತರಲಾಯಿತು.
ಇದೇ ವೇಳೆ ಬೆಳಗಾವಿ ಬಿಜೆಪಿ ಸಂಸದೆ ಮಂಗಲಾ ಅಂಗಡಿ ಹೂಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ ಚನ್ನಮ್ಮ ವೃತ್ತದಿಂದ ಅಶೋಕ ವೃತ್ತದ ಮಾರ್ಗವಾಗಿ ಬೆಳಗಾವಿ ಹೊರವಲಯ ಕಣಬರಗಿ ಬಳಿ ಸಂಕಲ್ಪ ಗಾರ್ಡನ್ನಲ್ಲಿ ಅದ್ಧೂರಿ ಸನ್ಮಾನ ಸಮಾರಂಭದ ವೇದಿಕೆಗೆ ಆಗಮಿಸಿದರು. ಇದನ್ನೂ ಓದಿ: ಚೊಚ್ಚಲ ಬಜೆಟ್ ಮಂಡನೆಗೂ ಮುನ್ನ ದೇಗುಲಗಳಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ
ಈ ಸಂದರ್ಭದಲ್ಲಿ ಮಾತನಾಡಿದ ಯೋಧ ಬಸಪ್ಪ ಮುಗಳಿಹಾಳ, 28 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಈ ದೇಹ ಮಾತ್ರ ನಿವೃತ್ತಿ ಆಗಿದೆ. ಆದರೆ ನನ್ನ ರಕ್ತದ ಕಣಕಣದಲ್ಲೂ ದೇಶಭಕ್ತಿ ಇದೆ. ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಉಗ್ರನ ಗನ್ ವಶಕ್ಕೆ ಪಡೆದು ಆತನನ್ನು ಸದೆಬಡಿದಿದ್ದೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನನಗೆ ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್, ರಕ್ಷಣಾ ಸಚಿವ ಜಾರ್ಜ್ ಫನಾರ್ಂಡಿಸ್ ಶೌರ್ಯ ಚಕ್ರ ನೀಡಿ ಗೌರವಿಸಿದ್ದರು. ಇಷ್ಟೊಂದು ಜನ ನನ್ನ ಸ್ವಾಗತಿಸಿರುವುದನ್ನು ನೋಡಿ ತುಂಬಾ ಸಂತಸವಾಗುತ್ತಿದೆ. ಯುವಕರು ಸೇನೆ ಸೇರಲು ಮುಂದೆ ಬರಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಹಿಂದಿನ ಸರ್ಕಾರಗಳ ವೈದ್ಯಕೀಯ ಶಿಕ್ಷಣ ನೀತಿ ಸರಿಯಿದ್ದಿದ್ದರೆ ನೀವು ವಿದೇಶಗಳಿಗೆ ಹೋಗುತ್ತಿರಲಿಲ್ಲ: ಮೋದಿ