ಕಾರವಾರ: ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಹಾಗೂ ಧಾರ್ಮಿಕ ಮಹತ್ವದ ಜಾತ್ರೆ ಎಂದೇ ಖ್ಯಾತಿ ಪಡೆದಿರುವ ‘ಶಿರಸಿ ಶ್ರೀ ಮಾರಿಕಾಂಬಾ ದೇವಿ ಜಾತ್ರೆ’ಯ (Sirsi Marikamba Jatra) ಮಹಾ ರಥೋತ್ಸವಕ್ಕೆ ಬುಧವಾರ ಅತ್ಯಂತ ಸಡಗರ, ಸಂಭ್ರಮದಿಂದ ವಿದ್ಯುಕ್ತ ಚಾಲನೆ ನೀಡಲಾಯಿತು.
ಬೆಳಿಗ್ಗೆ 7:00 ಗಂಟೆಯಿಂದಲೇ ದೇವಸ್ಥಾನದಲ್ಲಿ ಧಾರ್ಮಿಕ ವಿಧಿವಿಧಾನಗಳು ಹಾಗೂ ಪರಂಪರೆಯ ಆಚರಣೆಗಳು ಆರಂಭವಾದವು. ಸರಿಯಾಗಿ ಬೆಳಿಗ್ಗೆ 7:28ಕ್ಕೆ ದೇವಸ್ಥಾನದಿಂದ ಮಾರಿಕಾಂಬೆಯನ್ನು ಹೊರತಂದು ರಥದ ಮೇಲೆ ಆಸೀನಳನ್ನಾಗಿ ಮಾಡಲಾಯಿತು. ತದನಂತರ, ಕಿಕ್ಕಿರಿದು ತುಂಬಿದ್ದ ಭಕ್ತಸಾಗರದ ನಡುವೆ ಬೆಳಿಗ್ಗೆ 9:07ಕ್ಕೆ ರಥೋತ್ಸವಕ್ಕೆ ಅಧಿಕೃತ ಚಾಲನೆ ದೊರೆಯಿತು.
ಜಾನಪದ ಕಳೆ, ಭಕ್ತರ ಭಕ್ತಿಭಾವ:
ಮಾರಿಗುಡಿ ಬೀದಿಗಳಲ್ಲಿ ರಥವು ಸಾಗುತ್ತಿದ್ದಂತೆ ಭಕ್ತರು ದೇವಿಗೆ ಭಕ್ತಿಪೂರ್ವಕವಾಗಿ ನಮಿಸಿದರು. ವಾದ್ಯ, ಡೊಳ್ಳುಕುಣಿತ, ಚಂಡೆ ವಾದನ ಸೇರಿದಂತೆ ಹಲವು ಜಾನಪದ ಕಲೆಗಳೊಂದಿಗೆ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊತ್ತಿದ್ದ ಭಕ್ತರು, ಬಾಳೆಹಣ್ಣು, ಕಡಲೆ, ಅಕ್ಕಿ ಹಾಗೂ ಕೋಳಿಗಳನ್ನು ರಥಕ್ಕೆ ಎಸೆಯುವ ಮೂಲಕ ಕೃತಾರ್ಥರಾದರು.
ಗದ್ದುಗೆ ಏರಿದ ದೇವಿ:
ರಥೋತ್ಸವದ ಮೂಲಕ ಶೋಭಾಯಾತ್ರೆಯಲ್ಲಿ ಸಾಗಿದ ದೇವಿಯು ಇದೀಗ ಬಿಡಕಿಬೈಲಿನ ಜಾತ್ರಾ ಗದ್ದುಗೆಯಲ್ಲಿ ಆಸೀನಳಾಗಿದ್ದಾಳೆ. ಫೆಬ್ರವರಿ 26ರ ಬೆಳಿಗ್ಗೆ 5:00 ಗಂಟೆಯಿಂದ ಭಕ್ತಾದಿಗಳಿಗೆ ದೇವಿಗೆ ಸೇವೆಗಳನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಈ ಜಾತ್ರೆಯು ಮಾರ್ಚ್ 4ರವರೆಗೆ ಮುಂದುವರಿಯಲಿದ್ದು, ಅಂದು ಜಾತ್ರೆ ಅಧಿಕೃತವಾಗಿ ಸಂಪನ್ನಗೊಳ್ಳಲಿದೆ.
ಲಕ್ಷಾಂತರ ಜನ ಸೇರುವ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದAತೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.

ಪಾರ್ಕಿಂಗ್ಗೆ ಏಕಮುಖ ಸಂಚಾರ ವ್ಯವಸ್ಥೆ:
ಶಿರಸಿ ನಗರದ ಐತಿಹಾಸಿಕ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವ ಪ್ರಯುಕ್ತ ಸಾರ್ವಜನಿಕರ ಸುರಕ್ಷತೆ, ಕಾನೂನು ಸುವ್ಯವಸ್ಥೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ, ಪರ್ಯಾಯ ಮಾರ್ಗಗಳನ್ನು ಕಲ್ಪಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 4ರ ಮಧ್ಯರಾತ್ರಿ 12 ಗಂಟೆಯವರೆಗೆ ಶಿರಸಿ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 766(ಇ) ಹಾಗೂ ರಾಜ್ಯ ಹೆದ್ದಾರಿ 77 ರಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ವಾಹನ ಸವಾರರು ಈ ಕೆಳಗಿನ ನಿಯಮಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.
ಸಂಪೂರ್ಣ ನಿಷೇಧಿತ ಮಾರ್ಗಗಳು:
ರಾಷ್ಟ್ರೀಯ ಹೆದ್ದಾರಿ 766(ಇ): ಐದು ರಸ್ತೆ ವೃತ್ತದಿಂದ- ಶಿವಾಜಿ ಚೌಕ್, ಬಿಡ್ಡಿ ವೃತ್ತ, ಕಾಮತ್ ಹೋಟೆಲ್ ಕ್ರಾಸ್, ಮಂಗಳೂರು ಹೋಟೆಲ್ ಕ್ರಾಸ್ನಿಂದ ಕೋಟೆಕೆರೆ ವೃತ್ತದವರೆಗೆ ಎಲ್ಲಾ ಬಗೆಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ರಾಜ್ಯ ಹೆದ್ದಾರಿ 77: ರಾಮನಬೈಲ್ ಕ್ರಾಸ್ನಿಂದ ಮಾರಿಕಾಂಬಾ ದೇವಸ್ಥಾನದ ಮಾರ್ಗವಾಗಿ ಕಾಮತ್ ಹೋಟೆಲ್ ಕ್ರಾಸ್ವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಪರ್ಯಾಯ ಮಾರ್ಗಗಳ ವಿವರ:
ಕುಮಟಾ-ಸಿದ್ದಾಪುರ ಕಡೆಗೆ: ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಐದು ರಸ್ತೆ ವೃತ್ತ, ಝೂ ವೃತ್ತ, ರಾಘವೇಂದ್ರ ಅಶ್ವಿನಿ ವೃತ್ತ, ಮಹಾಸತಿ ವೃತ್ತದ ಮೂಲಕ ಯಲ್ಲಾಪುರ, ಹುಬ್ಬಳ್ಳಿ ಕಡೆಗೆ ಸಂಚರಿಸಬಹುದು.
ಬನವಾಸಿ ಕಡೆಗೆ ಹೋಗುವ ವಾಹನಗಳಿಗೆ: ಮಹಾಸತಿ ವೃತ್ತದಿಂದ ಎಪಿಎಂಸಿ ಮಾರ್ಗವಾಗಿ, ಕೋಟೆಕೆರೆ ವೃತ್ತ, ಸಿರ್ಸಿಕರ್ ಪ್ಲಾಟ್ ಮೂಲಕ ಬನವಾಸಿ ರಸ್ತೆಗೆ ಸಾಗಬಹುದು.
ಬನವಾಸಿ ಮಾರ್ಗದಿಂದ ಬರುವ ವಾಹನಗಳಿಗೆ: ಸಿರ್ಸಿಕರ್ ಪ್ಲಾಟ್, ಕರಿಗುಂಡಿ ರಸ್ತೆ, ಕೋಟೆಕೆರೆ ಎಪಿಎಂಸಿ ವೇಬ್ರಿಡ್ಜ್ ಮೂಲಕ ಹುಬ್ಬಳ್ಳಿ-ಹಾವೇರಿಗೆ; ಹಾಗೂ ಎಪಿಎಂಸಿ ಮೂಲಕ ಯಲ್ಲಾಪುರ, ಕುಮಟಾ, ಸಿದ್ದಾಪುರ ಮಾರ್ಗವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಲಘು ವಾಹನಗಳ ಪಾರ್ಕಿಂಗ್ಗೆ ‘ಏಕಮುಖ ಸಂಚಾರ’:
ರಸ್ತೆ ಕಿರಿದಾಗಿರುವ ಕಾರಣ ಸಿದ್ದಾಪುರ ಮತ್ತು ಕುಮಟಾ ಕಡೆಯಿಂದ ಬರುವ ಲಘು ವಾಹನಗಳಿಗೆ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಮತ್ತು ನಿರ್ಗಮಿಸಲು ಪ್ರತ್ಯೇಕ ಮಾರ್ಗಗಳನ್ನು ಸೂಚಿಸಲಾಗಿದೆ.
ಪಾರ್ಕಿಂಗ್ಗೆ ತೆರಳುವ ಮಾರ್ಗ: ಅಲೇಕಾ ಗೇಟ್ ಕ್ರಾಸ್ನಿಂದ ಪ್ರವೇಶಿಸಿ ರಾಯರಪೇಟೆ, ಅರ್ಬನ್ ಬ್ಯಾಂಕ್ ಕ್ರಾಸ್, ವೀರಭದ್ರಗಲ್ಲಿ, ಕರ್ಜಗಿ ಕಲ್ಯಾಣ ಮಂಟಪ, ಶಂಕರಹೊಂಡ ಮಾರ್ಗವಾಗಿ ವಿಜಯನಗರ ಮಿಸ್ತಾರ ಪ್ಲಾಟ್ ಪಾರ್ಕಿಂಗ್ ಸ್ಥಳವನ್ನು ತಲುಪಬಹುದು.
ನಿರ್ಗಮಿಸುವ ಮಾರ್ಗ: ಪಾರ್ಕಿಂಗ್ ಸ್ಥಳದಿಂದ ದೈವಜ್ಞ ಕಲ್ಯಾಣ ಮಂಟಪದ ಮೂಲಕ ಅಗಸೇಬಾಗಿಲು ಚರ್ಚ್ ಕ್ರಾಸ್ನಿಂದ ಹೊರಹೋಗಬೇಕು. ಅಗಸೇಬಾಗಿಲು ಚರ್ಚ್ ಕ್ರಾಸ್ನಿಂದ ಒಳಬರಲು ಅವಕಾಶವಿರುವುದಿಲ್ಲ.

