ಕಾರವಾರ: ಅಳಿಯನಿಗೆ ಕೊಟ್ಟ ಹಣವನ್ನು ವಾಪಸ್ ಪಡೆಯಲು ಅಜ್ಜನೇ ಮೊಮ್ಮಗನನ್ನು ಅಪಹರಣ ಮಾಡಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಅಜಾದ್ ನಗರದಲ್ಲಿ ನಡೆದಿದೆ.
ಇದೇ ತಿಂಗಳ 20ರಂದು 8 ವರ್ಷದ ಬಾಲಕನು ರಾತ್ರಿ ಬ್ರೆಡ್ ತರಲು ಹೋಗಿದ್ದ. ಈ ಸಂದರ್ಭದಲ್ಲಿ ಮಾರುತಿ ಇಕೋ ವ್ಯಾನ್ನಲ್ಲಿ ಬಂದ ಅಪರಿಚಿತರು ಬಂದು ಬಾಲಕನನ್ನು ಅಪಹರಣ ಮಾಡಿ ಪರಾರಿಯಾಗಿದ್ದರು.
ಬಾಲಕನ ತಂದೆ ದುಬೈನಲ್ಲಿ ವ್ಯಾಪಾರ ಮಾಡುತ್ತಿದ್ದು, ತಾಯಿಯೊಂದಿಗೆ ಬಾಲಕ ವಾಸವಾಗಿದ್ದ. ಅಪಹರಣದ ವಿಷಯ ತಿಳುತ್ತಿದ್ದಂತೆ ಘಟನೆಗೆ ಸಂಬಂಧಿಸಿ ಭಟ್ಕಳ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಭಟ್ಕಳ ಪೊಲೀಸರು ಬಾಲಕನನ್ನು ಹುಡುಕಲು ಕಾರ್ಯಪವೃತರಾಗಿ ಅನೇಕ ಸ್ಥಳಗಳನ್ನು ಶೋಧಿಸಲು ಪ್ರಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಗೋವಾದ ಕಲ್ಲಂಗುಟ್ ಬೀಚ್ ಸಮೀಪದಲ್ಲಿ ಭಟ್ಕಳ ಪೊಲೀಸರಿಗೆ ಬಾಲಕ ಪತ್ತೆಯಾಗಿದ್ದಾನೆ. ಆತನನ್ನು ರಕ್ಷಿಸಿ ಘಟನೆ ಸಂಬಂಧಿಸಿ ಅನೀಸ್ ಭಾಷಾ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.
ಗೋವಾದಲ್ಲಿ ಪೊಲೀಸರ ಅಥಿತಿಯಾದ ಆರೋಪಿ ಅನೀಸ್ ಭಾಷಾನನ್ನು ಪೊಲೀಸರು ತನಿಖೆ ನಡೆಸಿದಾಗ ಬಾಲಕನ ಅಜ್ಜನೇ ಅಪಹರಣ ಮಾಡಲು ಸೂಚಿಸಿರುವುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್
ಅಪಹರಣಕ್ಕೆ ಕಾರಣ: ಸೌದಿ ಅರೇಬಿಯಾದಲ್ಲಿ ವ್ಯವಹಾರ ಮಾಡಿಕೊಂಡಿರುವ ಬಾಲಕನ ಅಜ್ಜ ಇನಾಯತುಲ್ಲಾ ಬಾಲಕನ ತಂದೆಗೆ ವ್ಯವಹಾರ ನಡೆಸಲು ಸಾಲವಾಗಿ ಹಣ ನೀಡಿದ್ದನು. ಆದರೆ ಕೊಟ್ಟ ಹಣ ಮರಳಿ ಕೇಳಿದಾಗ ಅಳಿಯ ನೀಡರಲಿಲ್ಲ. ಹೀಗಾಗಿ ಕೊಟ್ಟ ಹಣ ವಾಪಸ್ ಪಡೆಯಲು ಮೊಮ್ಮಗನನ್ನು ಕಿಡ್ನ್ಯಾಪ್ ಮಾಡಿಸಲು ಸೌದಿಯಿಂದಲೇ ಸ್ಕೆಚ್ ಹಾಕಿದ್ದನು. ಇದಕ್ಕಾಗಿ ಭಟ್ಕಳ ಬದ್ರಿಯಾ ನಗರದ ನಿವಾಸಿ ಹಾಗೂ ಕೋಳಿ ಅಂಗಡಿ ನಡೆಸುತ್ತಿದ್ದ ಅನೀಸ್ ಭಾಷಾ ಎಂಬುವವನಿಗೆ ಬಾಲಕನನ್ನು ಅಪಹರಣ ಮಾಡಲು ಸೂಚಿಸಿದ್ದ.
ಬಾಲಕನ ಅಜ್ಜನ ಸೂಚನೆ ಮೇರೆಗೆ ಆ.20ರಂದು ರಾತ್ರಿ ಒಟ್ಟು ನಾಲ್ವರು ಕಾರಿನಲ್ಲಿ ಬಂದು ಬಾಲಕನನ್ನು ಅಪಹರಣ ಮಾಡಿದ್ದರು. ನಂತರ ಬಾಲಕನನ್ನು ಗೋವಾಕ್ಕೆ ಕರೆದೊಯ್ದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗೋವಾಕ್ಕೆ ತೆರಳಿ ಓರ್ವನನ್ನು ಬಂಧಿಸಿದ್ದು, ಮೂವರು ಪರಾರಿಯಾಗಿದ್ದಾರೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಇದನ್ನೂ ಓದಿ: ಪಕ್ಷ ಸೇರಿದರೆ ಪ್ರಕರಣ ಖುಲಾಸೆ – ಬಿಜೆಪಿಯಿಂದ ಆಫರ್ ಬಂದಿತ್ತು ಎಂದ ಸಿಸೋಡಿಯಾ