ತುಮಕೂರು: ಸಿಸಿಟಿವಿ ಹಾಕಿ ಎಂದು ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದು ಗ್ರಾಮ ಪಂಚಾಯ್ತಿ ಸದಸ್ಯನ ಕಿವಿ ಕಚ್ಚಿ ಪೀಸ್ ಪೀಸ್ ಮಾಡಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕು ಶೆಟ್ಟಿಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯ್ತಿ ಸದಸ್ಯ ಜಗದೀಶ್ ಅವರ ಕಿವಿ ತುಂಡು ತುಂಡಾಗಿದೆ. ಇವರು ಗ್ರಾಮ ಪಂಚಾಯ್ತಿಯಲ್ಲಿ ಸ್ಥಗಿತಗೊಂಡ ಸಿಸಿಟಿವಿಯನ್ನು ದುರಸ್ಥಿ ಮಾಡಿ ಎಂದು ಆಗ್ರಹಿಸಿದ್ದರು. ಆದರೆ ಇದಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗಮಣಿ ಪತಿ ಪರಮೇಶ್ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ.
ಅಧ್ಯಕ್ಷೆ ನಾಗಮಣಿ ಹಾಗೂ ಸದಸ್ಯ ಜಗದೀಶ್ ಇಬ್ಬರೂ ಜೆಡಿಎಸ್ ಬೆಂಬಲಿತ ಸದಸ್ಯರೇ ಆದರೂ ಅಷ್ಟಕ್ಕೇ ಸಿಟ್ಟಿಗೆದ್ದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪತಿ, ಸದಸ್ಯ ಜಗದೀಶ್ ಕಿವಿಯನ್ನೇ ಕಚ್ಚಿ ತುಂಡು ಮಾಡಿದ್ದಾನೆ.
ಶುಕ್ರವಾರ ಪಂಚಾಯ್ತಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಗದೀಶ್ ಅವರು ಇನ್ನೊಮ್ಮೆ ಸಿಸಿಟಿವಿ ಅಳವಡಿಕೆಗೆ ಒತ್ತಾಯ ಮಾಡಿದಾಗ ಅಧ್ಯಕ್ಷೆ ನಾಗಮಣಿ ಪತಿ ಪರಮೇಶ್, ಜಗದೀಶ್ ಮನೆಗೆ ನುಗ್ಗಿ ಜಗಳವಾಡಿ ಕಿವಿ ಕಚ್ಚಿದ್ದಾನೆ. ಕಚ್ಚಿದ ರಭಸಕ್ಕೆ ಜಗದೀಶ್ ಅವರ ಕಿವಿ ತುಂಡಾಗಿದ್ದು, ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.