ತುಮಕೂರು: ತಮ್ಮ ಮನೆಯಲ್ಲಿ ಶೌಚಾಲಯ ಇಲ್ಲ ಎಂದು ಹೇಳಿ ಮಹಿಳೆಯರು ಮತ್ತು ಮಕ್ಕಳು ಧರಣಿ ಮಾಡಿರುವುದು ನೋಡಿದ್ದೇವೆ. ಆದರೆ ತಾಲೂಕಿನ ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಯೇ ಶೌಚಾಲಯ ಕಟ್ಟಿಸಿಕೊಳ್ಳದ ಜನರ ವಿರುದ್ದ ಧರಣಿ ಕುಳಿತ ಘಟನೆ ತುಮಕೂರಿನಲ್ಲಿ ನಡೆದಿದೆ.
ಇಒ ಡಾ. ಕೆ.ನಾಗಣ್ಣ ಬೆಳದರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಕ್ಕೆನಳ್ಳಿಯಲ್ಲಿ ಧರಣಿ ಕುಳಿತಿದ್ದರು. ಈ ಗ್ರಾಮದಲ್ಲಿ 200 ಮನೆಗಳಿದ್ದು 85 ಮನೆಗಳಲ್ಲಿ ಶೌಚಾಲಯ ಇರಲಿಲ್ಲ. ಕಾರ್ಯಾದೇಶ ಕೊಟ್ಟರೂ ಮನೆಯವರು ಶೌಚಾಲಯ ಕಟ್ಟಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಇದರಿಂದಾಗಿ ಸ್ವಚ್ಚ ಭಾರತ ಮಿಷನ್ ಯೋಜನೆಗೆ ಹಿನ್ನಡೆಯಾಗುತಿತ್ತು.
ಜನರ ವಿರುದ್ಧ ಅಸಮಾಧಾನಗೊಂಡ ಇಒ ನಾಗಣ್ಣ ಜನರ ವಿರುದ್ಧ ಧರಣಿ ಕುಳಿತಿದ್ದರು. ಬಳಿಕ ಶೌಚಾಲಯ ಕಟ್ಟಿಸಿಕೊಳ್ಳದ ಮನೆಯವರು ಬಂದು ಕಟ್ಟಿಸಿಕೊಳ್ಳುವ ಭರವಸೆ ಕೊಟ್ರು. ನಂತರ ಅಂದ್ರೆ ಶನಿವಾರ ಮಧ್ಯಾಹ್ನದ ವೇಳೆಗೆ ಧರಣಿ ವಾಪಸ್ ತೆಗೆದುಕೊಂಡಿದ್ದಾರೆ. ಶಾಲಾ ವಿದ್ಯಾರ್ಥಿಗಳು ಕೂಡಾ ಬಂದು ತಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುತ್ತೇವೆ ಎಂದು ಇಒ ನಾಗಣ್ಣರಿಗೆ ಭರವಸೆ ನೀಡಿದ್ದರು.