ರಾಯಚೂರು: 23 ತಿಂಗಳ ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮ ಪಂಚಾಯತಿಗೆ ಸಿಬ್ಬಂದಿಯೇ ಬೀಗ ಜಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಸಿಬ್ಬಂದಿ ಹೋರಾಟಕ್ಕೆ ಗ್ರಾಮ ಪಂಚಾಯ್ತಿ ಸದಸ್ಯರು ಬೆಂಬಲ ನೀಡಿ ಹೋರಾಟದಲ್ಲಿ ಭಾಗವಹಿಸಿದ್ದಾರೆ.
ಗ್ರಾ.ಪಂ ಸಿಬ್ಬಂದಿ ಹೋರಾಟದಿಂದಾಗಿ ಕಳೆದೆರಡು ದಿನದಿಂದ ಕುಡಿಯುವ ನೀರಿಲ್ಲದೇ ಜಾಲಹಳ್ಳಿಯಲ್ಲಿ ಜನರು ಪರದಾಡುತ್ತಿದ್ದಾರೆ. ಸಮಸ್ಯೆ ಹೇಳಿಕೊಳ್ಳಲು ಅಧಿಕಾರಿಗಳು ಇಲ್ಲ ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಸಮಸ್ಯೆ ಅರ್ಥವಾಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿದ್ದಾರೆ. ಪಂಚಾಯ್ತಿಗೆ ಅಧಿಕಾರಿ ನೇಮಕ ಮಾಡುವಂತೆಯೂ ಜನರು ಒತ್ತಾಯಿಸುತ್ತಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ
20,000 ಜನಸಂಖ್ಯೆ ಇರುವ ಜಾಲಹಳ್ಳಿ ಪಟ್ಟಣಕ್ಕೆ ಈಗ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆಡಳಿತಾತ್ಮಕ ಸಮಸ್ಯೆಯ ನೆಪವೊಡ್ಡಿ ಅಧಿಕಾರಿಯ ನೇಮಕ ವಿಳಂಬ ಮಾಡಲಾಗುತ್ತಿದೆ. ಪ್ರತಿಭಟನೆ ವೇಳೆ ಘಟನಾ ಸ್ಥಳಕ್ಕೆ ಬಂದ ತಾಲೂಕು ಅಧಿಕಾರಿಗಳನ್ನೇ ಕೂಡಿ ಹಾಕಿ ಪ್ರತಿಭಟನೆ ಮಾಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ ಎಂದು ಹೋರಾಟಗಾರರು ತಾಲೂಕು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.