ಶಿವಮೊಗ್ಗ: ಮಂಗಳೂರು ಕೋಮು ಗಲಭೆ ಹತ್ತಿಕ್ಕುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ದೂರಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋಮುಗಲಭೆ ನಡೆಯಲಿ ಎಂಬ ಹಿತಾಸಕ್ತಿ ಸರ್ಕಾರಕ್ಕೆ ಇದೆ ಎಂಬ ಅನುಮಾನ ಮೂಡಿದೆ. ಯಾರದ್ದೋ ಮಕ್ಕಳು ಸತ್ತರೆ ನಮಗೇನು ಎಂಬಂತೆ ಸರ್ಕಾರ ವರ್ತಿಸುತ್ತಿದೆ. ಇದರಿಂದಾಗಿ ಕೋಮುಗಲಭೆ ಮಾಡುವವರಿಗೆ ಕುಮ್ಮಕ್ಕು ಕೊಟ್ಟಂತಾಗಿದೆ ಎಂದರು.
ರಾಜ್ಯದಲ್ಲಿ ಕೋಮುಗಲಭೆ, ಬಿಜೆಪಿ-ಆರ್ಎಸ್ಎಸ್ ಕಾರ್ಯಕರ್ತರ ಕೊಲೆಗಳಾಗುತ್ತಿವೆ. ರಾಷ್ಟ್ರ ಭಕ್ತರಿಗೆ ಬೆದರಿಕೆಗಳು ಬರುತ್ತಿವೆ. ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಬೆದರಿಕೆ ಹಾಕಿರೋದು ಯಾರು ಎಂಬುದನ್ನು ಸರ್ಕಾರ ಪತ್ತೆ ಹಚ್ಚಲಿ. ಇಂಥ ವಿಷಯಗಳ ಬಗ್ಗೆ ಸಿಎಂಗೆ ಗಂಭೀರತೆ ಇಲ್ಲ. ಉಡಾಫೆಯಾಗಿ ಮಾತಾಡುತ್ತಿದ್ದಾರೆ ಎಂದು ಈಶ್ವರಪ್ಪ ದೂರಿದ್ದಾರೆ.
ಮಂಗಳೂರಿನ ಬಂಟ್ವಾಳದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಫರಂಗಿ ಪೇಟೆಯಲ್ಲಿ 300 ಪೊಲೀಸರ ನಿಯೋಜನೆ ಮಾಡಲಾಗಿದೆ. ಲಾರಿಗಳಲ್ಲಿ ಪೊಲೀಸರನ್ನ ತುಂಬಿಕೊಂಡು ಕರೆದೊಯ್ಯಲಾಗುತ್ತಿದೆ. ಚಿಕ್ಕಮಗಳೂರು, ಹಾಸನ, ಕಾರವಾರ, ಶಿವಮೊಗ್ಗದ 1000ಕ್ಕೂ ಹೆಚ್ಚು ಪೊಲೀಸರ ರವಾನೆ ಮಾಡಲಾಗಿದೆ. ಮಸೀದಿಗಳಿಗೆ ಸಿಆರ್ಫಿಎಫ್ ಪೊಲೀಸರ ಭದ್ರತೆ ಹಾಗೂ ದೇವಸ್ಥಾನಗಳ ಮುಂಭಾಗದಲ್ಲೂ ಮಂಗಳೂರು ಕಮಿಷನರ್ ನೇತೃತ್ವದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಅಂತಾ ದಕ್ಷಿಣ ಕನ್ನಡ ಎಸ್ಪಿ ಸುಧೀರ್ ರೆಡ್ಡಿ ಮಾಧ್ಯಮಕ್ಕೆ ತಿಳಿಸಿದ್ದಾರೆ.