ಬರ ನಿರ್ವಹಣೆಗೆ ಸರ್ಕಾರ ಬಿಡಿಗಾಸೂ ಕೊಟ್ಟಿಲ್ಲ: ಸಿದ್ದರಾಮಯ್ಯ ವಿರುದ್ಧ ಕೋಟ ಕಿಡಿಕಿಡಿ

Public TV
2 Min Read
kota srinivas poojary

ಉಡುಪಿ: 6 ತಿಂಗಳ ಆಡಳಿತದಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರ ಸಂಪೂರ್ಣ ವಿಫಲವಾಗಿ ಕುಸಿತ ಕಂಡಿದೆ. ಕಂಡು ಕೇಳರಿಯದ ಬರ ಜನರನ್ನು, ರೈತರನ್ನು ಕಾಡುತ್ತಿದೆ. ರಾಜ್ಯದ 195 ತಾಲೂಕಿನಲ್ಲಿ ಬರ ಘೋಷಣೆ ಮಾಡಿದ್ದರೂ ಪರಿಹಾರಕ್ಕೆ ಬಿಡಿಗಾಸು ಬಿಡುಗಡೆ ಮಾಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಹೇಳಿದ್ದಾರೆ.

ಮಳೆ ಕೊರತೆಯಿಂದ 30 ಸಾವಿರ ಕೋಟಿ ರೂ. ನಷ್ಟ ಎಂದು ಸರ್ಕಾರ ವರದಿಯಲ್ಲಿ ನೀಡಿದೆ. ತಕ್ಷಣ ಕನಿಷ್ಟ 5 ಸಾವಿರ ಕೋಟಿ ರೂ. ಕೂಡಾ ಬಿಡುಗಡೆ ಮಾಡಿಲ್ಲ. ಕೇಂದ್ರಕ್ಕೆ ಮನವಿ ಕೊಟ್ಟಿದ್ದೇವೆ ಎಂದು ಹೇಳೋದ್ರಲ್ಲೇ ತಲ್ಲೀನವಾಗಿದೆ. ಸರ್ಕಾರ ರೈತರಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುತ್ತಿಲ್ಲ. ಬೀಜ ವಿತರಿಸಿ ಗೊಬ್ಬರ ಖರೀದಿಗೆ ಅನುದಾನ ಕೊಡಿ, ನೀರಾವರಿ ವ್ಯವಸ್ಥೆ ಮಾಡಿ ಗೋಶಾಲೆ ತೆರೆಯಿರಿ ಎಂದು ಸಲಹೆ ನೀಡಿದರು. ಅಧ್ಯಯನ ಮಾಡೋದರಲ್ಲೇ ಕಾಲ ಕಳೆಯಬೇಡಿ ಎಂದರು.

siddu kota

ವಿದ್ಯುತ್ ಕೊರತೆಯಾಗಿದೆ. ದಿನಕ್ಕೆ 7 ಗಂಟೆ 3 ಫೇಸ್ ಪವರ್ ಎಂದು ಘೋಷಿಸಿ 2 ಗಂಟೆಗೆ ಇಳಿಸಿದ್ದಾರೆ. ರೈತರು ಕಂಗಾಲಾಗಿದ್ದರೂ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ. ಕಿಸಾನ್ ಸಮ್ಮಾನ್ ಯೋಜನೆಗೆ 1 ರೂ.ಯನ್ನೂ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರ ರಾಜ್ಯದಿಂದ 4 ಕೇಂದ್ರದಿಂದ 6 ಸಾವಿರ ರೂ. ಕೊಡುತ್ತಿದ್ದನ್ನು ನಿಲ್ಲಿಸಿ ರೈತರ ಖಾತೆಯ ಹಣಕ್ಕೆ ಕನ್ನ ಹಾಕಿದ್ದಾರೆ. ರೈತರ ಮೇಲೆ ಬದ್ಧತೆ ಇದ್ದರೆ ಹಣ ಬಿಡುಗಡೆ ಮಾಡಿ ಎಂದು ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ದೆಹಲಿ ನಾಯಕರು ಪ್ರಯೋಗ ಮಾಡುತ್ತಿದ್ದಾರೆ: ಜಗದೀಶ್ ಶೆಟ್ಟರ್ ವ್ಯಂಗ್ಯ

ರಾಜ್ಯ ಸರ್ಕಾರ 2 ಪಾಲಾಗಿ ವಿಭಜನೆಯಾಗಿದೆ. ಚುನಾವಣೆ ಸಂದರ್ಭದಲ್ಲಿ ಜನರಿಗೆ ಶಾಸಕರು ಭರವಸೆ ಕೊಟ್ಟಿದ್ದಾರೆ. ರಾಜ್ಯದ ಯಾವ ಶಾಸಕರ ನೇತೃತ್ವದ ಅಭಿವೃದ್ಧಿಗೆ ಒಂದು ಕೋಟಿ ರೂ.ಯೂ ಬಿಡುಗಡೆ ಮಾಡಿಲ್ಲ. 9 ಸಾವಿರ ವಿವೇಕ ಶಾಲಾ ಕೊಠಡಿ ಸ್ಥಗಿತ ಆಗಿದೆ. ಶಾಸಕರ ಮುನಿಸು, ಆಕ್ರೋಶದಲ್ಲೇ 6 ತಿಂಗಳು ಕಳೆದು ಹೋಗಿದೆ. ವಿಧಾನಸೌಧ ಕಡೆ ಮಂತ್ರಿಗಳು, ಜನ ಬರುತ್ತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 11,500 ಕೋಟಿ ರೂ. ಅನುದಾನಗಳನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗುತ್ತಿದೆ. ಎಲ್ಲಾ ಯೋಜನೆಯ ಹಣವನ್ನು 5 ಗ್ಯಾರಂಟಿಗಳಿಗೆ ಬಳಕೆ ಮಾಡಿದರೆ ಅಭಿವೃದ್ಧಿಗೆ ಹಣ ಎಲ್ಲಿಂದ ತರುತ್ತೀರಿ ಎಂದು ಕೋಟ ಪ್ರಶ್ನೆ ಮಾಡಿದರು.

ಎಸ್‌ಸಿ, ಎಸ್‌ಟಿ ಭೂಮಿಯನ್ನು ಅಕ್ರಮವಾಗಿ ಖರೀದಿ ಮಾಡಿದ ಪ್ರಕರಣದ ಬಗ್ಗೆ ಕ್ರಮ ಆಗಿಲ್ಲ. ಶರಣಪ್ರಕಾಶ್ ಪಾಟೀಲ್ ವಿರುದ್ಧ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಸಚಿವರ ವಿರುದ್ಧ ಕ್ರಮ ಆಗಿಲ್ಲ. ಅಂದು ಈಶ್ವರಪ್ಪ ರಾಜೀನಾಮೆ ಕೊಡಬೇಕು ಪಾಟೀಲ್ ಕೊಡಲ್ವಾ? ಕರ್ನಾಟಕದಲ್ಲಿ ಎರಡು ನ್ಯಾಯ ಮಾಡಲು ಸಾಧ್ಯವಿಲ್ಲ ಎಂದರು. ಸಿದ್ದರಾಮಯ್ಯ-ಡಿಕೆಶಿ ಆಂತರಿಕ ಗೊಂದಲದಲ್ಲಿ ಅಧಿಕಾರಿಗಳು ಹೊಸ ಸಿಎಂ ನಿರೀಕ್ಷೆಯಲ್ಲಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಇದನ್ನೂ ಓದಿ: 2022ರಲ್ಲೇ ಹುಲಿ ಚರ್ಮ ಹಿಂದಿರುಗಿಸಲಾಗಿದೆ- ವಿನಯ್ ಗುರೂಜಿ ಆಶ್ರಮದಿಂದ ಸ್ಪಷ್ಟನೆ

Web Stories

Share This Article