_ ದೇಶಕ್ಕಾಗಿ ಪ್ರಾಣ ತೆತ್ತ ಸಂಸ್ಥೆ ಆರ್ಎಸ್ಎಸ್
ಬೆಳಗಾವಿ: ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟರಲ್ಲ ಅದಕ್ಕೇನು ಉತ್ತರ ಕೊಡ್ತಾರೆ ಎಂದು ಪ್ರಶ್ನಿಸುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯಗೆ ಜಲಸಂಪನ್ಮೂಲ ಸಚಿವ ಗೊವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಸಚಿವರ ಪುತ್ರ ಕಾರು ಹರಿಸಿದ ಪ್ರಕರಣ ಕುರಿತು ಸಿದ್ದರಾಮಯ್ಯ ಅವರು ಅಸತ್ಯ, ಹಿಂಸೆ ಮೇಲೆ ನಂಬಿಕೆ ಇಟ್ಟ ಬಿಜೆಪಿಗೆ ಅಧಿಕಾರ ಸಿಕ್ಕಿದ್ದು ದುರಾದೃಷ್ಟಕರ ಎಂದು ಪ್ರತಿಕ್ರಿಯಿಸಿದ್ದರು. ಈ ಹಿನ್ನೆಲೆ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಮತ್ತು ದೇಶದ ಜನರಿಗೆ ಕಂಬಾಳಪಲ್ಲಿ ಘಟನೆ ನೆನಪಿಸಲು ಬಯಸುವೆ. ಎಸ್.ಎಂ.ಕೃಷ್ಣ ಸಿಎಂ ಹಾಗೂ ಮಲ್ಲಿಕಾರ್ಜುನ ಖರ್ಗೆ ಗೃಹಸಚಿವರು ಆಗಿದ್ದರು. ಆ ವೇಳೆ ಕಂಬಾಳಪಲ್ಲಿಯಲ್ಲಿ ದಲಿತರನ್ನು ಸುಟ್ಟರಲ್ಲ ಅದಕ್ಕೇನು ಉತ್ತರ ಕೊಡ್ತಾರೆ ಸಿದ್ದರಾಮಯ್ಯ? ಹರಿ ಜನರಿಗೆ ಮಲ ತಿನ್ನಿಸಿದ್ದರಲ್ಲ ಅದರ ಬಗ್ಗೆ ಏನ್ ಹೇಳ್ತಾರೆ ಸಿದ್ದರಾಮಯ್ಯನವರು ಎಂದು ಕಾರಜೋಳ ಪ್ರಶ್ನಿಸಿದರು. ಇದನ್ನೂ ಓದಿ: ಶಾಖೆಗೆ ಬಂದು ಸಂಘದ ಶಿಕ್ಷಣ ಪಡೆಯಿರಿ, ನಿಮಗೂ ಒಳ್ಳೆಯದು – ಹೆಚ್ಡಿಕೆಗೆ ಕಟೀಲ್ ಸಲಹೆ
ಆಕಸ್ಮಿಕವಾಗಿ ವಾಹನ ಆಕ್ಸಿಡೆಂಟ್ ಆಯ್ತೋ, ಉದ್ದೇಶಪೂರ್ವಕವಾಗಿ ಹಾಯಿಸಿದ್ರೋ ಗೊತ್ತಿಲ್ಲ. ಆದರೆ ಆ ರೀತಿಯ ಘಟನೆ ಆಗಬಾರದಿತ್ತು, ಯಾರೇ ಇರಲಿ ನಾನು ಅದನ್ನು ಖಂಡಿಸುತ್ತೇನೆ. ಆದರೆ ವಾಸ್ತವ ಸ್ಥಿತಿ ನಮಗೆ ಗೊತ್ತಿಲ್ಲ, ನಾವು ಫಿಲ್ಡ್ ನಲ್ಲಿಲ್ಲ, ನಾವು ನೋಡಿಲ್ಲ. ಸಾವನ್ನು ಖಂಡಿಸುತ್ತೇನೆ, ಸಾವು-ನೋವು ಆಗಬಾರದಿತ್ತು. ಈ ರೀತಿಯ ಘಟನೆ ದೇಶದಲ್ಲಿ ಅಲ್ಲ ಇಡೀ ಪ್ರಪಂಚದಲ್ಲಿ ಎಲ್ಲೂ ನಡೆಯಬಾರದು. ಆದರೆ ಈ ವಿಚಾರದಲ್ಲಿ ರಾಜಕಾರಣ ಸರಿಯಲ್ಲ ಅವರ ಹೇಳಿಕೆಯನ್ನು ಖಂಡಿಸುತ್ತೇನೆ. ರಾಜಕೀಯವಾಗಿ ಪ್ರಕರಣ ಬಳಸಿಕೊಳ್ಳಬಾರದು. ಸತ್ಯ ಮತ್ತು ವಸ್ತುಸ್ಥಿತಿ ಏನಿದೆ ಅದನ್ನು ಹೇಳಲಿಕ್ಕೆ ಅಡ್ಡಿಯಿಲ್ಲ ಎಂದು ತಿಳಿಸಿದರು.
ನೂರಕ್ಕೆ ನೂರು ಗೆಲ್ಲುತ್ತೇವೆ!
ಇದೇ ವೇಳೆ ಸಿದಂಗಿ, ಹಾನಗಲ್ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಎರಡು ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮುಂದಿಟ್ಟುಕೊಂಡು ಮತವನ್ನು ಕೇಳುತ್ತೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುತ್ತೇವೆ. ಯಾವುದೇ ಜಾತಿ, ಮತ ಇಟ್ಟುಕೊಂಡು ಮತ ಕೇಳುವುದಿಲ್ಲ. ಅಭ್ಯರ್ಥಿ ಆಯ್ಕೆ ಕಗ್ಗಂಟಲ್ಲ, ಅದು ರಾಜಕೀಯ ತಂತ್ರ. ಕೆಲವೇ ತಾಸುಗಳಲ್ಲಿ ಬಿಜೆಪಿ ಅಭ್ಯರ್ಥಿ ಪಟ್ಟಿ ಬಿಡುಗಡೆಯಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ತೀರ್ಥೋದ್ಭವ ವೀಕ್ಷಣೆಗೆ ಭಕ್ತರಿಗೆ ಮುಕ್ತ ಅವಕಾಶ
ಆರ್ಎಸ್ಎಸ್ ಅವರು ದೇಶ ಭಕ್ತರು!
ಆರ್ಎಸ್ಎಸ್ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಆರ್ಎಸ್ಎಸ್ ಸಂಸ್ಕೃತಿ ಗೊತ್ತಿಲ್ಲದವರು ಏನೇನೋ ಹೇಳುತ್ತಿದ್ದಾರೆ. ಆರ್ಎಸ್ಎಸ್ ಅವರು ದೇಶ ಭಕ್ತರು ಎಂಬುದು ಮೊದಲು ಗೊತ್ತಿರಬೇಕು. ಅವರಿಗೆ ಬೇರೆ ರೀತಿ ಕಳಂಕ ಹಚ್ಚಲು ಪ್ರಯತ್ನ ಮಾಡಿದ್ರೇ ಅದು ಹತ್ತುವುದಿಲ್ಲ. ದೇಶದ ಉದ್ದಗಲಕ್ಕೂ ರಾಷ್ಟ್ರ ಪ್ರೇಮ ಹುಟ್ಟುಹಾಕುವ ಕೆಲಸ ಆರ್ಎಸ್ಎಸ್ ಮಾಡ್ತಿದೆ. ಆರ್ಎಸ್ಎಸ್ ಅವರು ಯಾವುದು ಕೆಟ್ಟ ಕೆಲಸ ಇವತ್ತಿನವರೆಗೂ ಮಾಡಿಲ್ಲ ಎಂದು ಬೆಂಬಲಿಸಿದರು.
ಏನೇನೋ ಹೇಳಿಕೆ ಕೊಟ್ರೆ ಅರ್ಥವಿರಲ್ಲ!
ದೇಶಕ್ಕಾಗಿ ಪ್ರಾಣ ತೆತ್ತ ಸಂಸ್ಥೆ ಆರ್ಎಸ್ಎಸ್. ಯಾರನ್ನೋ ಖುಷಿಪಡಿಸುವ ಸಲುವಾಗಿ ಏನೇನೋ ಹೇಳಿಕೆ ಕೊಟ್ರೆ ಅರ್ಥವಿರಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ ತಾವೆಲ್ಲ ಪ್ರಮುಖ ರಾಜಕಾರಣಿಗಳು. ಚೀಪ್ ಪಾಪ್ಯುಲಾರಿಟಿ ಸಲುವಾಗಿ ಮೀಡಿಯಾಗಳಲ್ಲಿ ಬರಲು ಏನೇನೋ ಹೇಳಬಾರದು. ಸಂಘ ಪರಿವಾರದವರು ಐಎಎಸ್, ಐಪಿಎಸ್ ಆಗಿದ್ದಾರೆ ಎಂದು ಹೇಳುವುದು ಸುಳ್ಳು. ಹತಾಶರಾಗಿ ಈ ರೀತಿ ಹೇಳಿಕೆ ಕೊಡಬಾರದು ಅವರ ಗೌರವಕ್ಕೆ ಧಕ್ಕೆ ಬರುತ್ತೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಹೇಳಿಕೆ ಕೊಡವುದು ಗೌರವ ಅಲ್ಲ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಬಾಲಿವುಡ್ ನನ್ನ ಕಪ್ ಆಫ್ ಟೀ ಅಲ್ಲ: ಧೋನಿ