ಬಾಗಲಕೋಟೆ: ಒಬ್ಬ ಸಾಮಾನ್ಯ ಮನುಷ್ಯ ಸಚಿವನಾಗಿದ್ದಕ್ಕೆ ಎಂಬಿ ಪಾಟೀಲ್ ಅವರಿಗೆ ಹೊಟ್ಟೆ ಉರಿ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.
ಗೋವಿಂದ ಕಾರಜೋಳ ನಾಲಾಯಕ್ ಎಂದ ಮಾಜಿ ಸಚಿವ ಎಂಬಿ ಪಾಟಿಲ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾತಾಡುವಾಗ ನಾಲಿಗೆ ಮೇಲೆ ಹಿಡಿತ ಇರಲಿ. ನಾನು ನಿಮ್ಮ ಬಬಲೇಶ್ವರ ಕ್ಷೇತ್ರದ ಮೂಲ ನಿವಾಸಿಯಾಗಿದ್ದು, ನನ್ನ ಬಗ್ಗೆ ಮಾತಾಡುವಾಗ ಬಹಳ ಎಚ್ಚರದಿಂದಿರಿ. ಬಹುಷಃ ಅವರಿಗೆ ನನ್ನ ಮೇಲೆ ಏನೋ ಹೊಟ್ಟೆ ಉರಿ ಇದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಅವರು ಒಬ್ಬರೇ ಜಲಸಂಪನ್ಮೂಲ ಸಚಿವರು ಆಗಿದ್ದರು ಅನಿಸುತ್ತದೆ ಎಂದು ಹೇಳಿ ವ್ಯಂಗ್ಯವಾಡಿದರು. ಇದನ್ನೂ ಓದಿ: ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ
ನಾನು ಸಂಸ್ಕೃತಿ ಮೀರಿ, ಬಾಯಿಗೆ ಬಂದ ಹಾಗೇ ಮಾತಾಡುವ ಮನುಷ್ಯ ಅಲ್ಲ. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವನು. ಶರಣರ ಸಂಸ್ಕೃತಿಯೇ ನನಗೆ ಮೂಲವಾಗಿದ್ದು, ಅದಕ್ಕೆ ನಾನು ಯಾರ ಬಗ್ಗೆ ಕೆಟ್ಟದಾಗಿ ಮಾತನಾಡುವದಿಲ್ಲ ಕೆಟ್ಟ ಶಬ್ದ ಬಳಸುವದಿಲ್ಲ. ನನ್ನ ಬಗ್ಗೆ ಪಾಟಿಲ್ ಸಾಹೇಬರು ಮಾತಾಡಿದ್ದು ನೋಡಿದ್ದೀರಿ. ಕಾರಜೋಳ ಜಲಸಂಪನ್ಮೂಲ ಸಚಿವರು ಆಗಲು ಅಯೋಗ್ಯ, ನಾಲಾಯಕ್, ಮೂರ್ಖ ಕೂಡಲೇ ಕಾರಜೋಳ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹ ಮಾಡಿದ್ದರು. ನಾನೊಬ್ಬ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು ವಿಧಾನಸೌಧ ಮೆಟ್ಟಿಲು ಏರಿದವನು ಎಂದು ಹೇಳಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್
ನಾನು ಸಾಮಾನ್ಯರಲ್ಲಿ ಸಾಮಾನ್ಯನಾಗಿದ್ದೇನೆ. ಪಾಟಿಲ್ರೆ ನಿಮಗೆ ನಾನು ಹೋಲಿಕೆ ಮಾಡಿಕೊಳ್ಳುತ್ತಿಲ್ಲ. ನೀವು ಅಪಾರವಾದಂತಹ ಜ್ಞಾನ ಪಾಂಡಿತ್ಯ ಇರುವಂತವರು. ನೀವು ವಿಶ್ವಮಾನವರು ವಿಶ್ವರೂಪಿಗಳಾಗಿದ್ದು, ಬ್ರಹ್ಮಾಂಡ ಜ್ಞಾನ ಸಂಪಾದನೆ ಮಾಡಿದಂತವರು. ನಿಮಗೆ ನಾನು ಹೋಲಿಕೆ ಮಾಡಿಕೊಳ್ಳೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.