ಬಾಗಲಕೋಟೆ: ಕಾಂಗ್ರೆಸ್ನಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರ ಎರಡೇ ಗುಂಪಲ್ಲ ಇನ್ನು ಒಂದು ಗುಂಪು ಇದೆ ಎಂದು ಸಚಿವ ಗೋವಿಂದ್ ಕಾರಜೋಳ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಹಾಗೂ ಸಿದ್ದರಾಮಯ್ಯ ಎಣ್ಣೆ ನೀರು ಇದ್ದಂಗೆ. ಅವರಿಬ್ಬರು ಒಂದಾಗಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಸ್ಥಿತಿ ಗಂಭೀರವಾಗಿದ್ದು, ಅವರವರಲ್ಲೇ ಮೂರು ಗುಂಪುಗಳಿವೆ. ಸಿದ್ದರಾಮಯ್ಯ, ಡಿಕಶಿ ಎರಡು ಗುಂಪಾದರೆ ಮೂರನೇಯ ಗುಂಪಿನಲ್ಲಿ ಖರ್ಗೆ, ಪರಮೇಶ್ವರ, ಶಾಮನೂರು ಶಿವಶಂಕರಪ್ಪ ಸೇರಿದಂತೆ ಇನ್ನಿತರರಿದ್ದಾರೆ ಎಂದು ಹೇಳಿದರು.
ಬೆಳಗಾವಿ ಬಿಜೆಪಿ ನಾಯಕರ ಆಂತರಿಕ ಕಲಹ ಹಾಗೂ ಕೆಲವರು ಕಾಂಗ್ರೆಸ್ ಸೇರುತ್ತಾರೆಂಬ ವದಂತಿ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯ ಶಾಸಕರು ಕಾಂಗ್ರೆಸ್ಗೆ ಹೋಗಲ್ಲ, ಕಾಂಗ್ರೆಸ್ ಈಗ ಮುಳುಗುವ ಹಡಗು. ಈಗಾಗಲೇ ಕಾಂಗ್ರೆಸ್ ದೇಶದ 27 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಅಂತಹ ಪಕ್ಷಕ್ಕೆ ಯಾರೂ ಹೋಗಲು ಸಾಧ್ಯವಿಲ್ಲ. ಬಿಜೆಪಿ ಅವರು ಕಾಂಗ್ರೆಸ್ಗೆ ಬರುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ನಾವೆಲ್ಲಾ ಒಂದೇ ಎಂದಿದ್ದ ಕಾಂಗ್ರೆಸ್ನ ಬೀದಿ ಜಗಳ ಬಯಲಿಗೆ ಬಂದಿದೆ: ಆರ್. ಅಶೋಕ್
ಬಿಜೆಪಿಗೆ ವಲಸೆ ಬಂದ ಶಾಸಕ, ಸಚಿವರ ವಿಚಾರವಾಗಿ ಮಾತನಾಡಿದ ಅವರು, ವಲಸೆ ಬಂದವರೆಂಬುದರಲ್ಲಿ ಅರ್ಥವೇ ಇಲ್ಲ. ಅವರೆಲ್ಲ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿ ಪ್ರಥಮಿಕ ಸದಸ್ಯರಾಗಿ, ಬಿಜೆಪಿಯಿಂದ ಗೆದ್ದು ಬಂದಿದ್ದಾರೆ. ಈಗ ಅವರೆಲ್ಲರೂ ಬಿಜೆಪಿಯವರೇ. ನಮ್ಮ ಜೀವ ಇರುವರೆಗೂ ಬಿಜೆಪಿಯಲ್ಲೇ ಇರುತ್ತೇವೆ ಎಂದು ಅವರೇ ಹೇಳಿದ್ದಾರೆ. ಬಿಜೆಪಿಯ ಸದಸ್ಯರಾಗಿರುವ ಎಲ್ಲರೂ ಬಿಜೆಪಿಯವರೇ, ವಲಸಿಗ ಎನ್ನುವ ವಿಷಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮತ್ತೆ ಸಚಿವರ ವಿರುದ್ಧ ತಿರುಗಿ ಬಿದ್ದ ರೇಣುಕಾಚಾರ್ಯ – ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು