– ರಾಜ್ಯಪಾಲರಿಂದ ಧ್ವಜಾರೋಹಣ
ಬೆಂಗಳೂರು: 71ನೇ ಗಣರಾಜ್ಯೋತ್ಸವದ ಅಂಗವಾಗಿ ಸಿಲಿಕಾನ್ ಸಿಟಿಯ ಮಾಣಿಕ್ ಷಾ ಮೈದಾನದಲ್ಲಿ ರಾಜ್ಯಪಾಲ ವಿ.ಆರ್ ವಾಲಾ ಅವರು ಧ್ವಜಾರೋಹಣ ಮಾಡಿದ್ದಾರೆ.
ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಆಗಮಿಸಿದ ರಾಜ್ಯಪಾಲ ವಿ.ಆರ್ ವಾಲಾ ಅವರನ್ನು ಸಿಎಂ ಬಿ.ಎಸ್.ಯಡಿಯೂಪ್ಪ ಅವರು ಸ್ವಾಗತ ಮಾಡಿದರು. ಬಳಿಕ ರಾಜ್ಯಪಾಲರು ತೆರೆದ ಜೀಪಿನಲ್ಲಿ ಮಾಣೆಕ್ ಷಾ ಮೈದಾದಲ್ಲಿ ಗೌರವರಕ್ಷಾ ವಂದನೆ ಸ್ವೀಕಾರ ಮಾಡಿದರು. ನಂತರ ಭಾರತೀಯ ವಾಯುಪಡೆಯಿಂದ ರಾಷ್ಟ್ರಧ್ವಜಕ್ಕೆ ಹೆಲಿಕಾಪ್ಟರ್ ನಿಂದ ಪುಷ್ಪಾರ್ಚನೆ ಮಾಡಿದ್ದು, ರಾಷ್ಟ್ರಗೀತೆ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ 44 ತುಕಡಿಗಳ 1750 ವಿದ್ಯಾರ್ಥಿಗಳಿಂದ ಕವಾಯತು ಮತ್ತು ಪಥ ಸಂಚಲನ. ಮೊದಲ ಬಾರಿಗೆ ಬಿಬಿಎಂಪಿ ಪೌರ ಕಾರ್ಮಿಕರಿಂದ ಸ್ವಚ್ಛ ಭಾರತ್ ಅಭಿಯಾನದ ಜಾಗೃತಿ ಕುರಿತು ಪಥ ಸಂಚಲನ ಮಾಡಲಾಗಿದೆ. ನಂತರ ರಾಜ್ಯಪಾಲರು ಭಾಷಣ ಆರಂಭ ಮಾಡಿ ರಾಜ್ಯದ ಜನತೆಗೆ ಸಂದೇಶ ನೀಡಿದ್ದಾರೆ. ರಾಜ್ಯಪಾಲ ವಿ.ಆರ್ ವಾಲಾ 10 ಪುಟಗಳ ಭಾಷಣದಲ್ಲಿ ರಾಜ್ಯ ಸರ್ಕಾರದ ಸಾಧನೆ, ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ಬಿಚ್ಚಿಟ್ಟರು.
ಕರ್ನಾಟಕವು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪರಿಣಾಮಕಾರಿ ಕ್ರಮ ಅನುಷ್ಠಾನಗೊಳಿಸುತ್ತಿದೆ. ಅಪರಾಧ ತಡೆಯುವ ಹಾಗೂ ಅವುಗಳ ತನಿಖೆಯನ್ನು ತುರ್ತಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ಕಾರ್ಯಪದ್ಧತಿ ಸುಸಜ್ಜಿತಗೊಳಿಸುತ್ತಿದೆ. ಉತ್ತಮ ಆಡಳಿತ ನಿರ್ವಹಣೆ ಸೂಚ್ಯಂಕದಲ್ಲಿ ರಾಜ್ಯ 3ನೇ ಸ್ಥಾನದಲ್ಲಿದೆ ಎಂದು ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು.
ರಾಜ್ಯಪಾಲರು ತಮ್ಮ ಭಾಷಣದಲ್ಲಿ ಉತ್ತರ ಕರ್ನಾಟಕದ ನೆರೆ ಬಗ್ಗೆ ಪ್ರಸ್ತಾಸಿದ್ದು, ನೆರೆಯಿಂದ ಬೆಳೆ, ಸಾರ್ವಜನಿಕರ ಆಸ್ತಿ-ಪಾಸ್ತಿ ನಾಶ ಆಗಿದೆ. ಸರ್ಕಾರ ತಕ್ಷಣ ಸ್ಪಂದಿಸಿ 7 ಲಕ್ಷ ಜನರನ್ನ ಸ್ಥಳಾಂತರ ಮಾಡಲಾಗಿದೆ. ಪ್ರತಿ ಕುಟುಂಬಕ್ಕೆ 10 ಸಾವಿರ ಪರಿಹಾರ ಕೊಡಲಾಗಿದೆ. ಮನೆ ನಿರ್ಮಾಣಕ್ಕೆ 5 ಲಕ್ಷ ಭಾಗಶಃ ಮನೆಗಳ ದುರಸ್ತಿಗೆ 50 ಸಾವಿರ ಮಂಜೂರು ಮಾಡಿದೆ. ಎನ್ಡಿಆರ್ಎಫ್ ಈ ನಿಯಮ ಮೀರಿ ರಾಜ್ಯ ಸರ್ಕಾರವೇ ಹೆಚ್ಚುವರಿ ಹಣ ನೀಡಿದೆ ಎಂದು ರಾಜ್ಯದ ಸಾಧನೆಯ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮ ವೀಕ್ಷಣೆಗೆ 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು, 2 ಸಾವಿರ ಮಕ್ಕಳಿಂದ ಶಾಲಾ ಮಕ್ಕಳಿಂದ 3 ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಗರುಡ ಪಡೆಯಿಂದ ಆಂತರಿಕ ಭದ್ರತೆ ಕುರಿತು ಅಣಕು ಪ್ರದರ್ಶನ, ಆಕರ್ಷಕ ಬೈಕ್ ಸ್ಟಂಟ್ ಸಾಹಸ ಮತ್ತು ರಾಜ್ಯಪಾಲರಿಂದ ಸರ್ವೋತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಪೊಲೀಸ್ ಬಂದೋಬಸ್ತ್:
ಗಣರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ಪೊಲೀಸ್ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ 10 ಕೆ.ಎಸ್.ಆರ್.ಪಿ ತುಕಡಿ, 01 ಕ್ಷಿಪ್ರ ಕಾರ್ಯಾಚರಣೆ ತಂಡ, ಗರುಡಾ ಪಡೆ, ಕಮಾಂಡ್ ಕಂಟ್ರೋಲ್ ವಾಹನ ನಿಯೋಜನೆ ಹಾಗೂ ಮೈದಾನದ ಸುತ್ತ 07 ಎ.ಎಸ್. ಚೆಕ್ ತಂಡಗಳ ನಿಯೋಜನೆ ಮಾಡಲಾಗಿದೆ.