ಹಾಸನ: ಸರ್ಕಾರ ತಾನು ತರುವ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯಗತ ಮಾಡಲು ನೌಕರರನ್ನು ನೇಮಿಸಿಕೊಂಡು ಅವರಿಗೆ ಸಂಬಳವನ್ನೂ ನೀಡುತ್ತೆ. ಹೀಗೆ ಸರ್ಕಾರಿ ಕೆಲಸಕ್ಕೆ ನೇಮಕವಾದ ಗ್ರಾಮ ಪಂಚಾಯ್ತಿ ನೌಕರರಿಬ್ಬರು ಕೆಲಸ ಮಾಡೋದು ಬಿಟ್ಟು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಒಬ್ಬರ ಮೇಲೆ ಮತ್ತೊಬ್ಬರು ಭ್ರಷ್ಟಾಚಾರದ ಆರೋಪ ಮಾಡುತ್ತಾ ಬಡಿದಾಡಿಕೊಂಡಿರುವುದಲ್ಲದೇ, ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇವರ ಕಿತ್ತಾಟದಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮ ಪಂಚಾಯ್ತಿಯ ಪಿಡಿಒ, ಲೆಕ್ಕ ಸಹಾಯಕನ ಕಿತ್ತಾಟದ ಸ್ಟೋರಿ ಇದಾಗಿದೆ. ಅಕ್ರಮವಾಗಿ ಬಿಲ್ ಮಾಡಿರುವ ಮನೆಯೊಂದರ ವಿಷಯಕ್ಕೆ ಸಂಬಂಧಿಸಿದಂತೆ ಜಿಪಿಎಸ್ ಮಾಡಲು ಪಿಡಿಒ ಮಂಜುನಾಥ್ ಲೆಕ್ಕ ಸಹಾಯಕ ಸೋಮಣ್ಣಗೆ ಹೇಳಿದ್ದರಂತೆ. ಇದಕ್ಕೆ ಗ್ರಾಮಪಂಚಾಯ್ತಿಯ ಮೊಬೈಲ್ ಕೂಡ ನೀಡಿದ್ರಂತೆ. ಆದರೆ ಲೆಕ್ಕ ಸಹಾಯಕ ಸೋಮಣ್ಣ ಈ ಕೆಲಸ ಮಾಡಲು ಒಪ್ಪಲಿಲ್ಲ. ಇದರಿಂದ ಆಕ್ರೋಶಕೊಂಡ ಪಿಡಿಒ ಮಂಜುನಾಥ್ ಜಾತಿ ನಿಂದನೆ ಮಾಡಿ, ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ ಅಂತ ಲೆಕ್ಕ ಸಹಾಯಕ ಸೋಮಣ್ಣ ಆರೋಪಿಸಿದ್ದಾರೆ.
ಆದರೆ ಪಿಡಿಒ ಮಂಜುನಾಥ್ ಹೇಳೋದೇ ಬೇರೆ. ಸೋಮಣ್ಣ ಮೇಲೆ 2 ಮನೆಗಳ ಜಿಪಿಎಸ್ ಮಾಡಿ ಅಕ್ರಮವಾಗಿ ಹಣ ನುಂಗಿರುವ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಕೇಳಿ ನೋಟೀಸ್ ನೀಡಿದ್ದೆ. ಇದರಿಂದ ಸಿಟ್ಟಿಗೆದ್ದು ಲೆಕ್ಕ ಸಹಾಯಕ ಸೋಮಣ್ಣ ನನ್ನ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ ಎಂದು ಪ್ರತ್ಯಾರೋಪ ಮಾಡುತ್ತಿದ್ದಾರೆ.
ಘಟನೆ ಸಂಬಂಧ ಪಿಡಿಒ ಮಂಜುನಾಥ್ ಮತ್ತು ಲೆಕ್ಕ ಸಹಾಯಕ ಸೋಮಣ್ಣ ಇಬ್ಬರೂ ಜಾವಗಲ್ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಿಸಿದ್ದಾರೆ. ಇಬ್ಬರ ಜಗಳ ನೋಡಿ ಬೇಸತ್ತಿರುವ ಗ್ರಾಮಸ್ಥರು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಅಥವಾ ಇಬ್ಬರನ್ನೂ ಬೇರೆ ಬೇರೆ ಸ್ಥಳಗಳಿಗೆ ವರ್ಗಾವಣೆ ಮಾಡಿ ಎಂದು ಆಗ್ರಹಿಸುತ್ತಿದ್ದಾರೆ.