ಹಾಸನ: ಪ್ರೌಢಶಾಲಾ ಶಿಕ್ಷಕರಿಗೆ ಪರೀಕ್ಷೆ ನಡೆಸಲು ಮುಂದಾಗಿದ್ದ ರೋಹಿಣಿ ಸಿಂಧೂರಿಗೆ ತೀವ್ರ ಹಿನ್ನಡೆಯಾಗಿದೆ. ಜುಲೈ 28ಕ್ಕೆ ಪ್ರೌಢಶಾಲಾ ಶಿಕ್ಷಕರಿಗೆ ಪರೀಕ್ಷೆ ನಡೆಸಲು ಹಾಸನ ಜಿಲ್ಲಾದಿಕಾರಿ ಸಿಂಧೂರಿ ತೀರ್ಮಾನಿಸಿದ್ದರು.
ಆದ್ರೆ ಡಿಸಿ ನಿರ್ಧಾರಕ್ಕೆ ಈಗ ಸರ್ಕಾರದಿಂದ ಬ್ರೇಕ್ ಬಿದ್ದಿದೆ. ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡೋದಾಗಿ ಶಿಕ್ಷಣ ಸಚಿವರು ಸದನಕ್ಕೆ ಲಿಖಿತ ಉತ್ತರ ನೀಡಿದ್ದಾರೆ. ಎಸ್.ಎಸ್.ಎಲ್.ಸಿ ಫಲಿತಾಂಶ ಉತ್ತಮಗೊಳಿಸಲು ಡಿಸಿ ಸಿಂಧೂರಿ ಶಿಕ್ಷಕರಿಗ ಪರೀಕ್ಷೆ ನಿಗದಿಗೊಳಿಸಿದ್ದರು.
ಬದಲಾದ ಪಠ್ಯ ಕ್ರಮಕ್ಕೆ ಶಿಕ್ಷಕರು ಹೊಂದಿಕೊಂಡಿರುವ ಬಗ್ಗೆ ಪರಿಶೀಲಿಸಲು ರೋಹಿಣಿ ಸಿಂಧೂರಿ ಈ ಪರೀಕ್ಷೆ ನಡೆಸಲು ಮುಂದಾಗಿದ್ದರು. ಆದರೆ ಈಗ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ನಿಗದಿಯಾಗಿದ್ದ ಪರೀಕ್ಷೆ ರದ್ದಾಗಿದೆ. ವಿಧಾನ ಪರಿಷತ್ ನಲ್ಲಿ ಈ ಬಗ್ಗೆ ಶಿಕ್ಷಣ ಸಚಿವ ಎನ್.ಮಹೇಶ್ ಲಿಖಿತ ಉತ್ತರ ನೀಡಿದ್ದು, ತರಬೇತಿ ಮೂಲಕವೇ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಪರೀಕ್ಷೆಯ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ.
ಪರೀಕ್ಷೆ ನಡೆಸದಂತೆ ನಿರ್ದೇಶನ ನೀಡಿರುವುದಕ್ಕೆ ಪರಿಷತ್ ಸದಸ್ಯ ಮರಿತಿಬ್ಬೆಗೌಡರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಈ ವೇಳೆ ಉದ್ದೇಶಿತ ಪರೀಕ್ಷೆಯಿಂದ ಶಿಕ್ಷಕರ ಬೋಧನಾ ಆಸಕ್ತಿ ಕಡಿಮೆಯಾಗಲಿದ್ದು, ಶಿಕ್ಷಕರು ಆತಂಕ ಮತ್ತು ಒತ್ತಡಕ್ಕೆ ಒಳಗಾಗುತ್ತಾರೆಂದು ಸದಸ್ಯ ಮರಿತಿಬ್ಬೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.