ಹಾಸನ: ಸರ್ಕಾರಿ ಕೆಲಸ ದೇವರ ಕೆಲಸ ಅಂತಾರೆ. ಆದರೆ ದೇವರು-ಕೆಲಸ ಎಲ್ಲಾ ಪಕ್ಕಕಿರಲಿ. ಸರ್ಕಾರಿ ಕಟ್ಟಡದ ಗೌರವ ಉಳಿಸಿಕೊಂಡರೆ ಸಾಕಾಗಿದೆ. ಯಾಕೆಂದರೆ ಹಾಸನದ ಸರ್ಕಾರಿ ಸಂಘವೇ ಅಲ್ಲಿನ ಅಧಿಕಾರಿಗಳು, ನೌಕರರಿಗೆ ಇಸ್ಪೀಟ್ ಅಡ್ಡೆಯಾಗಿದೆ.
ಆಯಕಟ್ಟಾದ ಸ್ಥಳ, ಹತ್ತಾರು ಟೇಬಲ್ಗಳು, ಒಂದು ಟೇಬಲ್ಗೆ ಇಷ್ಟು ಜನ ಎಂದು ಜೂಜುಕೋರರು ಕುಳಿತು, ಎಲ್ಲರು ಕೈಯಲ್ಲಿ ಇಸ್ಪೀಟ್ ಕಾರ್ಡ್ ಹಿಡಿದುಕೊಂಡಿರೋದನ್ನ ನೋಡಿದರೆ ಇದು ಯಾವುದೋ ಲೈಸೆನ್ಸ್ ಹೊಂದಿದ ಇಸ್ಪೀಟ್ ಕ್ಲಬ್ ಎಂದು ನೋಡುಗರಿಗೆ ಅನಿಸುತ್ತೆ. ಅಷ್ಟರ ಮಟ್ಟೆಗೆ ಹಾಸನದ ಜಿಲ್ಲಾ ನೌಕರರ ಸಂಘದ ಕಟ್ಟಡದ ಚಿತ್ರಣವನ್ನೇ ಸಿಬ್ಬಂದಿ ಬದಲಿಸಿದ್ದಾರೆ.
ಇವರ ಜೂಜಾಟ ಯಾರಿಗೂ ಗೊತ್ತಿಲ್ಲದ ವಿಚಾರ ಏನಲ್ಲ. ಜಿಲ್ಲೆಯಾದ್ಯಂತ ವೈರಲ್ ಕೂಡ ಆಗಿವೆ. ಆದರೆ ಈ ಸರ್ಕಾರಿ ನೌಕರರು ಮಾತ್ರ ಯಾವುದಕ್ಕೂ ಕ್ಯಾರೆ ಮಾಡಲ್ಲ ಎನ್ನುವ ಹಾಗೆ ಇದ್ದಾರೆ. ಇಲ್ಲಿ ಪ್ರತಿನಿತ್ಯ 150 ರಿಂದ 200 ಮಂದಿ ಜೂಜು ಆಟದಲ್ಲಿ ತೊಡಗಿರುತ್ತಾರೆ. ಸಾವಿರ ಅಲ್ಲ ಲಕ್ಷಗಳ ಲೆಕ್ಕದಲ್ಲಿ ಇಲ್ಲಿ ಜೂಜು ನಡೆಯುತ್ತೆ. ಇಷ್ಟೆಲ್ಲಾ ಆಗುತ್ತಿದ್ದರು, ಒಬ್ಬ ಅಧಿಕಾರಿಯೂ ಕೂಡ ಈ ಬಗ್ಗೆ ತುಟಕ್ ಪಿಟಕ್ ಅನ್ನಲ್ಲ. ಯಾಕೆಂದರೆ ಇಲ್ಲಿ ಎಲ್ಲರಿಗೂ ಮಾಮೂಲಿ ಹೋಗುತ್ತೆ. ಆದ್ದರಿಂದ ಅವರೆಲ್ಲಾ ಸುಮ್ಮನೆ ನಮಗೆ ಬರೋ ಹಣ ಬರುತ್ತಲ್ಲ ಎಂದು ಕಣ್ಮುಚ್ಚಿ ಕುಳಿತಿದ್ದಾರೆ.
ಈ ರೀತಿಯ ಆರೋಪಗಳು ಕೇಳಿ ಬರುತ್ತಿರುವುದು ಇದೇ ಮೊದಲೇನಲ್ಲ. 2018ರಲ್ಲಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳೇ ಈ ರೀತಿ ಜೂಜು ಅಡ್ಡೆಯ ಮೇಲೆ ರೇಡ್ ಮಾಡಿ ಹಲವರನ್ನು ಬಂಧಿಸಿ ಬೀಗ ಕೂಡ ಜಡಿದಿದ್ದರು. ಆದರೆ ಇದೀಗ ಮತ್ತೆ ಅದೇ ಹಳೇ ವರಸೆ ಶುರುವಾಗಿದೆ. ಮತ್ತೊಮ್ಮೆ ಇಸ್ಪೀಟ್ ಆಟ ಎಗ್ಗಿಲ್ಲದೆ ಸಾಗಿದ್ದು, ಇದೆಕ್ಕೆ ತಡೆಹಾಕಬೇಕಿದೆ. ಈಗಿನ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳು ತಮ್ಮ ಇಚ್ಛಾಶಕ್ತಿ ಕೊರತೆಯನ್ನ ನೀಗಿಸಿಕೊಂಡು ಕ್ರಮ ತೆಗೆದುಕೊಂಡರೆ, ಸರ್ಕಾರಿ ಕಟ್ಟಡದ ಮರ್ಯಾದೆ ಆದರೂ ಉಳಿಯುತ್ತೆ.