ಮನೆ ಬಾಗಿಲಿಗೆ ಶರ್ಟ್‌, ಪ್ಯಾಂಟ್‌ ಹೋಗುತ್ತೆ.. ರೈತರಿಗೆ ಗೊಬ್ಬರ ಯಾಕೆ ಹೋಗಲ್ಲ – ಹೆಚ್‌.ಆರ್‌.ರಂಗನಾಥ್‌ ಪ್ರಶ್ನೆ

Public TV
2 Min Read
h.r.ranganath 1

ಮೈಸೂರು: ಮನೆ ಬಾಗಿಲಿಗೆ ಶರ್ಟ್, ಪ್ಯಾಂಟ್ ತಲುಪಿಸುವ ವ್ಯವಸ್ಥೆ ಇದ್ದಾಗ.. ರೈತರ ಬಳಕೆಯ ಉಪಕರಣಗಳು, ಗೊಬ್ಬರವನ್ನು ಸರ್ಕಾರ ಯಾಕೆ ತಲುಪಿಸಲು ಆಗಲ್ಲ ಎಂದು ʼಪಬ್ಲಿಕ್‌ ಟಿವಿʼ (Public TV) ಮುಖ್ಯಸ್ಥರಾದ ಹೆಚ್‌.ಆರ್‌.ರಂಗನಾಥ್‌ (H.R.Ranganath) ಪ್ರಶ್ನಿಸಿದರು.

ಮೈಸೂರಿನ (Mysuru) ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಸುತ್ತೂರು ಜಾತ್ರೆಯ (Suttur Jatra) ಅಂಗವಾಗಿ ಶನಿವಾರ ಸಿರಿಧಾನ್ಯಗಳ ಕುರಿತ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ರೈತರ ಮನೆ ಬಾಗಿಲಿಗೆ ಗೊಬ್ಬರ, ಕೃಷಿ ಉಪಕರಣಗಳು ತಲುಪಿಸಬೇಕಿದೆ. ಇದಕ್ಕಾಗಿ ಗ್ರಾಮೀಣ ಅಮೆಜಾನ್ (Amazon) ಅನ್ನು ಸರ್ಕಾರವೇ ಆರಂಭಿಸಬೇಕು. ಈ ಮೂಲಕ ಹೇಗೆ ತಾಲ್ಲೂಕು ಕೇಂದ್ರಗಳಿಗೆ ಅಮೆಜಾನ್‌ನಿಂದ ಜನ ಬಳಕೆಯ ಉತ್ಪನ್ನಗಳು ಅವರ ಮನೆ ಬಾಗಿಲು ತಲುಪುತ್ತದೆಯೋ, ಅದೇ ರೀತಿ ಕೃಷಿ ಉತ್ಪನ್ನಗಳು ತಲುಪಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಬಿರುಗಾಳಿ ಬೀಸುತ್ತಿದೆ: ಬೊಮ್ಮಾಯಿ

suttur jatra

ನಮ್ಮ ಪೂರ್ವಜರ ಆರೋಗ್ಯ ಪದ್ಧತಿ ಬಹಳ ಉತ್ಕೃಷ್ಟವಾಗಿತ್ತು. ಆದರೆ ನಂತರದ ದಿನಗಳಲ್ಲಿ ಅದನ್ನು ನಾವು ಕಳೆದುಕೊಂಡೆವು. ಆ ಪದ್ಧತಿ ಕಳೆದುಕೊಂಡ ಮೇಲೆ ನಮಗೆ ಅದರ ಬಗ್ಗೆ ಈಗ ಜ್ಞಾನ ಮೂಡುತ್ತಿದೆ. ಹೀಗಾಗಿ ಸಿರಿಧಾನ್ಯದ ಬಗ್ಗೆ ಎಲ್ಲರೂ ಮಾತಾಡುತ್ತಿದ್ದಾರೆ. ಸಿರಿಧಾನ್ಯದ ಕ್ರಾಂತಿ ಆಗಬೇಕು. ನಮ್ಮ ಆರೋಗ್ಯ, ಭೂಮಿ ಆರೋಗ್ಯ ಕಾಪಾಡಿಕೊಳ್ಳುವ ಉದ್ದೇಶದಿಂದ ಸಿರಿಧಾನ್ಯ ಬೇಸಾಯ ಹೆಚ್ಚಾಗಬೇಕಿದೆ ಎಂದು ತಿಳಿಸಿದರು.

ಸರ್ಕಾರದ ಹಲವು ಯೋಜನೆಗಳು ಜನರಿಗೆ ಗೊತ್ತೇ ಆಗುವುದಿಲ್ಲ. ಸಿರಿಧಾನ್ಯ ಬೆಳೆದರೆ ಅದರ ಮಾರುಕಟ್ಟೆ ಹೇಗೆ ಎಂಬುದನ್ನು ಸರ್ಕಾರ ಮೊದಲು ತಿಳಿಸಬೇಕು. ಬರೀ ಸಿರಿಧಾನ್ಯದ ಭಾಷಣ ಮಾಡಿದರೆ ಸಾಲದು, ಸಿರಿ ಧಾನ್ಯದ ಬೆಳೆಯನ್ನು ಲಾಭಕ್ಕೆ ಮಾರುವುದು ಹೇಗೆ ಎಂಬುದನ್ನು ಮೊದಲ ತಿಳಿಸಿ. ಮೈಸೂರಿನ ಯಾವುದಾದರೂ ತಾಲೂಕನ್ನು ಸಿರಿಧಾನ್ಯದ ತಾಲೂಕಾಗಿ ಗುರುತಿಸಿ ಎಂದು ಹೇಳಿದರು. ಇದನ್ನೂ ಓದಿ: ಉಚಿತ ಭಾಗ್ಯದ ಗೊಂದಲ ಬಗೆಹರಿಸಲು ಅಖಾಡಕ್ಕೆ ಇಳಿದ್ರಾ ವಿಪಕ್ಷ ನಾಯಕ ಸಿದ್ದರಾಮಯ್ಯ

suttur jatra h.r.ranganath

ಸಿರಿಧಾನ್ಯ ಬೆಳೆಯಲು ರೈತರಿಗೆ ಆರ್ಥಿಕ ಮಾರ್ಗಗಳ ಧೈರ್ಯ ತುಂಬಿ. ರೈತರ ಮನೆಗೆ ಸರ್ಕಾರಗಳು ಗೊಬ್ಬರ ಕಳಿಸಬೇಕು. ಕೃಷಿ ಉಪಕರಣಗಳನ್ನು ಸರ್ಕಾರ ರೈತರ ಮನೆಗೆ ಗ್ರಾಮೀಣ ಅಮೆಜಾನ್ ಸೃಷ್ಟಿಯಾಗಬೇಕು. ಗ್ರಾಮೀಣ ಅಮೆಜಾನ್ ಸೃಷ್ಟಿಯಾದರೆ, ಸಾವಿರಾರು ಯುವಕರಿಗೆ ಕೆಲಸ ಸಿಗುತ್ತದೆ. ತಾಲೂಕು ಮಟ್ಟಕ್ಕೆ ಶರ್ಟ್, ಪ್ಯಾಂಟ್ ತಲುಪಿಸುವ ವ್ಯವಸ್ಥೆ ಇದ್ದಾಗ ರೈತರ ಬಳಕೆಯ ಉಪಕರಣಗಳು, ಗೊಬ್ಬರವನ್ನು ಸರ್ಕಾರ ಯಾಕೆ ತಲುಪಿಸಲು ಆಗಲ್ಲ ಎಂದು ಪ್ರಶ್ನಿಸಿದರು.

ಗ್ರಾಮೀಣ ಭಾರತ ಈಗ ಬಹಳ ವೇಗವಾಗಿ ನಗರ ಭಾರತವಾಗುತ್ತಿದೆ. ನಗರ ಭಾರತವಾಗುತ್ತಿರುವುದು ಕೃಷಿ ಚಟುವಟಿಕೆ ಕಡಿಮೆ ಆಗುತ್ತಿರುವುದರ ಸೂಚಕ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಮಿತ್ ಶಾ ಮತ್ತೊಂದು ಟೂರ್ – ಬೆಂಗಳೂರು, ಮಂಡ್ಯ ಗೇಮ್ ಪ್ಲ್ಯಾನ್?

ವಿಚಾರ ಸಂಕಿರಣದಲ್ಲಿ ಪ್ರಗತಿಪರ ಕೃಷಿಯಲ್ಲಿ ಸಾಧನೆ ಮಾಡಿರುವ ರೈತರನ್ನು ಸನ್ಮಾನಿಸಲಾಯಿತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ವಿಚಾರ ಸಂಕಿರಣದ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರ್‌ಎಸ್‌ಎಸ್‌ನ ಮುಕಂದ್ ಅವರು ಸೇರಿದಂತೆ ಹಲವು ಗಣ್ಯರು, ಸ್ವಾಮೀಜಿಗಳು ಭಾಗವಹಿಸಿದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *