ಚಿಕ್ಕಬಳ್ಳಾಪುರ: ಒಂದು ಕಡೆ ರಾಜ್ಯದ ಸಂಸದರಿಗೆ ದುಬಾರಿ ಐಪೋನ್ ಕೊಟ್ಟಿರೋ ಸಮ್ಮಿಶ್ರ ಸರ್ಕಾರ ಹಾಗೂ ಸಚಿವರ ನಡೆ ಎಲ್ಲರ ಟೀಕೆಗೆ ಗುರಿಯಾಗಿದೆ. ಆದ್ರೆ ಇತ್ತ ಶಾಲೆಗಳು ಆರಂಭವಾಗಿ ಎರಡು ತಿಂಗಳುಗಳೆ ಕಳೆದರೂ ಪಾಪ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರ ಸಮವಸ್ತ್ರವೇ ಕೊಟ್ಟಿಲ್ಲ. ಹೈಸ್ಕೂಲ್ ಗೆ ಬರುತ್ತಿದ್ದಂತೆ ಚೂಡಿದಾರ ತೊಡಬೇಕಿದ್ದ ಹೆಣ್ಣು ಮಕ್ಕಳು ಇನ್ನೂ ಹಳೆಯ ಲಂಗ-ಸ್ಕರ್ಟ್ ಧರಿಸಿಯೇ ಶಾಲೆಗೆ ಬರುವಂತೆ ಜಿಲ್ಲೆಯ ವಿದ್ಯಾರ್ಥಿನಿಯರ ಸ್ಥಿತಿ
ಚಿಕ್ಕಬಳ್ಳಾಪುರ ಇದುವರೆಗೂ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ವಿತರಿಸಿಲ್ಲ. 7ನೇ ತರಗತಿ ವರೆಗೂ ಲಂಗ ತೊಡುತ್ತಿದ್ದ ವಿದ್ಯಾರ್ಥಿನಿಯರು ಹೈ ಸ್ಕೂಲ್ ಮೆಟ್ಟಿಲೇರಿದ ಬಳಿಕ ಚೂಡಿದಾರ ತೊಡಬೇಕು. ಇಡೀ ಜಿಲ್ಲೆಯಲ್ಲಿ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಸೇರಿ ಒಟ್ಟು 43,329 ಹೈಸ್ಕೂಲ್ ವಿದ್ಯಾರ್ಥಿಗಳಿದ್ದಾರೆ. ಕೆಲವರು ಯೂನಿಫಾರಂ ಇಲ್ಲದ ಕಾರಣ ಕಲರ್ ಬಟ್ಟೆ ತೊಟ್ಟು ಶಾಲೆಗಳಿಗೆ ಬರುತ್ತಿದ್ದರೆ, ಇನ್ನೂ ಕೆಲವರು ಹಳೆಯ ಯೂನಿಫಾರಂನ್ನೇ ಧರಿಸಿ ಶಾಲೆಗಳಿಗೆ ಬರುತ್ತಿದ್ದಾರೆ.
ಇದರಲ್ಲಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 8,388 ವಿದ್ಯಾರ್ಥಿನಿಯರಿದ್ದು, ಇವರಿಗೆಲ್ಲರಿಗೂ ಸಮವಸ್ತ್ರ ಭಾಗ್ಯ ಲಭಿಸಿಲ್ಲ. ಇದರಲ್ಲಿ 8ನೇ ತರಗತಿಯೇ ಒಟ್ಟು 5,205 ವಿದ್ಯಾರ್ಥಿನಿಯರಿದ್ದು, 7 ನೇ ತರಗತಿಯ ಲಂಗವನ್ನೇ ತೊಟ್ಟು ಹೈಸ್ಕೂಲ್ಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಕೆಲ ಶಾಲೆಗಳಲ್ಲಿನ 8ನೇ ತರಗತಿ ವಿದ್ಯಾರ್ಥಿನಿಯರು ಕಲರ್ ಡ್ರಸ್ಗಳಲ್ಲಿ ಶಾಲೆಗೆ ಬರ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಉಪನಿರ್ದೇಶಕರನ್ನ ಕೇಳಿದ್ರೇ ರಾಜ್ಯ ಮಟ್ಟದಲ್ಲಿ ಟೆಂಡರ್ ಸಮಸ್ಯೆ ಆಗಿದೆ ಅದಷ್ಟು ಬೇಗ ಕೊಡುತ್ತೇವ ಅಂತಿದ್ದಾರೆ.
ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಬೇಕಾದ ಸರ್ಕಾರ ಇದುವರೆಗೂ ಒಂದು ಜೊತೆ ಸಮವಸ್ತ್ರವನ್ನೂ ಸಹ ವಿತರಿಸಿಲ್ಲ, ಹೀಗಾಗಿ ಸರ್ಕಾರಿ ಶಾಲೆಗೆ ಬರೋ ಮಕ್ಕಳು ಸ್ವಂತ ಹಣದಿಂದ ಸಮವಸ್ತ್ರ ಖರಿದಿಸೋ ಶಕ್ತಿ ಕೂಡ ಇರಲ್ಲ. ಒಂದು ಕಡೆ ಸಂಸದರಿಗೆ ಬೇಡದ ಇರೋ ಐಫೋನ್ ಕೊಡೋ ಸರ್ಕಾರ, ಇಲ್ಲಿ ಪಾಪ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡೋಕೆ ಮೀನಾಮೇಷ ಎಣಿಸ್ತಿರೋದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.