ಶಿವಮೊಗ್ಗ: ಸಂಪುಟ ವಿಸ್ತರಣೆ ಹಾಗೂ ಅತೃಪ್ತರ ಸಭೆ ವಿಚಾರಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ನಾವೇನೂ ಮಾಡಲ್ಲ ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳುತ್ತೆ ಅಂತ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ನಡೆಸುವವರೇ ಅಕ್ರಮ ಕೆಲಸಗಳಲ್ಲಿ ತೊಡಗಿದ್ದಾರೆ. ಈ ಸಮ್ಮಿಶ್ರ ಸರ್ಕಾರಕ್ಕೆ ಮುಂಬರುವ ದಿನಗಳಲ್ಲಿ ಏನೆಲ್ಲಾ ಪರಿಸ್ಥಿತಿ ಬರುತ್ತೊ ಏನೋ, ನಾವಂತೂ ಏನೂ ಮಾಡಲ್ಲ. ಅವರಾಗಿಯೇ ಬಿದ್ದು ಹೋಗಬಹುದು ಕಾದು ನೋಡುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ರಾಮಲಿಂಗಾ ರೆಡ್ಡಿ, ರಮೇಶ್ ಜಾರಕಿಹೊಳಿ, ಬಿಸಿ ಪಾಟೀಲ್ ಅವರನ್ನು ಕೇಳಬೇಕು. ಈಗ ಕಾಂಗ್ರೆಸ್ನಲ್ಲಿನ ಅಸಮಾಧಾನ ಬಹಿರಂಗ ಆಗುತ್ತಿದೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ನಡೆಯುವ ಅತೃಪ್ತರ ಸಭೆ, ಗುಂಪುಗಾರಿಕೆ ಯಾವುದೂ ಬಿಜೆಪಿಗೆ ಸಂಬಂಧವಿಲ್ಲ. ಸಂಪುಟ ವಿಸ್ತರಣೆಯಾಗಿದೆ ಎನ್ನುವ ಸಮಾಧಾನ ಬಿಟ್ಟರೆ ಬೇರೆ ಏನು ಇಲ್ಲ. ಬಿಜೆಪಿಯ 104 ಸದಸ್ಯರು ಕೂಡಿ ವಿರೋಧ ಪಕ್ಷವಾಗಿ ಏನು ಮಾಡಬೇಕೋ ಆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇನ್ನು ರಾಯಚೂರಿನಲ್ಲಿ ನಡೆದ ಅಕ್ರಮ ಮರಳು ದಂಧೆಗೆ ಗ್ರಾಮಲೆಕ್ಕಾಧಿಕಾರಿ ಬಲಿಯಾದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಶಾಸಕರು, ಮಂತ್ರಿಗಳು ಮರಳು ದಂಧೆಯಲ್ಲಿ ತೊಡಗಿದ್ದಾರೆ. ಆಡಳಿತ ನಡೆಸುತ್ತಿರುವವರೇ ಮರಳು ದಂಧೆಯಲ್ಲಿ ಇದ್ದಾರೆ. ಮಾನ್ವಿ ಪ್ರಕರಣವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಬೇಕು. ಅಕ್ರಮಗಳನ್ನು ತಡೆಯಲು ಸಿಎಂ ಕ್ರಮ ಕೈಗೊಳ್ಳಬೇಕು. ಆಗ ಅವರು ಜನಪರ ಇದ್ದಾರೆ ಎನ್ನೋದು ಸ್ಪಷ್ಟವಾಗುತ್ತೆ. ಡ್ರೈವರ್ನನ್ನು ಅರೆಸ್ಟ್ ಮಾಡಿದ್ರೆ ಏನೂ ಆಗಲ್ಲ ಮರಳು ದಂಧೆ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv