ಬೆಂಗಳೂರು: ಎತ್ತರದ ಶಿಖರ ಪರ್ವತಗಳ ತಾಣವಾಗಿ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ, ರಾಜಧಾನಿಯ ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದಲ್ಲಿ ಇಂದು ಮುಂಜಾನೆ, 300 ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳು ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಪ್ರವಾಸಿ ತಾಣವಾದ ಶಿವಗಂಗೆ ಬೆಟ್ಟಕ್ಕೆ ದಿನನಿತ್ಯ ಸಾವಿರಾರು ಪ್ರವಾಸಿಗರು ಬಂದು ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ. ಜೊತೆಗೆ ಬಂದವರು ಹಾಗೆ ಹೋಗದೇ ಅಲ್ಲಲ್ಲಿ ಕಸಗಳನ್ನು ಹಾಕಿ ಹೋಗುತ್ತಾರೆ. ಇದರಿಂದ ಗಿರಿಯ ಸುತ್ತಮುತ್ತ ಸಾಕಷ್ಟು ಪ್ಲಾಸ್ಟಿಕ್ ಹಾಗೂ ಇತರೇ ಕಸಗಳೇ ತುಂಬಿ ಹೋಗಿದೆ. ಶಿವಗಂಗೆ ಬೆಟ್ಟವನ್ನು ಸ್ವಚ್ಛಗೊಳಿಸಿ ಪ್ಲಾಸ್ಟಿಕ್ ಮುಕ್ತ ಗಿರಿಯನ್ನಾಗಿಸಲು ನೆಲಮಂಗಲ ತಾಲೂಕು ಆಡಳಿತ ಮುಂದಾಗಿದ್ದು, ಜೊತೆಗೆ ವಿವಿಧ ತಾಲೂಕಿನ ಅಧಿಕಾರಿಗಳು ಹಾಗೂ ಕೆಲ ಸರ್ಕಾರೇತರ ಸಂಸ್ಥೆಗಳು ಕೈ ಜೊಡಿಸಿ ಗಿರಿಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ.
ಕೊರೆಯುವ ಚಳಿಯಲ್ಲೇ ಮುಂಜಾನೆಯಿಂದಲೇ 300ಕ್ಕೂ ಹೆಚ್ಚು ಸರ್ಕಾರಿ ನೌಕಕರು ಹಾಗೂ ಕ್ಲೀನ್ ಮೌಂಟೇನ್ ಅಸೋಸಿಯೇಷನ್ ಸದಸ್ಯರು ಜೊತೆಗೂಡಿ ಶಿವಗಂಗೆ ಬೆಟ್ಟದ ಸ್ವಚ್ಛತೆಯಲ್ಲಿ ತೊಡಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಗಳು, ಶಿವಗಂಗೆ ಬೆಟ್ಟದಿಂದ ನಾವು ಸ್ವಚ್ಛತಾ ಆಂದೋಲನವನ್ನು ಆರಂಭಿಸಿದ್ದೇವೆ. ಮುಂಬರುವ ದಿನಗಳಲ್ಲಿ ತಾಲೂಕಿನ ಎಲ್ಲಾ ಹೋಬಳಿ ಮಟ್ಟದಲ್ಲೂ ಸ್ವಚ್ಛತಾ ಕೆಲಸವನ್ನು ಮಾಡಿ ಪ್ಲಾಸ್ಟಿಕ್ ಮುಕ್ತ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv