ಬೆಳಗಾವಿ: ಮದುವೆ ದಿನ ಕಲ್ಯಾಣಮಂಟಪದಲ್ಲೇ ಸರ್ಕಾರಿ ನೌಕರನೊಬ್ಬ (Government Employee) ವರದಕ್ಷಿಣೆಗೆ (Dowry) ಬೇಡಿಕೆಯಿಟ್ಟು ಹೈಡ್ರಾಮಾ ನಡೆಸಿ ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಬೆಳಗಾವಿ ಡಿಸಿ ಕಚೇರಿಯಲ್ಲಿ ಎಸ್ಡಿಸಿ ಆಗಿರುವ ಸಚಿನ್ ಪಾಟೀಲ್ ಹೈಡ್ರಾಮಾ ನಡೆಸಿದ ವರ. ಈತ ಕಲ್ಯಾಣಮಂಟಪದಲ್ಲಿ ನಡೆಯುತ್ತಿದ್ದ ಅರಿಶಿಣ ಕಾರ್ಯಕ್ರಮದಲ್ಲಿ 200 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ನೀಡುವಂತೆ ವಧುವಿನ ಮನೆಯವರಿಗೆ ಡಿಮ್ಯಾಂಡ್ ಇಟ್ಟಿದ್ದಾನೆ. ವರನ ಡಿಮ್ಯಾಂಡ್ಗೆ ವಧುವಿನ ಸಂಬಂಧಿಕರು, ಮದುವೆಯಲ್ಲಿ ಪಾಲ್ಗೊಂಡ ಜನರು ತಬ್ಬಿಬ್ಬಾಗಿದ್ದಾರೆ. ಅಲ್ಲದೇ ನಾವು ಬಡವರು ಇಷ್ಟೊಂದು ಹಣ, ಚಿನ್ನಾಭರಣ ಎಲ್ಲಿಂದ ಕೊಡೋದು ಎಂದು ವಧುವಿನ ಪೋಷಕರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ಅಪಘತ – 50 ಮೀಟರ್ ಹಾರಿ ಬಿದ್ದ ಯುವತಿ ಗಂಭೀರ
ಈ ವೇಳೆ ವರದಕ್ಷಿಣೆ ಕೊಡದ ಹಿನ್ನೆಲೆ ಹಳದಿ ಕಾರ್ಯಕ್ರಮ ನಡೆಯುವಾಗಲೇ ಮಂಟಪದಿಂದ ವರ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ನಾನು ಹಳದಿ ಕಾರ್ಯದಲ್ಲಿ ಪಾಲ್ಗೊಳ್ಳಲ್ಲ ಎಂದು ಹೈಡ್ರಾಮ ನಡೆಸಿದ್ದಾನೆ. ಈ ವೇಳೆ ಮದುವೆ ದಿನ ವಿಚಿತ್ರವಾಗಿ ನಡೆದುಕೊಂಡ ವರನಿಗೆ ಹುಡುಗಿ ಮನೆಯವರು ಗೂಸಾ ನೀಡಿದ್ದು, ಕಲ್ಯಾಣ ಮಂಟಪದಿಂದ ಎಸ್ಕೇಪ್ ಆಗಲು ಯತ್ನಿಸಿದ್ದ ವರನನ್ನು ರೂಂನಲ್ಲೇ ಲಾಕ್ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ
ಏನಿದು ಘಟನೆ?
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗ್ರಾಮವೊಂದರ ಯುವತಿ ಜೊತೆಗೆ ಸಚಿನ್ ಪಾಟೀಲ್ ನಿಶ್ಚಿತಾರ್ಥ ಆಗಿತ್ತು. ಇದ್ದ ಒಬ್ಬಳೇ ಹೆಣ್ಣುಮಗಳನ್ನು ಸರ್ಕಾರಿ ನೌಕರ ಎಂಬ ಕಾರಣಕ್ಕೆ ಸಚಿನ್ಗೆ ಕೊಡಲು ವಧುವಿನ ಪೋಷಕರು ನಿರ್ಧರಿಸಿದ್ದರು. ಇವರಿಬ್ಬರ ನಿಶ್ಚಿತಾರ್ಥ ಆರು ತಿಂಗಳ ಹಿಂದೆ ನಡೆದಿತ್ತು. ನಿಶ್ಚಿತಾರ್ಥ ಸಮಯದಲ್ಲೇ 25 ಸಾವಿರ ವರದಕ್ಷಿಣೆ, 50 ಗ್ರಾಂ ಚಿನ್ನಾಭರಣ ಕೊಡುವುದಾಗಿ ಮಾತುಕತೆ ಮಾಡಿದ್ದರು. ಇದರ ಜೊತೆಗೆ ಮದುವೆಯನ್ನು ತಾವೇ ಮಾಡಿಕೊಡುವುದಾಗಿ ಹುಡುಗಿ ಪೋಷಕರು ತಿಳಿಸಿದ್ದರು. ಈ ಮಾತುಕತೆಗೆ ಉಭಯ ಕುಟುಂಬಸ್ಥರೂ ಒಪ್ಪಿಗೆ ಸೂಚಿಸಿದ್ದರು. ಡಿಸೆಂಬರ್ 31ಕ್ಕೆ ಖಾನಾಪುರದ ಲೋಕಮಾನ್ಯ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಯವಾಗಿತ್ತು. ಎಲ್ಲಾ ಸಂಬಂಧಿಕರು, ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿತ್ತು. ಇದೀಗ ಹಸೆಮಣೆ ಏರಬೇಕಿದ್ದ ವರ ಜೈಲುಪಾಲಾಗಿದ್ದಾನೆ. ಇದನ್ನೂ ಓದಿ: ಮಕ್ಕಳಾಗದ ಮಹಿಳೆಯರನ್ನ ಗರ್ಭಿಣಿ ಮಾಡಿದ್ರೆ 13 ಲಕ್ಷ ರೂ. ಬಹುಮಾನ – ಆಫರ್ ಕೊಟ್ಟಿದ್ದ 8 ಮಂದಿ ಅರೆಸ್ಟ್
ಮದುವೆ ದಿನವೇ ಹೈಡ್ರಾಮಾ ಮಾಡಿದ ಸರ್ಕಾರಿ ನೌಕರ ಹಿಂಡಲಗಾ ಜೈಲು ಪಾಲಾಗಿದ್ದು, ಸಚಿನ್ ಪಾಟೀಲ್ನನ್ನು ವಶಕ್ಕೆ ಪಡೆದು ಖಾನಾಪುರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ನಿಶ್ಚಿತಾರ್ಥದ ಬಳಿಕ ಸಚಿನ್ ಯುವತಿ ಜೊತೆಗೆ ದೈಹಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಆಗಾಗ ಮನೆಗೆ ಹೋಗಿ ನಾಲ್ಕೈದು ಸಲ ಯುವತಿ ಜೊತೆಗೆ ದೈಹಿಕ ಸಂಪರ್ಕ ಸಾಧಿಸಿದ್ದ ಸಚಿನ್ ಆಕೆಯ ಸಹೋದರರು, ಸಂಬಂಧಿಕರ ಬಳಿ 1 ಲಕ್ಷ ಸಾಲವನ್ನೂ ಪಡೆದಿದ್ದ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ವರದಕ್ಷಿಣೆ ಕೊಡಲು ಒಪ್ಪದಿದ್ದಾಗ ಯುವತಿಗೂ ಜೀವ ಬೆದರಿಕೆ ಹಾಕಿದ್ದಾನೆ. ಇದೀಗ ಸಚಿನ್ ಪಾಟೀಲ್ ವಿರುದ್ಧ ಖಾನಾಪುರ ಠಾಣೆಯಲ್ಲಿ ಮೂರು ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 303 (ಕೊಲೆ ಬೆದರಿಕೆ), ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಐಪಿಸಿ ಸೆಕ್ಷನ್ 420 (ವಂಚನೆ) ಪ್ರಕರಣ ದಾಖಲಾಗಿದೆ. ಸೋಮವಾರ ಪೊಲೀಸರು ಆರೋಪಿ ಸಚಿನ್ ಪಾಟೀಲ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದನ್ನೂ ಓದಿ: 14ರ ಹುಡುಗಿ ಮೇಲೆ ಪ್ರೀತಿ – ಶಾಲಾ ಬಸ್ ಡ್ರೈವರ್ ಪ್ರೇಮದಾಟಕ್ಕೆ ವಿದ್ಯಾರ್ಥಿನಿ ಬಲಿ