ಬೆಂಗಳೂರು: ಗ್ರಾಮ ಪಂಚಾಯಿತಿಗಳಿಗೇ (Gram Panchayat) ತೆರಿಗೆ ಸಂಗ್ರಹದ ಅಧಿಕಾರ ನೀಡುವ ʻಕರ್ನಾಟಕ ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ವಿಧೇಯಕ 2025ʼ ಅನ್ನು ಗುರುವಾರ ವಿಧಾನ ಪರಿಷತ್ನಲ್ಲಿ ಅಂಗೀಕರಿಸಲಾಯಿತು.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ವಿಧೇಯಕ ಮಂಡಿಸಿದರು. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅನಧಿಕೃತ ಬಡಾವಣೆ ನಿವಾಸಿಗಳಿಗೆ ಈ ವಿಧೇಯಕ ತರುತ್ತಿದ್ದೇವೆ. ಅನಧೀಕೃತ ಬಡಾವಣೆಯ ನಿವಾಸಿಗಳು ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಆದರೆ ಸರ್ಕಾರಕ್ಕೆ ತೆರಿಗೆ ಬರ್ತಿಲ್ಲ. ಹೀಗಾಗಿ ಗ್ರಾಮ ಪಂಚಾಯತಿಗಳಿಗೆ ತೆರಿಗೆ ಸಂಗ್ರಹ ಮಾಡುವ ಅಧಿಕಾರ ಕೊಡುತ್ತಿದ್ದೇವೆ. ಮೊದಲ ಬಾರಿಗೆ ದುಪ್ಪಟ್ಟು ದಂಡ ವಿಧಿಸುತ್ತೇವೆ, ಬಳಿಕ ಸಾಮಾನ್ಯ ದಂಡ ಕಟ್ಟುವ ನಿಯಮ ತರುತ್ತಿದ್ದೇವೆ. ಈಗಾಗಲೇ ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಈ ನಿಮಯವನ್ನ ಅಳವಡಿಸಲಾಗಿದೆ ಎಂದು ಹೇಳಿದರು. ಬಳಿಕ ಸರ್ವಾನುಮತದಿಂದ ವಿಧೇಯಕವನ್ನು ಅಂಗೀಕರಿಸಲಾಯಿತು.
ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಸಚಿವ ಕೃಷ್ಣಭೈರೇಗೌಡ ಅವರು, ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ(ತಿದ್ದುಪಡಿ) ವಿಧೇಯಕ 2025 ಮಂಡನೆ ಮಾಡಿದರು. ಯಾವುದೇ ಚರ್ಚೆ ಇಲ್ಲದೇ ವಿಧೇಯಕ ಅಂಗೀಕರಿಸಲಾಯಿತು.
ಜೊತೆಗೆ ಕೃಷ್ಣಭೈರೇಗೌಡ ಅವರೇ ಮಂಡಿಸಿದ ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ 2025, ಕರ್ನಾಟಕ ನೋಂದಣಿ ( ತಿದ್ದುಪಡಿ) ವಿಧೇಯಕ 2025, ಕರ್ನಾಟಕ ಭೂ ಕಂದಾಯ( ತಿದ್ದುಪಡಿ) ವಿಧೇಯಕ 2025, ಕರ್ನಾಟಕ ಗ್ರಾಮ ಹುದ್ದೆಗಳ ರದ್ದಿಯಾತಿ( ತಿದ್ದುಪಡಿ) ವಿಧೇಯಕ 2025, ಕರ್ನಾಟಕ ಭೂ ಕಬಳಿಕೆ ನಿಷೇಧ ( ತಿದ್ದುಪಡಿ) 2025 ಗಳನ್ನು ಅಂಗೀಕರಿಸಲಾಯಿತು.
ಬಳಿಕ ವಿಧಾನ ಪರಿಷತ್ನಲ್ಲಿ ರಾಜ್ಯ ಸರ್ಕಾರ ಮೂರು ನಿರ್ಣಯಗಳನ್ನು ಮಂಡನೆ ಮಾಡಿತು. ಅವುಗಳನ್ನು ನೋಡುವುದಾದ್ರೆ…
ನಿರ್ಣಯ-1
ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಫ್ ತಿದ್ದುಪಡಿ ವಿಧೇಯಕ ತಕ್ಷಣ ವಾಪಸ್ ಪಡೆಯಬೇಕು.
ನಿರ್ಣಯ-2
ಕರ್ನಾಟಕ ಸರ್ಕಾರ ಜಾರಿ ಮಾಡಿರೋ ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆಯನ್ನು ಕೇಂದ್ರ ಸರ್ಕಾರವೂ ಜಾರಿ ಮಾಡಬೇಕು.
ನಿರ್ಣಯ-3
ಯುಜಿಸಿ ಕರಡು ರೆಗ್ಯುಲೇಷನ್ಸ್ 2025 ಹಿಂಪಡೆಯಬೇಕು ಎಂದು ರಾಜ್ಯ ಸರ್ಕಾರ ನಿರ್ಣಯ ಮಂಡನೆ ಮಾಡಿದೆ. ಶುಕ್ರವಾರ ಬಜೆಟ್ ಅಧಿವೇಶನ ಚರ್ಚೆ ಬಳಿಕ ಅಂಗೀಕಾರ ಮಾಡುವ ಸಾಧ್ಯತೆಯಿದೆ.
ಸರ್ಕಾರದ ನಿರ್ಣಯ ಮಂಡನೆ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಪಿ.ಎಚ್.ಪೂಜಾರ್ಂ ಮುಸ್ಲಿಮರಿಗೆ ಬಜೆಟ್ನಲ್ಲಿ ಶಾದಿ ಭಾಗ್ಯ ಸರ್ಕಾರ ಕೊಟ್ಟಿದೆ. ಮದುವೆ ಮಾಡೋದು ಸರ್ಕಾರದ ಕೆಲಸನಾ? ಮದುವೆ ಮಾಡಿಸೋಕೆ ಹಣ ಕೊಟ್ಟ ಹಾಗೆ ಮುಂದಿನ ದಿನಗಳಲ್ಲಿ ಮುಸ್ಲಿಮರ ಹೆಂಡತಿಯರನ್ನ ಸಾಕೋಕೆ ದುಡ್ಡು ಕೊಡ್ತೀರಾ? ಮಕ್ಕಳ ನಾಮಕರಣ, ಸೀಮಂತ ಕಾರ್ಯಕ್ರಮಕ್ಕೂ ಸರ್ಕಾರ ದುಡ್ಡು ಕೊಡುತ್ತಾ ಹೇಗೆ? ಸರ್ಕಾರಕ್ಕೆ ಮದುವೆ ಮಾಡೋ ಚಿಂತೆ ಯಾಕೆ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು.