ಗದಗ: 2ನೇ ದಿನದ ಭಾರತ್ ಬಂದ್ ಹಿನ್ನೆಲೆಯಿಂದಾಗಿ ಜಿಲ್ಲೆಯಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಅಂತ್ಯಸಂಸ್ಕಾರಕ್ಕೆ ಹೋಗಬೇಕಿದ್ದ ಮಹಿಳೆಯರು ಕಂಗಾಲಾಗಿ ಬಸ್ ನಿಲ್ದಾಣದಲ್ಲಿ ಕುಳಿತಿದ್ದಾರೆ.
ಕಾರ್ಮಿಕರ ಮುಷ್ಕರ ಮೊದಲ ದಿನಕ್ಕಿಂತ ಎರಡನೇ ದಿನ ತುಸು ಜೋರಾಗಿದೆ. ಮುಷ್ಕರಕ್ಕೆ ಬೆಂಬಲಿಸುತ್ತಿರುವ ಪ್ರತಿಭಟನಾಕಾರರು ಹಲವು ಕೆಎಸ್ಆರ್ಟಿಸಿ ಬಸ್ಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಆದ್ದರಿಂದ ಮುಂಜಾಗೃತಾ ಕ್ರಮವಾಗಿ ಗದಗದಲ್ಲಿ ಸಾರಿಗೆ ಮೇಲಾಧಿಕಾರಿಗಳು ಬಸ್ ಸಂಚಾರ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಸಾರ್ವಜನಿಕರು, ಶಾಲಾ-ಕಾಲೇಜ್ ವಿದ್ಯಾರ್ಥಿಗಳ ಪರದಾಡುತ್ತಿದ್ದಾರೆ. ಅಲ್ಲದೆ ಜಿಲ್ಲೆಯ ಮುಳಗುಂದ ಗ್ರಾಮಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ ಹೋಗಬೇಕಾದ ಮಹಿಳೆಯರು ಬಸ್ಗಳಿಲ್ಲದೆ ಕಂಗೆಟ್ಟು ಬಸ್ ನಿಲ್ದಾಣದಲ್ಲೇ ಕುಳಿತಿದ್ದಾರೆ.
ಬಸ್ ಓಡಿಸದಿರಲು ಗದಗ ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಧಾರ ಮಾಡಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಬಸ್ ಸಂಚಾರ ಇರಬಹುದು ಎಂದು ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಬೇರೆ ದಾರಿಯಿಲ್ಲದೆ ಹಿಂದಿರುಗುತ್ತಿದ್ದಾರೆ. ಸಾರಿಗೆ ಸಿಬ್ಬಂದಿಗೆ ಈ ಕುರಿತು ಕೇಳಿದರೆ, ಸಾರಿಗೆ ಇಲಾಖೆಯ ಮೇಲಾಧಿಕಾರಿಗಳ ಆದೇಶ ಬರುವವರೆಗೂ ಬಸ್ ಸಂಚಾರ ಆರಂಭಿಸೊಲ್ಲ ಎಂದು ಉತ್ತರಿಸುತ್ತಿದ್ದಾರೆ.
ಸಾರಿಗೆ ಇಲಾಖೆ ಅವರ ದಿಢೀರ್ ನಿರ್ಧಾರದಿಂದ ಬೇರೆ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು, ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv