– 112 ಕೋಟಿ ಅನುದಾನ ಬಿಡುಗಡೆ
ಬೆಂಗಳೂರು: ಬೇಸಿಗೆಯಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಈಗಿನಿಂದಲೇ ಸಿದ್ಧವಾಗ್ತಿದೆ. ಬೇಸಿಗೆಯಲ್ಲಿ ಬರ ನಿರ್ವಹಣೆಗೆ ಅಗತ್ಯವಾದ ಅನುದಾನವನ್ನ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ ಪ್ರಕೃತಿ ವಿಕೋಪಗಳ ತುರ್ತು ಕಾರ್ಯಗಳಿಗೂ ಅನುದಾನ ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ(ಪಿಡಿ) ಅಕೌಂಟಿಗೆ ಹಣ ಜಮೆ ಮಾಡಿದೆ.
14 ಜಿಲ್ಲೆಗಳ 49 ತಾಲೂಕುಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 112 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಬಳ್ಳಾರಿಗೆ 15 ಕೋಟಿ, ದಾವಣಗೆರೆಗೆ 14 ಕೋಟಿ, ಚಿತ್ರದುರ್ಗಕ್ಕೆ 13 ಕೋಟಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರಕ್ಕೆ 10 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಂತೆ ಬೀದರ್, ಚಾಮರಾಜನಗರ, ಕೊಪ್ಪಳ, ರಾಮನಗರ, ವಿಜಯಪುರ, ರಾಯಚೂರು, ತುಮಕೂರು, ಯಾದಗಿರಿ ಜಿಲ್ಲೆಗಳಿಗೆ ತಲಾ 5 ಕೋಟಿ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಮನೆ ಮನೆಗೆ ಗಂಗಾ ನೀರು ಕುಡಿಯೋ ಯೋಜನೆಗೆ ಸರ್ಕಾರದ ಸಿದ್ಧತೆ
ಬಿಡುಗಡೆ ಮಾಡಿರುವ ಹಣದ ಖರ್ಚಿಗೂ ಕೆಲ ಷರತ್ತುಗಳನ್ನ ಸರ್ಕಾರ ವಿಧಿಸಿದೆ. ಜಿಲ್ಲಾಧಿಕಾರಿಗಳು ಈ ಷರತ್ತುಗಳ ಅನ್ವಯವೇ ಅನುದಾನ ಖರ್ಚು ಮಾಡಲು ಸೂಚನೆ ನೀಡಲಾಗಿದೆ. ಅನುದಾನ ಖರ್ಚಿಗೆ 3 ಷರತ್ತುಗಳನ್ನ ವಿಧಿಸಲಾಗಿದೆ. ಮಾರ್ಗಸೂಚಿ ಅನ್ವಯವೇ ಸಂಬಂಧಿಸಿದ ಪರಿಹಾರ ಕಾರ್ಯಗಳಿಗಾಗಿ ಅನುದಾನ ಖರ್ಚು ಮಾಡಬೇಕು. ಖರ್ಚು ಮಾಡಿದ ಅನುದಾನಕ್ಕೆ ಕಡ್ಡಾಯವಾಗಿ ಪ್ರಮಾಣ ಪತ್ರ ಸಲ್ಲಿಸಬೇಕು. ಅನುದಾನ ಬಳಕೆಯಲ್ಲಿ ಲೋಪ ಆದರೆ ಡಿಸಿಗಳೇ ನೇರ ಹೊಣೆ ಎಂಬ ಷರತ್ತು ವಿಧಿಸಿ ಅನುದಾನ ಸದ್ಬಳಕೆಗೆ ಮಾರ್ಗಸೂಚಿ ರೂಪಿಸಿದೆ. ಇದನ್ನೂ ಓದಿ: ಖಜಾನೆ ಖಾಲಿ ಎಂದವರಿಗೆ ಉತ್ತರ ಕೊಟ್ಟ ಸಿಎಂ ಬಿಎಸ್ವೈ