ದಾವಣಗೆರೆ: ಸರ್ಕಾರ ಸೇಫ್ ಆಗಿರುತ್ತದೆ. ಆದರೆ ಮುಖ್ಯಮಂತ್ರಿ ಮಾತ್ರ ಬದಲಾಗುತ್ತಾರೆ ಎಂದು ಹರಿಹರ ಕಾಂಗ್ರೆಸ್ ಶಾಸಕ ಎಸ್.ರಾಮಪ್ಪ ಮತ್ತೊಮ್ಮೆ ತಮ್ಮ ಡೈಲಾಗ್ ಹೇಳಿದ್ದಾರೆ.
ಶಾಸಕರ ರಾಜೀನಾಮೆ ಕುರಿತು ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾಗಬಹುದು. ಆದರೆ, ಮೈತ್ರಿ ಸರ್ಕಾರಕ್ಕೆ ಏನೂ ತೊಂದರೆಯಾಗುವುದಿಲ್ಲ. ಈ ಬಾರಿ ಮುಖ್ಯಮಂತ್ರಿ ಬದಲಾಗುವ ಸಂಭವವಿದ್ದು, ಯಾರಾಗುತ್ತಾರೆ ಎನ್ನುವುದು ನನಗೆ ತಿಳಿದಿಲ್ಲ. ಇದನ್ನು ಹೈ ಕಮಾಂಡ್ ತೀರ್ಮಾನಿಸಲಿದೆ. ಒಟ್ಟಿನಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ತಿಳಿಸಿದರು.
ಬಿಜೆಪಿಯವರು ಸಾಕಷ್ಟು ಬಾರಿ ಕರೆದಿರುವುದು ನಿಜ, ಇಂದು ಬೆಳಗ್ಗೆಯೂ ಸಹ ಕರೆ ಮಾಡಿದ್ದರು. ಆದರೆ, ನಾನು ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತ ಯಾವ ಪಕ್ಷಕ್ಕೂ ಬರುವುದಿಲ್ಲ ಎಂದು ಹೇಳಿದ್ದೇನೆ. ನಮ್ಮನ್ನು ನಂಬಿ ಪಕ್ಷ ಎರಡು ಬಾರಿ ಬಿ-ಫಾರಂ ನೀಡಿದೆ. ಅಲ್ಲದೆ, 64 ಸಾವಿರ ಜನ ನನಗೆ ಮತ ಹಾಕಿದ್ದಾರೆ. ಅವರ ಋಣ ತೀರಿಸಬೇಕು. ಹೀಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ ಎಂದು ಬಿಜೆಪಿಯವರಿಗೆ ತಿಳಿಸಿದ್ದೇನೆ. ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಹೋಗಿ ಪ್ರಕೃತಿ ಚಿಕಿತ್ಸೆ ಮುಗಿಸಿಕೊಂಡು ಬಂದಿದ್ದೇನೆ. ನಾಯಕರ ಸೂಚನೆಗೆ ಮೇರೆಗೆ ಇದೀಗ ಬೆಂಗಳೂರಿಗೆ ಹೊರಟಿದ್ದೇನೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಬದಲಾವಣೆಯಾಗುವ ಸಾಧ್ಯತೆ ಇದೆ. ಮೈತ್ರಿ ಸರ್ಕಾರ ಸುಭದ್ರವಾಗಿರಲಿದೆ ಎಂದು ಭಾನುವಾರ ರಾಮಪ್ಪ ವಿಶ್ವಾಸ ವ್ಯಕ್ತಪಡಿಸಿದ್ದರು. ಬಿಜೆಪಿಯವರು ನನ್ನ ಹಿಂದೆ ಬಿದ್ದಿದ್ದಾರೆ. ಈಗಾಗಲೇ ನಾನು ಪಕ್ಷ ತೊರೆಯಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದೇನೆ. ನಾನು ಪಕ್ಷ ತೊರೆಯಲು ಸಿದ್ಧ ಎಂದರೆ ಹಣ ನೀಡಲು ತಯಾರಾಗಿದ್ದಾರೆ. ಆದರೆ, ನಾನು ಪಕ್ಷ ಬಿಡುವ ವಿಷಯವೇ ಬರಲ್ಲ. ನಗರಸಭೆ ಸದಸ್ಯನಾಗಿದ್ದ ನನ್ನನ್ನು ಅಧ್ಯಕ್ಷ, ಶಾಸಕನಾಗಿ ಮತದಾರರು ಆಯ್ಕೆ ಮಾಡಿದ್ದಾರೆ. ಬೇರೆ ಪಕ್ಷಕ್ಕೆ ಹೋದ್ರೆ ನಮಗೆ ನಾವೇ ಮೋಸ ಮಾಡಿಕೊಂಡಂತೆ ಎಂದು ಹೇಳಿದ್ದರು.